ಲೋಕಸಭೆ ಚುನಾವಣೆ ಸೋಲಿನಿಂದಾದರೂ ಕಾಂಗ್ರೆಸ್ ಪಾಠ ಕಲಿಯಬೇಕಿತ್ತು. ಕಳೆದ ಎರಡು ತಿಂಗಳಲ್ಲಿ ಅದು ತುಳಿಯುತ್ತಿರುವ ಹಾದಿ ಗಮನಿಸಿದರೆ ಇನ್ನೂ ಬುದ್ಧಿ ಬಂದಂತೆ ಕಾಣುವುದಿಲ್ಲ. 130 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಪ್ರಮುಖ ರಾಜಕೀಯ ಪಕ್ಷ ಹೀನಾಯ ಸ್ಥಿತಿಗೆ ಬಂದು ನಿಂತಿದೆ. ಸೋತು– ಸೊರಗಿರುವ ಕಾರ್ಯಕರ್ತರಿಗೆ ನೈತಿಕ ಶಕ್ತಿ ತುಂಬಬೇಕಾದ ಹೈಕಮಾಂಡ್ ಅದಕ್ಷತೆ, ಅಸಹಾಯಕತೆ, ರಾಜಕೀಯ ಗೊಂದಲಗಳಿಗೆ ಸಿಕ್ಕಿ ಒದ್ದಾಡುತ್ತಿದೆ. ಹಳೇ ಅನುಭವಗಳನ್ನು ಕಣ್ಣ ಮುಂದಿಟ್ಟುಕೊಂಡು ಮುನ್ನಡೆಯಬೇಕಾದ ಪಕ್ಷ ಮತ್ತೆ ಮತ್ತೆ ಮುಗ್ಗರಿಸುತ್ತಿದೆ.
ಫಲಿತಾಂಶ ಹೊರಬಂದು ಎರಡು ತಿಂಗಳು ಕಳೆದರೂ ಸೋಲಿನ ಹೊಣೆಯನ್ನು ಯಾರೂ ಹೊರಲು ತಯಾರಿಲ್ಲ. ಈ ಹೊಣೆ ಹೊರಬೇಕಾಗಿದ್ದು ಯಾರು? ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ‘ನಂಬರ್ ಟು’ ಸ್ಥಾನದಲ್ಲಿರುವ ಉಪಾಧ್ಯಕ್ಷ ರಾಹುಲ್ ಗಾಂಧಿ. ಪ್ರಚಾರದ ನೇತೃತ್ವ ವಹಿಸಿದ್ದ ‘ಯುವರಾಜ’ನೇ ಜವಾಬ್ದಾರಿ ಹೊರಬೇಕಾಗಿದ್ದು ಧರ್ಮ. ತೋರಿಕೆಗೆ ಮಾಧ್ಯಮಗಳ ಮುಂದೆ ನೈತಿಕ ಹೊಣೆ ಹೊರುವುದಾಗಿ ಹೇಳಿ ತಾಯಿ– ಮಗ ಕೈತೊಳೆದುಕೊಂಡಿದ್ದಾರೆ. ಸೋಲಿಗೆ ಕಾರಣ ಹುಡುಕಲು ‘ಆಂಟನಿ ಸಮಿತಿ’ ರಚಿಸಿದ್ದಾರೆ. ಈ ಸಮಿತಿಯಿಂದ ಎಂಥಾ ವರದಿ ನಿರೀಕ್ಷಿಸಲು ಸಾಧ್ಯ?
ಜನರ ಕಣ್ಣೊರೆಸಲು ಕಾಂಗ್ರೆಸ್ ಕಾರ್ಯಕಾರಿಣಿ, ಚುನಾವಣೆ ಸೋಲಿನ ವಿಶ್ಲೇಷಣೆ ಮಾಡಿದೆ. ಅಲ್ಲೂ ಒಂದು ನಾಟಕ ನಡೆದಿದೆ. ಸೋನಿಯಾ ಮತ್ತು ರಾಹುಲ್ ತಮ್ಮ ಸ್ಥಾನಗಳನ್ನು ತ್ಯಜಿಸುವ ಮಾತುಗಳನ್ನು ಆಡಿದ್ದಾರೆ. ಅವರ ರಾಜೀನಾಮೆ ಒಪ್ಪಿಕೊಳ್ಳುವ ಎದೆಗಾರಿಕೆಯಾದರೂ ಯಾರಿಗಿದೆ? ಅಷ್ಟಕ್ಕೂ ಮೀರಿ ಗಾಂಧಿ ಕುಟುಂಬದ ಸದಸ್ಯರು ರಾಜೀನಾಮೆ ಕೊಟ್ಟರೆ ಕಾಂಗ್ರೆಸ್ ಏನಾಗಬಹುದು? ಸೋನಿಯಾ ಮತ್ತು ರಾಹುಲ್ ನಾಯಕತ್ವದಲ್ಲೇ ಪಕ್ಷ ಹೀನಾಯ ಸ್ಥಿತಿ ತಲುಪಿದೆ. ಇನ್ನು ಅವರಿಲ್ಲದ ಕಾಂಗ್ರೆಸ್ ಉಳಿಯುವುದೇ? ಈ ಸತ್ಯ ಅರಿತಿರುವ ಪಕ್ಷದ ನಾಯಕರು ಅವರ ಆಶ್ರಯದಲ್ಲೇ ಪಕ್ಷ ಮುನ್ನಡೆಯಬೇಕೆಂದು ಬಯಸುತ್ತಿದ್ದಾರೆ.
ಅನಾರೋಗ್ಯದಿಂದ ನರಳುತ್ತಿರುವ ಕಾಂಗ್ರೆಸ್ ಅಧ್ಯಕ್ಷರು ಮಗನಿಗೆ ಜವಾಬ್ದಾರಿ ವಹಿಸಲು ಕಾದಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲ ರಾಹುಲ್ ಅವರನ್ನು ಮುಂದೆ ಬಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರಿನ್ನೂ ತಯಾರಾದಂತಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಪಕ್ಷ ಕಟ್ಟಬೇಕಾದ ಕಾಂಗ್ರೆಸ್ ಉಪಾಧ್ಯಕ್ಷ ಹಿಂದೆ ಹಿಂದೆ ಸರಿಯುತ್ತಿದ್ದಾರೆ. ಸೋಲಿನಿಂದ ಕಂಗಾಲಾಗಿರುವ ನಾಯಕರು ಮತ್ತು ಕಾರ್ಯಕರ್ತರ ಭಾವನೆಗಳು ಅವರಿಗೆ ಅರ್ಥವಾದಂತಿಲ್ಲ. ಅರ್ಥವಾಗಿದ್ದರೆ ಅವರು ಬದಲಾಗುತ್ತಿದ್ದರು.
ಚುನಾವಣೆ ಬಳಿಕವೂ ರಾಹುಲ್ ಬದಲಾಗಿಲ್ಲ. ರಾಜಕಾರಣವನ್ನು ಅವರಿನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ರಾಜಕೀಯಕ್ಕಿಂತಲೂ ಅವರಿಗೆ ‘ಮಹತ್ವದ ಕೆಲಸ’ ಬೇರೆ ಇದ್ದಿರಬಹುದು.
ಲೋಕಸಭೆಯಲ್ಲಿ ರಾಹುಲ್ ಅವರೇ ಪಕ್ಷದ ನಾಯಕತ್ವ ವಹಿಸಿಕೊಳ್ಳಬೇಕೆಂಬ ಒತ್ತಡ ಇನ್ನೂ ಇದೆ. ಅನೇಕ ಮಂದಿ ಬಹಿರಂಗವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷರಿಗೆ ಹೊಣೆಗಾರಿಕೆ ಇಲ್ಲದ ಅಧಿಕಾರ ಬೇಕು. ಹೀಗಾಗಿ ಕೆಳಮನೆ ನಾಯಕತ್ವದ ಜವಾಬ್ದಾರಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲಿಗೆ ಬಿದ್ದಿದೆ. ಪಕ್ಷ ನಿಷ್ಠೆ, ಹಿರಿತನ ಮತ್ತು ಅನುಭವ ಎಲ್ಲ ದೃಷ್ಟಿಯಿಂದಲೂ ಖರ್ಗೆ ನಾಯಕತ್ವಕ್ಕೆ ಸಮರ್ಥರು. ಲೋಕಸಭೆಯ ಅಧಿವೇಶನದ ಆರಂಭದಲ್ಲೇ ಅವರು ಇದನ್ನು ನಿರೂಪಿಸಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಮೆಚ್ಚುವಂತೆ ಮಾತನಾಡಿದ್ದಾರೆ.
ಈಗ ಪ್ರಶ್ನೆ ಇರುವುದು ಖರ್ಗೆ ಅವರ ನಾಯಕತ್ವ ಕುರಿತಲ್ಲ. ರಾಹುಲ್ ಸಾಮರ್ಥ್ಯದ ಬಗೆಗೆ. ಪಕ್ಷ ಮುನ್ನಡೆಸುವ ತಾಕತ್ತು ತಮಗಿದೆ ಎಂದು ಕಳೆದ ಹತ್ತು ವರ್ಷಗಳಲ್ಲಿ ಎಂದೂ ಅವರು ತೋರಿಸಿಲ್ಲ. ರಾಹುಲ್ ಸಕ್ರಿಯ ರಾಜಕಾರಣಕ್ಕೆ ಬಂದು 10 ವರ್ಷಗಳು ಕಳೆದಿವೆ. ಅವರು ಮುಂದೆ ನಿಂತು ಹೋರಾಡಿದ ಚುನಾವಣೆಯಲ್ಲಿ ಸೋಲಾಗಿದೆ. ಇನ್ನು ಮೂರು ತಿಂಗಳಲ್ಲಿ ಮತ್ತೊಂದು ಚುನಾವಣೆ ಬರುತ್ತಿದೆ. ಮಹಾರಾಷ್ಟ್ರ, ಹರಿಯಾಣ, ಜಮ್ಮು– ಕಾಶ್ಮೀರ, ಜಾರ್ಖಂಡ್ ವಿಧಾನಸಭೆಗಳಿಗೆ ಅಕ್ಟೋಬರ್ ಆಸುಪಾಸು ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಮತ್ತೂ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ರಾಹುಲ್ ಈ ಚುನಾವಣೆಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಆತಂಕ ಕಾಂಗ್ರೆಸ್ ನಾಯಕರಿಗಿದೆ.
ಚುನಾವಣೆಗೆ ಮೊದಲೇ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಬಂಡಾಯ ಎದುರಿಸುತ್ತಿದೆ. ಮಹಾರಾಷ್ಟ್ರ, ಹರಿಯಾಣ, ಅಸ್ಸಾಂ ಮುಖ್ಯಮಂತ್ರಿಗಳ ಮೇಲೆ ಕೆಲವು ನಾಯಕರು ಮುಗಿಬಿದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಪೃಥ್ವಿರಾಜ್ ಚವಾಣ್ ವಿರುದ್ಧ ನಾರಾಯಣ ರಾಣೆ ಕತ್ತಿ ಮಸೆಯುತ್ತಿದ್ದಾರೆ. ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಕಾಲನ್ನು ಚೌಧರಿ ಬೀರೇಂದ್ರ ಸಿಂಗ್ ಎಳೆಯುತ್ತಿದ್ದಾರೆ. ಹೀಮಂತ ಬಿಶ್ವಾಸ್ ಶರ್ಮ, ಅಸ್ಸಾಂ ಮುಖ್ಯಮಂತ್ರಿ ಗೊಗೊಯ್ ವಿರುದ್ಧ ಬಂಡಾಯವೆದ್ದಿದ್ದಾರೆ. ಈ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ವಿಷಯದಲ್ಲಿ ಸೋನಿಯಾ, ರಾಹುಲ್ ನಡುವೆ ಹೊಂದಾಣಿಕೆ ಇದ್ದಂತಿಲ್ಲ. ಗೊಗೊಯ್ ಮತ್ತು ಚವಾಣ್ ಅವರ ಬದಲಾವಣೆಗೆ ಕಾಂಗ್ರೆಸ್ ಉಪಾಧ್ಯಕ್ಷರು ಸುತರಾಂ ಒಪ್ಪುತ್ತಿಲ್ಲ.
ಮಹಾರಾಷ್ಟ್ರ, ಹರಿಯಾಣ ಹಾಗೂ ಅಸ್ಸಾಂ ಚುನಾವಣೆ ಸೋಲನ್ನು ಮೂವರು ಮುಖ್ಯಮಂತ್ರಿಗಳ ತಲೆಗೆ ಕಟ್ಟಲು ಅವರ ರಾಜಕೀಯ ವಿರೋಧಿಗಳು ಹೊರಟಿದ್ದಾರೆ. ಇವರ ನಾಯಕತ್ವದಲ್ಲೇ ವಿಧಾನಸಭೆ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಮತ್ತೊಂದು ಹೀನಾಯ ಸೋಲು ನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ರಾಜ್ಯಗಳ ರಾಜಕೀಯ ಬಿಕ್ಕಟ್ಟನ್ನು ಪರಿಹಾರ ಮಾಡಲು ಹೈಕಮಾಂಡ್ ವಿಫಲವಾಗಿದೆ. ಮುಖ್ಯಮಂತ್ರಿಗಳನ್ನು ಬದಲಾಯಿಸಲಿ ಅಥವಾ ಬಿಡಲಿ, ಏನಾದರೂ ಖಚಿತ ತೀರ್ಮಾನ ಮಾಡಲಿ. ಚುನಾವಣೆ ಸಮೀಪಿಸುತ್ತಿದ್ದರೂ ಬಿಕ್ಕಟ್ಟು ಬಗೆಹರಿಸದಿದ್ದರೆ ಹೇಗೆ? ಎನ್ನುವುದು ಕಾಂಗ್ರೆಸ್ ನಾಯಕರ ಆತಂಕ.
ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ. ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಲೋಕಸಭೆ ಚುನಾವಣೆ ಗೆದ್ದಿರುವುದರಿಂದ ಸಹಜವಾಗಿ ಅವರ ಉತ್ಸಾಹ– ಹುಮ್ಮಸ್ಸು ಇಮ್ಮಡಿಗೊಂಡಿದೆ. ನೈತಿಕವಾಗಿಯೂ ಉತ್ತಮ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ತಕ್ಷಣ ಸಮಸ್ಯೆ ಪರಿಹರಿಸಿ, ಚುನಾವಣೆಗೆ ಸಜ್ಜಾಗಬೇಕಿದೆ. ಮಿತ್ರ ಪಕ್ಷಗಳ ಜತೆಗೂ ಕಾಂಗ್ರೆಸ್ ಸಂಬಂಧ ಹದಗೆಟ್ಟಿದೆ. ಜಮ್ಮು– ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಜತೆ ಸಂಬಂಧ ಕಿತ್ತುಹೋಗಿದೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿ ಜತೆ ಶೀತಲ ಸಮರ ನಡೆಯುತ್ತಿದೆ. ವಿಧಾನಸಭೆ ಚುನಾವಣೆವರೆಗೂ ಕಾಂಗ್ರೆಸ್– ಎನ್ಸಿಪಿ ಮೈತ್ರಿ ಮುಂದುವರಿಯುವ ಕುರಿತು ಅನುಮಾನವಿದೆ.
ಬಿಹಾರದಲ್ಲಿ ನಿತೀಶ್ಕುಮಾರ್ ಮತ್ತು ಲಾಲುಪ್ರಸಾದ್ ರಾಜಕೀಯವಾಗಿ ಹತ್ತಿರವಾಗಿದ್ದಾರೆ. ಮುಂದಿನ ವರ್ಷ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕೈ ಪಾಳೆಯ ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎನ್ನುವುದು ಉತ್ತರ ಕಾಣದ ಪ್ರಶ್ನೆ. ಕಾಂಗ್ರೆಸ್ ಹಿಂದೆಯೂ ಸೋತಿದೆ. ಇಂದಿರಾ ಗಾಂಧಿ ಕಾಲದಲ್ಲೂ ಹಿನ್ನಡೆ ಅನುಭವಿಸಿತ್ತು. ರಾಜಕೀಯ ವಿರೋಧಿಗಳಿಂದ ಪುನಃ ಅಧಿಕಾರ ಕಸಿದುಕೊಳ್ಳಲು ಅವರು ಯಶಸ್ವಿಯಾಗಿದ್ದರು. ರಾಜೀವ್ ಗಾಂಧಿ ಸಮಯದಲ್ಲೂ ಪಕ್ಷ ಸೋತಿತ್ತು. ರಾಹುಲ್ ಈಗಿನ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಶಕ್ತಿ ತುಂಬುವುದು ಕಷ್ಟದ ಕೆಲಸವೇನಲ್ಲ. ಅದಕ್ಕೆ ಬದ್ಧತೆ ಬೇಕು.
ಕಾಂಗ್ರೆಸ್ ಪಕ್ಷದ ಬಹುಪಾಲು ಹಿರಿಯ ನಾಯಕರನ್ನು ಕಂಡರೆ ರಾಹುಲ್ಗೆ ಆಗುವುದಿಲ್ಲ. ಪ್ರತಿಯೊಂದಕ್ಕೂ ಮಧುಸೂದನ ಮಿಸ್ತ್ರಿ, ಜೈರಾಂ ರಮೇಶ್ ಅವರಂಥ ನಾಯಕರನ್ನೇ ನೆಚ್ಚಿದ್ದಾರೆ. ಅವರು ಹೇಳಿದ್ದೇ ವೇದವಾಕ್ಯ. ಯುವ ನಾಯಕನ ಸಲಹೆಗಾರರಿಗೆ ಸಮಕಾಲೀನ ರಾಜಕಾರಣದ ನಾಡಿಮಿಡಿತ ಗೊತ್ತಿಲ್ಲ. ಕಾರ್ಯ-ಕರ್ತರ ಸಂಪರ್ಕವಿಲ್ಲ. ಅವರು ಹೇಗೆ ಆಲೋಚಿಸುತ್ತಾರೆ. ಅವರ ನಿರೀಕ್ಷೆಗಳೇನು ಎನ್ನುವುದರ ಅರಿವಿಲ್ಲ. ಈ ನಾಯಕರು ರಾಹುಲ್ ಅವರಿಗೆ ಏನು ಸಲಹೆ ಕೊಡಬಲ್ಲರು. ಅವರ ಸಲಹೆ ಕೇಳಿದರೆ ಏನಾಗಬಹುದು ಎನ್ನುವುದಕ್ಕೆ ಲೋಕಸಭೆ ಚುನಾವಣೆ ಸಾಕ್ಷಿ. ಇದೇ ಮಾತನ್ನು ದಕ್ಷಿಣ ಮುಂಬೈ ಕ್ಷೇತ್ರದಲ್ಲಿ ಸೋತ ಮಾಜಿ ಸಚಿವ ಮಿಲಿಂದ್ ದೇವ್ರಾ ಹೇಳಿದ್ದಾರೆ.
ರಾಹುಲ್ ಅವರಿಗಿರುವ ಅವಕಾಶಗಳು ಬೇರೆ ಯಾರಿಗಾದರೂ ಇದ್ದಿದ್ದರೆ ದೇಶದ ದೊಡ್ಡ ನಾಯಕರಾಗಿ ರೂಪುಗೊಳ್ಳುತ್ತಿದ್ದರು. ಕಾಂಗ್ರೆಸ್ ಪಕ್ಷದೊಳಗೆ ಮತ್ತು ಹೊರಗೆ ಅವರ ಸಮಕಾಲೀನ ಅನೇಕ ನಾಯಕರು ಭರವಸೆ ಮೂಡಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅತ್ಯುತ್ತಮ ನಾಯಕರಾಗುವ ಸುಳಿವು ನೀಡಿದ್ದಾರೆ. ಸದನದಲ್ಲಿ ಅದ್ಭುತವಾಗಿ ಮಾತನಾಡುತ್ತಾರೆ. ಕಲಾಪಗಳಲ್ಲಿ ಗಂಭೀರವಾಗಿ ಭಾಗವಹಿಸುತ್ತಾರೆ. ಅವರನ್ನು ನೋಡಿಯಾದರೂ ರಾಹುಲ್ ಕಲಿಯಬಹುದಿತ್ತು. ಮತ್ತೊಬ್ಬರನ್ನು ನೋಡಿ ಕಲಿಯುವುದು ಅವಮಾನವಲ್ಲ.
ಕಾಂಗ್ರೆಸ್ ಉಪಾಧ್ಯಕ್ಷ ಈಗಲೂ ಸದನಕ್ಕೆ ಬರುವುದು ಅಪರೂಪ. ಬಂದರೂ ಮಾತನಾಡುವುದಿಲ್ಲ. ಕಳೆದ ವಾರ ಲೋಕಸಭೆಗೆ ಬಂದು ನಿದ್ದೆ ಮಾಡಿದರು. ಮಹತ್ವದ ಸಂದರ್ಭಗಳಲ್ಲಿ ಅವರು ಸದನದಲ್ಲಿ ಇರುವುದಿಲ್ಲ. ಮೊನ್ನೆ ಮಲ್ಲಿಕಾರ್ಜುನ ಖರ್ಗೆ, ‘ಪ್ರಧಾನಿ ನರೇಂದ್ರ ಮೋದಿ ವಾರಕ್ಕೊಮ್ಮೆಯಾದರೂ ಸದನಕ್ಕೆ ಬರಲಿ’ ಎಂದು ಸಲಹೆ ಮಾಡಿದರು. ಆಡಳಿತ ಪಕ್ಷದ ಸದಸ್ಯರು ರಾಹುಲ್ ಅವರ ಬಗ್ಗೆ ಅದೇ ಮಾತು ಹೇಳಿದರೆ? ಹದಿನೈದನೇ ಲೋಕಸಭೆ ಕಲಾಪದಲ್ಲೂ ರಾಹುಲ್ ಹೆಚ್ಚು ಭಾಗವಹಿಸಿಲ್ಲ. ಒಮ್ಮೆ ಲೋಕಪಾಲ ಮಸೂದೆ ಕುರಿತು ಮಾತನಾಡಿದ್ದು ಬಿಟ್ಟರೆ ಮತ್ಯಾವ ಚರ್ಚೆಯಲ್ಲೂ ಭಾಗವಹಿಸಿಲ್ಲ. ಪ್ರಶ್ನೆಗಳನ್ನು ಕೇಳಿದ್ದು ಇಲ್ಲವೇ ಇಲ್ಲ.
ಕಾಂಗ್ರೆಸ್ ಪಕ್ಷವೇ ಒಂದು ದೊಡ್ಡ ಸಂತೆ. ಯಾರು ಏನು ಮಾಡುತ್ತಾರೆ, ಏನು ಮಾತನಾಡುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಮಾಧ್ಯಮಗಳ ಪ್ರತಿನಿಧಿಗಳು ಈ ಪಕ್ಷದ ನಾಯಕರ ಮುಂದೆ ಮೈಕ್ ಹಿಡಿದರೆ ಸಾಕು. ಮಾತುಗಳು ಧಾರಾಳವಾಗಿ ಬರುತ್ತವೆ. ಮಾತಿನ ಸಾಧಕಬಾಧಕ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಕಳೆದಿವೆ. ಎರಡು ತಿಂಗಳಲ್ಲಿ ಸರ್ಕಾರದೊಳಗೆ ಏನು ನಡೆಯುತ್ತಿದೆ ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಸಚಿವರು ಬಾಯಿ ಬಂದ್ ಮಾಡಿಕೊಂಡಿದ್ದಾರೆ. ಪಕ್ಷದ ಮುಖಂಡರು, ವಕ್ತಾರರು ತುಟಿ ಬಿಚ್ಚುವುದಿಲ್ಲ.
ಪೂರ್ವಾನುಮತಿ ಇಲ್ಲದೆ ಸಚಿವರು, ಅಧಿಕಾರಿಗಳನ್ನು ಪತ್ರಕರ್ತರು ಭೇಟಿ ಮಾಡುವಂತಿಲ್ಲ. ಬಿಜೆಪಿ ವಿದ್ಯಮಾನಗಳನ್ನು ವರದಿ ಮಾಡುವ ಪತ್ರಕರ್ತರಿಗೂ ಬಿಜೆಪಿ ಕಚೇರಿ ಪ್ರವೇಶ ಬಂದ್ ಮಾಡಲಾಗಿದೆ. ಮೋದಿ ಅವರ ನಿಷ್ಠಾವಂತ ಬಂಟ ಅಮಿತ್ ಷಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪತ್ರಕರ್ತರನ್ನು ಬಿಜೆಪಿ ಕಚೇರಿಯಿಂದ ದೂರ ಇಡಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಇದಕ್ಕೆ ತದ್ವಿರುದ್ಧ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವರು ಮುಕ್ತವಾಗಿ ಮಾತಾಡುತ್ತಿದ್ದರು. ಹದ್ದು ಮೀರಿದ್ದೂ ಉಂಟು. ಪಕ್ಷದ ನಾಯಕರ ಹೇಳಿಕೆಗಳಂತೂ ಅನೇಕ ಸಲ ವಿವಾದಕ್ಕೆ ಕಾರಣವಾಗುತ್ತಿದ್ದವು.
ಸೋನಿಯಾ ಮತ್ತು ರಾಹುಲ್ ಅವರಿಗೆ ಪಕ್ಷದ ನಾಯಕರ ಮೇಲೆ ಹಿಡಿತವಿರಲಿಲ್ಲ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಚಿವರು, ಅಧಿಕಾರಿಗಳ ಮೇಲೆ ಹತೋಟಿ ಇರಲಿಲ್ಲ. ಕಾಂಗ್ರೆಸ್ ನಾಯಕರ ಹಿಡಿತವಿಲ್ಲದ ಮಾತು ಈಗಲೂ ಮುಂದುವರಿದಿದೆ. ಅಷ್ಟೇ ಅಲ್ಲ, ಯಾವ ವಿಷಯದ ಬಗ್ಗೆ ಯಾವ ನಿಲುವು ತಳೆಯಬೇಕು ಎನ್ನುವ ಗೊಂದಲಕ್ಕೆ ಕಾಂಗ್ರೆಸ್ ಆಗಾಗ್ಗೆ ಸಿಕ್ಕಿಕೊಳ್ಳುತ್ತಿದೆ. ಕಾಂಗ್ರೆಸ್ ನಿಜಕ್ಕೂ ಸಂಕಷ್ಟದಲ್ಲಿದೆ. ನಾಯಕತ್ವದ ಬಿಕ್ಕಟ್ಟು ಪಕ್ಷವನ್ನು ಕಾಡುತ್ತಿದೆ. ಈ ಬಿಕ್ಕಟ್ಟನ್ನು ಸೋನಿಯಾ ಹಾಗೂ ರಾಹುಲ್ ಹೇಗೆ ನಿಭಾಯಿಸುತ್ತಾರೆ? ಸೋತು ಸೊರಗಿರುವ ಪಕ್ಷಕ್ಕೆ ಹೇಗೆ ಜೀವ ತುಂಬುತ್ತಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ರಾಹುಲ್ ತಮ್ಮ ಕಾರ್ಯಶೈಲಿ ಬದಲಿಸಿಕೊಂಡು ಮುಂಚೂಣಿಗೆ ಬರದಿದ್ದರೆ ಪುನಃ ಕಾಂಗ್ರೆಸ್ ಮುಗ್ಗರಿಸುವ ಸಾಧ್ಯತೆಯಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.