ತಾನು ಭಾರತೀಯನೆಂದು ಹೆಮ್ಮೆಯಿಂದ ಹೇಳಿಕೊಂಡ ಮೊದಲ ಸೂಫೀ ಸಂತ, ಕವಿ ಅಮೀರ್ ಖುಸ್ರೊ. ಹಲವು ಅದ್ಭುತ ಸಾಮರ್ಥ್ಯಗಳನ್ನು ಹೊಂದಿ, ಸಮನ್ವಯಗೊಳಿಸಿ ಬದುಕನ್ನು ಶ್ರೀಮಂತಗೊಳಿಸಿದ ಸಂತ ಈತ. ಖುಸ್ರೊ, ಸಂಗೀತಗಾರನಾಗಿ, ಕವಿಯಾಗಿ, ಸಂತನಾಗಿ, ಆದರ್ಶ ಶಿಷ್ಯನಾಗಿ ಮಾಡಿದ ಸಾಧನೆಗಳು ದಂತಕಥೆಗಳಾಗಿವೆ.
ಕ್ರಿ.ಶ. ೧೨೫೩ ರಲ್ಲಿ ಉತ್ತರ ಪ್ರದೇಶದ ಇಟಾ ಗ್ರಾಮದಲ್ಲಿ ಹುಟ್ಟಿದರು ಅಬುಲ್ ಹಸನ್ ಅಮೀರ್ ಖುಸ್ರೊ. ಅವರು ತಮ್ಮ ಹದಿನೆಂಟನೆಯ ವಯಸ್ಸಿಗೇ ಮೊದಲ ಕವನ ಸಂಕಲನ ಹೊರತಂದರು. ಇಪ್ಪತ್ತೈದನೆಯ ವಯಸ್ಸಿಗೆ ವಸ್ತೂಲ್ ಹಯಾತ್ ಎಂಬ ದೀರ್ಘಕಾವ್ಯವನ್ನು ಜಗತ್ತಿಗೆ ನೀಡಿದರು. ರಾಜನ ಆಸ್ಥಾನದಲ್ಲಿ ಕವಿಯಾಗಿದ್ದ ಖುಸ್ರೊ ಒಂದು ಕಾಲದಲ್ಲಿ ಸೈನಿಕನಾಗಿ ಸೈನ್ಯವನ್ನು ಸೇರಿ ಯುದ್ಧ ಮಾಡಿದ್ದೂ ಉಂಟು. ಅವರಿಗೆ ತಮ್ಮ ಗುರುಗಳಾದ ಷೇಖ್ ನಿಜಾಮುದ್ದೀನ್ರ ಮೇಲೆ ಅಪಾರ ಗೌರವ. ಅದೇ ಗೌರವದಿಂದ ಒಂದು ಸುಂದರವಾದ ಕಾವ್ಯವನ್ನು ರಚಿಸಿ ಗುರುಗಳಿಗೆ ಅರ್ಪಿಸಿದಾಗ ತುಂಬ ಸಂತೋಷಗೊಂಡ ಗುರು, ‘ನಿನಗೆ ಏನು ಬೇಕೋ ಕೇಳಿಕೋ’ ಎಂದರು. ಆಗ ಅಮೀರ್ ಖುಸ್ರೊ ಕೇಳಿದ್ದು ಆಶ್ಚರ್ಯವೆನ್ನಿಸುತ್ತದೆ.
‘ನನಗೆ ಸಿಹಿ ಮತ್ತು ನೋವು ಇವೆರಡರ ಅನುಭವವೂ ಬೇಕು’ ಎಂದ ಖುಸ್ರೊ. ಸಾಮಾನ್ಯವಾಗಿ ಏನನ್ನಾದರೂ ಕೇಳಿಕೊಳ್ಳುವ ಅವಕಾಶ ದೊರಕಿದರೆ ನಾವೆಲ್ಲ ನಮಗೆ ಒಳ್ಳೆಯದಾಗುವುದನ್ನೇ, ಲಾಭದಾಯಕವಾಗುವುದನ್ನೇ ಕೇಳಿಕೊಳ್ಳುತ್ತೇವೆ. ಸಿಹಿ ಕೇಳುವುದೇನೋ ಸರಿಯೇ. ಆದರೆ ಯಾರು ತಾನೇ ನೋವಿನ ಅನುಭವ ಬೇಡುತ್ತಾರೆ? ಗುರುಗಳಿಗೆ ಶಿಷ್ಯನ ಮನಸ್ಸಿನ ಸ್ಥಿತಿ ಚೆನ್ನಾಗಿ ತಿಳಿದಿತ್ತು. ಅವರು ನಕ್ಕು ಹೇಳಿದರು, ‘ಹಾಗೆಯೇ ಆಗಲಿ. ನನ್ನ ಹಾಸಿಗೆಯ ಪಕ್ಕದಲ್ಲಿ ಸಕ್ಕರೆಯ ಪುಡಿಕೆ ಇದೆ. ಅದರಲ್ಲಿ ಒಂದು ಚಿಟಿಕೆಯನ್ನು ತೆಗೆದುಕೊಂಡು ತಿನ್ನು’. ಖುಸ್ರೊ ಹಾಗೆಯೇ ಮಾಡಿದ. ಗುರುಗಳು ಮತ್ತೆ ಹೇಳಿದರು. ‘ನೀನು ಕೇಳಿದಂತೆಯೇ ಆಗುತ್ತದೆ. ನಿನ್ನ ಜೀವನದಲ್ಲಿ ಸಾಕಷ್ಟು ನೋವು ಬರುತ್ತದೆ. ಅದನ್ನು ಬೇಜಾರಿಲ್ಲದೆ ಅನುಭವಿಸು. ಈ ನೋವಿನ ಅನುಭವ ನಿನ್ನ ಕಾವ್ಯಕ್ಕೆ, ಸಂಗೀತಕ್ಕೆ ಒಂದು ವಿಶೇಷ ಆಳವನ್ನು ತರುತ್ತದೆ. ಅದನ್ನು ಕೇಳಿದವರಿಗೆ ಸಂತೋಷದ ಸಿಹಿ ದೊರಕುತ್ತದೆ’.
ಖುಸ್ರೊ ತಮ್ಮ ಜೀವನದಲ್ಲಿ ಎಂದಿಗೂ ಯಾರನ್ನೂ ದ್ವೇಷಿಸಲಿಲ್ಲ. ವಿಜಾತಿ ದ್ವೇಷವಾಗಲಿ, ಸ್ವಜಾತಿ ಮೋಹವಾಗಲೀ ಅವರ ಬಳಿ ಸುಳಿಯಲಿಲ್ಲ. ತಾವು ಸದಾಕಾಲ ನೋವುಂಡು ಅದರ ಸವಿಯನ್ನು ಜನಕ್ಕೆ ಬಡಿಸಿದರು. ಅವರು ಬರೆದ ಒಂದು ಪಾರ್ಸೀ ಕವನದ ಕೆಲವು ಸಾಲುಗಳು ಅವರ ಜೀವನದೃಷ್ಟಿಯನ್ನು ಸ್ವಷ್ಟವಾಗಿ ತಿಳಿಸುತ್ತವೆ.
ನಾನು ಪ್ರೇಮದ ಅನೇಕ ದೇವತೆಗಳ ಆರಾಧಕ,
ನನಗೆ ಮುಸ್ಲಿಂ ಸಿದ್ಧಾಂತಗಳು ಬೇಕಿಲ್ಲ,
ನನ್ನ ನರಗಳು ತಂತಿಗಳಂತೆ ಬಲಿಷ್ಠವಾಗಿರುವುದರಿಂದ
ಹಿಂದೂಗಳ ಜನಿವಾರವೂ ಬೇಕಿಲ್ಲ.
ಖುಸ್ರೊ ಅವರ ಗುರುಪ್ರೇಮ ಅನ್ಯಾದೃಶವಾದದ್ದು. ಕ್ರಿ.ಶ ೧೩೨೫ ರಲ್ಲಿ ಅವರ ಗುರು ಹಜ್ರತ್ ನಿಜಾಮುದ್ದೀನರು ದೇಹತ್ಯಾಗ ಮಾಡಿದರು. ದುಃಖದಿಂದ ಕುಸಿದುಹೋದ ಖುಸ್ರೊ ಕಪ್ಪು ಬಟ್ಟೆ ಧರಿಸಿ ಗುರುವಿನ ಸಮಾಧಿಯ ಬಳಿಯಲ್ಲೇ ಕುಳಿತರು. ಆರು ತಿಂಗಳಿನ ನಂತರ ಅಲ್ಲಿಯೇ ಪ್ರಾಣ ಬಿಟ್ಟರು. ಅವರ ಸಮಾಧಿಯನ್ನು ಗುರುಗಳ ಸಮಾಧಿಯ ಪಕ್ಕದಲ್ಲೇ ಮಾಡಲಾಗಿದೆ. ಎಂಟು ನೂರು ವರ್ಷಗಳ ಹಿಂದೆಯೇ ಕೋಮು ಸೌಹಾರ್ದ ಸಾರಿದ ಮತ್ತು ಅದರಂತೆಯೇ ನಡೆದು ತೋರಿದ ಅಮೀರ್ ಖುಸ್ರೊ ಅವರಂಥ ಧಾರ್ಮಿಕ ನಾಯಕರು, ಸಂಗೀತಗಾರರು, ಕವಿಗಳು ನಮಗೆ ಈಗ ಜಗತ್ತಿನಾದ್ಯಂತ ಬೇಕಾಗಿದ್ದಾರೆ. ಒಡೆದ ಸಮಾಜವನ್ನೂ, ಒಡೆದ ಮನಗಳನ್ನು ಬೆಸೆಯಲು ಅಂಥ ಮಹಾನುಭಾವರ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.