ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯಾಬಲ ಇದೆ, ಹಿಂಜರಿಕೆ ಏಕೆ?

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ನರೇಂದ್ರ ಮೋದಿಯವರು ಕೇಂದ್ರ ಸರ್ಕಾರ­ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇನ್ನೇನು ಎರಡು ತಿಂಗಳಾಗಲಿವೆ.  ಈ ಅವಧಿ­ಯಲ್ಲಿ ಸರ್ಕಾರದ ಹೆಜ್ಜೆಗಳು ಬಲಪಂಥೀಯ ದಿಕ್ಕಿನತ್ತ ಸಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಎಡಪಂಥದತ್ತ ಒಂದಿನಿತು ವಾಲಿದ್ದ ನೆಹರೂ ವಿಚಾರಧಾರೆಯನ್ನು ಕೈಬಿಡುತ್ತಿರುವುದು ನಿಚ್ಚಳವಾಗಿದೆ.

ದೇಶದ ಆಡಳಿತ, ಅಭಿವೃದ್ಧಿಗೆ ಸಂಬಂಧಿಸಿ­ದಂತೆ ಈವರೆಗೆ ಮಾರ್ಗದರ್ಶಿಯಂತಿದ್ದ ಕೆಲವು ವಿಚಾರಧಾರೆಗಳಿಗಿಂತ ವಿಭಿನ್ನ ದಿಕ್ಕಿನಲ್ಲಿ ಪ್ರಸಕ್ತ ಆಡಳಿತಗಾರರ ಚಿಂತನೆ ನಡೆದಿದೆ. ಸಾರ್ವಜನಿಕ ಉದ್ದಿಮೆ ಸಂಸ್ಥೆಗಳು ಈಚೆಗೆ ದುರ್ಬಲ­ಗೊಳ್ಳುತ್ತಾ ಸಾಗಿದ್ದರೆ, ಶ್ರೀಮಂತರು ತಮ್ಮ ಪ್ರಭಾ­ವಲಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು ಮುಕ್ತ ಆರ್ಥಿಕತೆಯ ಸ್ಪಷ್ಟ ಲಕ್ಷಣವಾಗಿದೆ. ಮುಂದಿನ ದಿನಗಳಲ್ಲಿ ಆಡಳಿತದ ಮೇಲೆ ಶ್ರೀಮಂತರ ಹಿಡಿತ ಇರುವ ಸಾಧ್ಯತೆಯೇ ಹೆಚ್ಚು. ಇದೇನೇ ಇರಬಹುದು, ಆದರೆ ಎಡಪಂಥೀಯ ವಿಚಾರಧಾರೆಯ ಬಗ್ಗೆ ಒಲವು ಇರಿಸಿಕೊಂಡಿದ್ದ ಆಡಳಿತಗಾರರಿಂದ ಹಿಂದೆ ಲಾಭ ಪಡೆದಿದ್ದವರು ಮುಂದಿನ ದಿನಗಳಲ್ಲಿ ಮೋದಿ ನೇತೃತ್ವದ ಸರ್ಕಾರದ ಧೋರಣೆಗಳನ್ನು ವಿರೋಧಿಸಲಿರು­ವುದೂ ನಿಜ. ಇಂತಹ ವಿರೋಧವನ್ನು ಮೋದಿ­ಯವರು ಸೈದ್ಧಾಂತಿಕವಾಗಿ ಹೇಗೆ ಎದುರಿ­ಸು­ತ್ತಾರೆನ್ನುವುದನ್ನೂ ಕಾದು ನೋಡಬೇಕಿದೆ.

ಮೋದಿಯವರು ತಾವು ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ಬಹಳಷ್ಟು ಆಶ್ವಾಸನೆ­ಗಳನ್ನು ನೀಡಿದ್ದರು. ಪ್ರಸಕ್ತ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಹೊಸತೇನೂ ಕಾಣುತ್ತಿಲ್ಲ. ಮೋದಿಯವರು ಹಿಂದೆ ನೀಡಿದ್ದ ಭರವಸೆಗಳನ್ನು ಗಣನೆಗೆ ತೆಗೆದುಕೊಂಡರೆ ಅವರ ಸರ್ಕಾರದ ಬಜೆಟ್‌ನಲ್ಲಿ ಅದಕ್ಕೆಲ್ಲಾ ಆದ್ಯತೆ ನೀಡಲು ಸಾಧ್ಯ­ವಾಗಿಲ್ಲ ಎಂಬುದು ಗೋಚರವಾಗುತ್ತದೆ. ಅದು ಕಷ್ಟ ಸಾಧ್ಯ ಕೂಡಾ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ರಂಗರಾಜನ್‌ ಅವರ ವರದಿ­ಯೊಂದು ಈಚೆಗೆ ಬಿಡುಗಡೆಯಾಯಿತು. ಅದರ ಪ್ರಕಾರ ಹತ್ತು ಮಂದಿ ಭಾರತೀಯರಲ್ಲಿ ಮೂವರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ಇದ್ದುದಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ.

ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳನ್ನು
ಕೈ­ಗೊಳ್ಳ­ದಿರುವುದು ನಿರಾಶಾದಾಯಕವಾಗಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅದಕ್ಷತೆ­ಯಿಂದಾಗಿ ಹದಗೆಟ್ಟಿದ್ದ ಪರಿಸ್ಥಿತಿ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಸರಿಯಾಗ­ಬಹು­ದೇನೋ ಎಂಬ ನಿರೀಕ್ಷೆಯೂ ಹುಸಿ­ಯಾ­ಗಿದೆ. ಉತ್ತಮ ಅರ್ಥ ವ್ಯವಸ್ಥೆಯನ್ನು ಕಟ್ಟುವ ಬಗ್ಗೆ ಬಜೆಟ್‌ನಲ್ಲಿಯೂ ಯಾವುದೇ ಸೂಚನೆ ಕಂಡು ಬಂದಿಲ್ಲ.

ತಮಗೆ ಕಷ್ಟಸಾಧ್ಯ ಎಂದು ಕಂಡು ಬರುವ ಅಥವಾ ಸಮಸ್ಯೆಗಳು ಎದುರಾಗುವ ವಿಷಯ­ಗಳನ್ನು ದಿಟ್ಟತನದಿಂದ ನಿಭಾಯಿಸುವಲ್ಲಿ ಪ್ರಸಕ್ತ ಸರ್ಕಾರ ಹಿಂದೇಟು ಹೊಡೆಯುತ್ತಿರುವುದು ಎದ್ದು ಕಾಣುತ್ತಿದೆ. ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತವಿದ್ದರೂ ಆ ಪಕ್ಷದ ನೇತೃತ್ವದ ಸರ್ಕಾರದ ಹಿಂಜರಿಕೆಯ ನಡೆ ಏಕೆಂಬುದೇ ಅರ್ಥವಾಗುತ್ತಿಲ್ಲ. ಈ ದೇಶದ ಆಡಳಿತ ವ್ಯವಸ್ಥೆ­ಯಲ್ಲಿರುವ ನಿಧಾನಗತಿ ಅಥವಾ ‘ಕೆಂಪು ಪಟ್ಟಿ’ ಮನಸ್ಥಿತಿಯನ್ನು  ಕಿತ್ತೊಗೆಯಲು ಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಅಭಿವೃದ್ಧಿಯತ್ತ ಚುರು­ಕಿನ ಹೆಜ್ಜೆಗಳನ್ನು ಇಡಲಾಗುವುದು ಎಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಹೇಳಿದ್ದು ಇವರೇನಾ ಎಂಬ ಅನುಮಾನ ಬರುತ್ತಿದೆ. ಅಧಿಕಾರದ ಗಾದಿ ಏರಿದ ಮೇಲೆ ಈ ತೆರನಾದ ಹಿಂಜರಿಕೆ, ಸೋಮಾರಿತನ ಏಕೆ ಎಂಬುದು ಅರ್ಥವಾಗುತ್ತಿಲ್ಲ.

ಅಭಿವೃದ್ಧಿಯ ದಿಕ್ಕಿನಲ್ಲಿ ಚುರುಕಿನ  ದಾಪು­ಗಾಲು ಹಾಕಿದರೆ ಬಿಜೆಪಿ ಬಗ್ಗೆ ಸಂಕುಚಿತ ಅಭಿ­ಪ್ರಾಯ ಹೊಂದಿರುವವರ ನಂಬಿಕೆಗಳು ಬದಲಾಗ­ಬಹುದು.  ಸದ್ಯಕ್ಕೆ ಬಿಜೆಪಿ ಅಧಿಕಾರದ ಕೀಲಿ ಕೈ ಹೊಂದಿದ್ದರೂ, ಅದು ಕೋಮುವಾದಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಸೂಚಿಯ ಬಗ್ಗೆ ಆಸಕ್ತಿ ತೋರಿಲ್ಲ. ಇದೊಂದು ಸಮಾಧಾನ­ಕರ ಸಂಗತಿಯಾಗಿದೆ.

ಹಿಂದೂ ರಾಷ್ಟ್ರೀಯ ವಾದಕ್ಕೆ ಹೆಚ್ಚು ಒತ್ತು ನೀಡುವ ತಮ್ಮ ಹಿಂದಿನ ಧೋರಣೆಯಿಂದ ಈಗ ಮೋದಿಯವರು ಹಿಂದೆ ಸರಿದಿರುವುದಂತೂ ಗೊತ್ತಾಗುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಹಿಂದೂ ಪರಿಕಲ್ಪನೆಯೂ ಕುತೂಹಲಕರವೇ. ಯಾರು ಯಾವ ಧಾರ್ಮಿಕ ನಂಬಿಕೆಗಳನ್ನೇ ಹೊಂದಿರಲಿ, ಯಾವುದೇ ನಂಬಿಕೆಗಳಿಗೆ ಜೋತು ಬಿದ್ದಿರಲಿ, ಈ ದೇಶದಲ್ಲಿ ಹುಟ್ಟಿದ ಅವರೆಲ್ಲರೂ ಹಿಂದೂಗಳೇ ಎಂಬ ಪರಿಕಲ್ಪನೆ ಕುತೂಹಲಕರ.

ಆರ್‌ಎಸ್‌ಎಸ್‌ ಹೊಂದಿರುವ ಕಠಿಣ ಧೋರ­ಣೆಯ ಕಾರಣದಿಂದಾಗಿ ಬಿಜೆಪಿಯು ಆರ್‌ಎಸ್‌­ಎಸ್‌­ನಿಂದ ಸಾಕಷ್ಟು ಅಂತರ ಕಾಪಾಡಿಕೊಳ್ಳ­ಲೆತ್ನಿಸಿದ್ದು ಕೆಲವು ಸಲ ಕಂಡು ಬಂದಿದೆ. ಆದರೆ ಈಚೆಗೆ ಆರ್‌ಎಸ್‌ಎಸ್‌ ಸಂಘಟನೆಯ ಮಂದಿಯೇ  ಬಿಜೆಪಿಯೊಳಗೆ ಸೇರಿಕೊಳ್ಳುತ್ತಿರು­ವುದು ಗಮನಾರ್ಹ.

ಮೋದಿಯವರು ಈಚೆಗೆ ಶ್ರೀನಗರಕ್ಕೆ ಭೇಟಿ ನೀಡಿದಾಗ ಅವರ ಕೆಲವು ಅಭಿಪ್ರಾಯಗಳು ಅಚ್ಚರಿ ಮೂಡಿಸಿದವು. ಅವರು ಅಲ್ಲಿ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬ ಅರ್ಥದಲ್ಲಿ ಮಾತನಾಡಲೇ ಇಲ್ಲ. ತಾವು ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರತಿಪಾದಿಸಿದ ಮಾನವತಾ­ವಾದದಲ್ಲಿ ನಂಬಿಕೆ ಹೊಂದಿರುವುದಾಗಿ ಪದೇ ಪದೇ ಹೇಳಿದರು. ಶ್ರೀನಗರಕ್ಕೆ ಅವರು ಭೇಟಿ ನೀಡಿದಾಗ ಅಲ್ಲಿ ಹರತಾಳಕ್ಕೆ ಕರೆ ನೀಡಲಾಗಿತ್ತು. ಅಂತಹದ್ದೊಂದು ಪರಿಸ್ಥಿತಿ ಕೂಡಾ ಮೋದಿ ಅವರನ್ನು ಒಂದಿಷ್ಟೂ ಕೆರಳಿಸಲಿಲ್ಲ. ಅತ್ಯಂತ ಸಂಯಮ ಮತ್ತು ಶಾಂತ ಚಿತ್ತದಿಂದಲೇ ಅವರು ಅಲ್ಲಿ ಮಾತನಾಡಿದರು.

ಅದೇನೇ ಇದ್ದರೂ, ನರೇಂದ್ರ ಮೋದಿಯವರ ವ್ಯಕ್ತಿತ್ವದ ಬಗ್ಗೆ ಹೊರಗೆ ಇರುವ ಚಿತ್ರಣವೇ ಅವರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ  ಮುಸ್ಲಿಮರಿದ್ದಾರೆ. ಈ ಸಮುದಾಯದ ವಿರೋಧಿ ಎಂಬುದಾಗಿಯೇ ಮೋದಿ­ಯವರು ಬಿಂಬಿತರಾಗಿದ್ದಾರೆ. 

ಮುಸಲ್ಮಾ­ನ­ರನ್ನು  ಅಭದ್ರತೆ ಕಾಡುತ್ತಿದೆ ಎಂಬ ಮಾತನ್ನು ಅಲ್ಲಗಳೆಯುವಂತೇನೂ ಇಲ್ಲ. 2002ರಲ್ಲಿ ಗುಜ­ರಾತಿನಲ್ಲಿ ನಡೆದ ಮುಸ್ಲಿಂ ವಿರೋಧಿ ಗಲಭೆಗಳ ಸಾವು–ನೋವು ನೆನಪು ಇವತ್ತಿಗೂ ಈ ದೇಶದ ಮುಸಲ್ಮಾನರನ್ನು ಕಾಡುತ್ತಿದೆ. ಗುಜರಾತ್‌ ಹೈಕೋರ್ಟ್‌ನ ಕಣ್ಗಾವಲಲ್ಲಿ ವಿಶೇಷ ತನಿಖಾ ತಂಡವು ನಡೆಸಿದ ತನಿಖೆಯಲ್ಲಿ ನರೇಂದ್ರ ಮೋದಿ­ಯವರು ಆ ಗಲಭೆಗೆ ಸಂಬಂಧಿಸಿದಂತೆ ನಿರ್ದೋಷಿ ಎಂಬುದಾಗಿ ಸಾಬೀತಾಗಿದೆ. ಆದರೂ ಜನರ ಮನಸ್ಸಿನಲ್ಲಿ ಉಳಿದು ಹೋಗಿರುವ ಮೋದಿ ಕುರಿತಾದ ಆ ಕರಾಳ ನೆನಪನ್ನು ಅಳಿಸ­ಲಾಗುತ್ತಿಲ್ಲ. ಈಗ ಪ್ರಧಾನಿ ಪಟ್ಟದಲ್ಲಿರುವ ಮೋದಿ­ಯವರು ಅಲ್ಪಸಂಖ್ಯಾತರ ವಿಶ್ವಾಸ ಗಳಿಸಲು ಬಹಳ ಪ್ರಯತ್ನ ಪಡಲೇಬೇಕಾಗಿದೆ.

ಮೂರು ಇಸ್ಲಾಂ ದೇಶಗಳನ್ನು ಹೊಂದಿರುವ ಸಾರ್ಕ್‌ ದೇಶಗಳ ಗುಂಪಿನಲ್ಲಿ ಮೋದಿಯವರು ವಿಶ್ವಾಸ ಗಳಿಸಲೆತ್ನಿಸಿರುವುದು ಅರ್ಥಪೂರ್ಣ ಸಂಗತಿ­ಯಾಗಿದೆ. ಇದು ಅವರು ಸರಿದಿಕ್ಕಿನಲ್ಲಿ ಇಟ್ಟ ಹೆಜ್ಜೆಯಾಗಿದೆ. ವಾಜಪೇಯಿಯವರು ಈ ನೆಲದಲ್ಲಿ ಅಲ್ಪಸಂಖ್ಯಾತರ ಮನಗೆಲ್ಲುವಲ್ಲಿ ಯಶಸ್ವಿಯಾದುದನ್ನು ಗಣನೆಗೆ ತೆಗೆದುಕೊಂಡರೆ ಮೋದಿಯವರು ಆ ಎತ್ತರಕ್ಕೆ ಏರಲು ಇನ್ನೂ ಬಹಳ ದೂರ ಸಾಗಬೇಕಿದೆ.

ಪ್ರಸಕ್ತ ಮೋದಿ ನೇತೃತ್ವದ ಆಡಳಿತದಲ್ಲಿ ಕಣ್ಣು ಕುಕ್ಕುವಂತಹ ಲೋಪ ನನಗೆ ಕಾಣಿಸುತ್ತಿಲ್ಲ. ಚುನಾವಣಾ ಫಲಿತಾಂಶ ಹಲವು ಏಳುಬೀಳು­ಗಳನ್ನು ನೀಡಿದೆ. ಈ ದೇಶದ ದೊಡ್ಡ ರಾಜಕೀಯ ಪಕ್ಷ ಮತ್ತು ಜನಪ್ರಿಯ ಮುಖಂಡರು ನೆಲ ಕಚ್ಚಿದ್ದಾರೆ. ಕಾಂಗ್ರೆಸ್‌ ಪಕ್ಷ ಇಂತಹದ್ದೊಂದು ವಾಸ್ತವಕ್ಕೆ ಹೊಂದಿಕೊಳ್ಳಲು ಪಡುತ್ತಿರುವ ಪಡಿ­ಪಾಟಲು ಹೇಳತೀರದು. ಸತತವಾಗಿ ದಶಕದ ಕಾಲ ಅಧಿ­ಕಾರದ ಗದ್ದುಗೆಯಲ್ಲಿ ಕುಳಿತಿದ್ದವರು ಈಗ ಏಕಾ­ಏಕಿ ಕೆಳಗೆ ಉರುಳಿದ್ದಾರೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಇವತ್ತು ಕಾಂಗ್ರೆಸ್‌ ಪಕ್ಷದ ಸಂಸದರ ಸಂಖ್ಯೆ ಕೇವಲ 44. ತಾನು ಎಡವಿರುವುದು ಎಲ್ಲಿ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಲು ಕಾಂಗ್ರೆಸ್‌ ಪಕ್ಷಕ್ಕೆ ಇದು ಸಕಾಲ.

ಲೋಕಸಭೆಯಲ್ಲಿ ಹತ್ತನೇ ಒಂದರಷ್ಟು ಸದಸ್ಯ ಬಲವಾದ 55ನ್ನು ಪಡೆಯಲು ವಿಫಲವಾಗಿರುವ ಕಾಂಗ್ರೆಸ್‌ ಪಕ್ಷ ತನ್ನ ಸೋಲನ್ನು ಒಪ್ಪಿಕೊಳ್ಳಲೇ ಬೇಕು. ಇಂತಹ ಸ್ಥಿತಿ ನಿರ್ಮಾಣವಾಗಿದ್ದು ಇದೇ ಮೊದಲೇನಲ್ಲ. ಹಿಂದೆ ತೆಲುಗುದೇಶಂ ಅತಿ­ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅದಕ್ಕೆ ಹತ್ತನೇ ಒಂದರಷ್ಟು ಸಂಖ್ಯಾಬಲ ದಕ್ಕಿರಲಿಲ್ಲ. ಆಗಲೂ ಇಂತಹ ಪರಿಸ್ಥಿತಿ ಎದುರಾಗಿತ್ತು. ಕಾಂಗ್ರೆಸ್‌ ಪಕ್ಷ ಈ ಅಂಶವನ್ನೇ ದೊಡ್ಡದು ಮಾಡಿ ಗದ್ದಲ ಎಬ್ಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಂಗ್ರೆಸ್‌ ಗಂಭೀರವಾಗಿರಬೇಕಾದ ಅಗತ್ಯವಿದೆ.

ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದವರೆಲ್ಲರೂ ಮೋದಿ ಅವರತ್ತ ನೋಡುತ್ತಿದ್ದಾರೆ. ಚುನಾವಣೆಯ ವೇಳೆ ಹತ್ತು ಹಲವು ಭರವಸೆಗಳನ್ನು ನೀಡಿದ್ದ ಮೋದಿ­ಯವರು ಅದನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಮತದಾರರದ್ದಾಗಿದೆ.  ಮೋದಿಯವರ ಬಳಗ ಕೇಂದ್ರ­ದಲ್ಲಿ ಅಧಿಕಾರ ವಹಿಸಿಕೊಂಡು ಇನ್ನೇನು ಎರಡು ತಿಂಗಳು ಆಗಲಿವೆ.

ಒಂದು ಸರ್ಕಾರದ ಸಾಧನೆಗಳನ್ನು ಒರೆಗೆ ಹಚ್ಚಲು ಇಷ್ಟು ಅವಧಿ ತೀರಾ ಕಡಿಮೆ ಎಂದುಕೊಳ್ಳೋಣ. ಇನ್ನೂ ಐವತ್ತು ದಿನಗಳ ಕಾಲ ಕಾಯೋಣ. ಮೋದಿ­ಯವರು ಮತ್ತು ಅವರ ಸಂಪುಟದ ಕಾರ್ಯ­ನಿರ್ವಹಣೆಯನ್ನು ಆಗ ಒರೆಗೆ ಹಚ್ಚೋಣ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT