ಆಧುನಿಕೋತ್ತರ ಕಾಲದ ಇಂದಿನ ಮಹಿಳೆಯ ಬದುಕು ಬದಲಾಗಿದೆ. ಸಾಂಪ್ರದಾಯಿಕ ಸರಹದ್ದುಗಳನ್ನು ಮೀರಿ ತನ್ನ ಅಸ್ಮಿತೆಯನ್ನು ಆಕೆ ಕಂಡುಕೊಳ್ಳುತ್ತಿದ್ದಾಳೆ. ಈ ಪ್ರಕ್ರಿಯೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ನೆಲೆಗಳಲ್ಲಿ ಬದಲಾವಣೆಗಳಿಗೆ ಮಹಿಳೆ ತೆರೆದುಕೊಳ್ಳುತ್ತಿದ್ದಾಳೆ. ಹೊಸ ಅನುಭವಗಳನ್ನು ಅನ್ವೇಷಿಸುತ್ತಿದ್ದಾಳೆ. ಆದರೆ ಈ ಹೊಸ ಮಹಿಳೆಯ ಜೊತೆಗೆ ಹೆಜ್ಜೆ ಹಾಕುವಲ್ಲಿ ಪುರುಷ ಹಿಂದೆ ಬೀಳುತ್ತಿದ್ದಾನೆಯೆ? ದುರಭಿಮಾನ ಅಥವಾ ಕೀಳರಿಮೆಗಳ ಕೋಟೆಯೊಳಗೆ ಸಿಲುಕಿ ಆತ ಹೆಚ್ಚು ಆಕ್ರಮಣಕಾರಿಯಾಗುತ್ತಿದ್ದಾನೆಯೆ? ನಮ್ಮ ಸುತ್ತಮುತ್ತ ಹೆಚ್ಚುತ್ತಿರುವ ಮಹಿಳೆ ಮೇಲಿನ ಹಿಂಸೆಗಳಿಗೆ ಕಾರಣಗಳೇನು? ಈ ಹಿಂಸೆಗಳು ಹೆಣ್ಣನ್ನು ನಿಯಂತ್ರಿಸುವ ಹೊಸ ಹೊಸ ವಿಧಾನಗಳಾಗಿರುತ್ತವೆಯೆ? ಎಂಬಂತಹ ಪ್ರಶ್ನೆಗಳು ಕಾಡುತ್ತಿರುವ ಕಾಲ ಇದು.
ಹೆಣ್ಣುಮಕ್ಕಳು ಬದಲಾವಣೆಯ ಹಾದಿ ತುಳಿದಿದ್ದಾರೆ. ಆದರೆ ಈ ಬದಲಾವಣೆಗಳಿಗೆ ಸಂವಾದಿಯಾಗಿ ಪುರುಷ ಮನಸ್ಸುಗಳಲ್ಲಿ, ಮನೋಭಾವಗಳಲ್ಲಿ ಬದಲಾವಣೆ ಮೂಡಲಿಲ್ಲ. ತೀರಾ ಸರಳೀಕೃತ ನೆಲೆಯಲ್ಲಿ ಹೇಳುವುದಾದರೆ ಮಹಿಳೆಯರನ್ನು ಕುರಿತಂತೆ ಅವವೇ ಹಳಸಲು ಜೋಕುಗಳ ಚಲಾವಣೆಯೂ ತಪ್ಪಲಿಲ್ಲ. ದಿನನಿತ್ಯದ ಆಗುಹೋಗುಗಳಲ್ಲಿ ‘ಯಜಮಾನ ಸಂಸ್ಕೃತಿ’ಯ ವಿಜೃಂಭಣೆ ಎಂದಿನಂತೆ ಮುಂದುವರಿಯುತ್ತಲೇ ಇದೆ. ಇವನ್ನು ಮೀರುತ್ತಾ ನಿಜದ ನೆಲೆಯನ್ನು ಅರಿಯಲು ಮಹಿಳೆ ಯತ್ನಿಸುತ್ತಿದ್ದಾಳೆ. ಯಶಸ್ವಿಯೂ ಆಗುತ್ತಿದ್ದಾಳೆ. ಆದರೆ ಈ ಹಾದಿಯಲ್ಲಿ ಬರುವ ಅಡ್ಡಿ ಆತಂಕಗಳನ್ನು ಮೆಟ್ಟಿನಿಲ್ಲಲು ಹೆಚ್ಚಿನ ಆತ್ಮಬಲ ಆಕೆಗಿರಬೇಕಾಗುತ್ತದೆ. ಇಂತಹ ಸನ್ನಿವೇಶ ಬದಲಾಗುವುದು ಹೇಗೆ?
ಈ ಸನ್ನಿವೇಶ ಬದಲಾಗಬೇಕಾದರೆ ಪುರುಷ ಮನಸ್ಸುಗಳಲ್ಲಿ ಲಿಂಗತ್ವ ಸೂಕ್ಷ್ಮತೆ ಮೊಳೆಯಬೇಕು. ಮಹಿಳಾ ಹಕ್ಕುಗಳು ಹಾಗೂ ಲಿಂಗ ಸಮಾನತೆಯ ಪರವಾದ ಹೋರಾಟಗಳಲ್ಲಿ ಪುರುಷರ ಪಾಲ್ಗೊಳ್ಳುವಿಕೆಯೂ ಅಗತ್ಯ ಎಂಬುದು ಸದ್ಯದ ಚಿಂತನೆ. ಇದಕ್ಕೆಂದೇ ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುಎನ್ ವಿಮೆನ್, ಭಾರತದಲ್ಲಿ ಈ ಕುರಿತಾದ ಪ್ರಚಾರಾಂದೋಲನಕ್ಕೆ ಕಳೆದ ಶನಿವಾರ ದೆಹಲಿಯಲ್ಲಿ ಚಾಲನೆ ನೀಡಿದೆ. ಭಾರತದಲ್ಲಿ ‘ಅವಳಿಗಾಗಿಅವನು’ (HeForShe) ಪ್ರಚಾರಾಂದೋಲನವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಉದ್ಘಾಟಿಸಿದ್ದಾರೆ.
2030ರೊಳಗೆ ಲಿಂಗ ಅಸಮಾನತೆಯನ್ನು ಅಂತ್ಯಗೊಳಿಸುವ ಗುರಿ ಹೊಂದಿದ ಜಾಗತಿಕ ಆಂದೋಲನ ಇದು. ಈ ಗುರಿ ಸಾಧನೆಗಾಗಿ ಬದಲಾವಣೆಯ ಹರಿಕಾರರಾಗಿ ಗಂಡುಹುಡುಗರು ಹಾಗೂ ಪುರುಷರು ಪಾಲ್ಗೊಳ್ಳಲಿದ್ದಾರೆ. ಮಹಿಳೆಯರು ಸಬಲರಾದಲ್ಲಿ ಇಡೀ ಮನುಕುಲಕ್ಕೆ ಲಾಭದಾಯಕ ಎಂಬುದು ಯುಎನ್ ವಿಮೆನ್ ಚಿಂತನೆ. ಇದಕ್ಕಾಗಿ ವಿಶ್ವದಾದ್ಯಂತ ಪುರುಷರು ಹಾಗೂ ಗಂಡು ಮಕ್ಕಳನ್ನು ಸಂಘಟಿಸುತ್ತಿರುವ ಅಂತರರಾಷ್ಟ್ರೀಯ ವೇದಿಕೆ ‘ಮೆನ್ಎಂಗೇಜ್’ ಜತೆಗೆ ಯುಎನ್ ವಿಮೆನ್ ಸಹಭಾಗಿತ್ವ ಹೊಂದಿದೆ. ಇದು, ನವೆಂಬರ್ 10ರಿಂದ 13 ರವರೆಗೆ ನವದೆಹಲಿಯಲ್ಲಿ ‘ಲಿಂಗ ನ್ಯಾಯಕ್ಕಾಗಿ ಪುರುಷರು ಹಾಗೂ ಗಂಡುಮಕ್ಕಳು’ ಎಂಬಂಥ ಜಾಗತಿಕ ವಿಚಾರಗೋಷ್ಠಿಯನ್ನೂ ಏರ್ಪಡಿಸಿದೆ.
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯರೊಂದಿಗೆ ಸಂವಾದ, ಜಾಗತೀಕರಣ ಹಾಗೂ ಲಿಂಗ ಅನ್ಯಾಯ, ಹಿಂಸಾಚಾರದ ಲಿಂಗತ್ವ ಬೇರುಗಳನ್ನು ಅರಿಯುವುದು ಹಾಗೂ ಸ್ಪಂದಿಸುವುದು, ಕೈರೊ ಹಾಗೂ ಬೀಜಿಂಗ್ ಸಮ್ಮೇಳನಗಳ ನಂತರದ ಎರಡು ದಶಕಗಳಲ್ಲಿ ಏನೇನು ಪರಿವರ್ತನೆಗಳಾಗಿವೆ? ಜಾಗತೀಕರಣ, ಲಿಂಗ ನ್ಯಾಯ ಹಾಗೂ ಸಾಮಾಜಿಕ ಚಳವಳಿಗಳು, ತಂದೆತನ ಹಾಗೂ ಆರೈಕೆ ಮಾಡುವುದು, ಪುರುಷತ್ವ, ಅಪರಾಧ ಹಾಗೂ ನ್ಯಾಯ, ಮಾಧ್ಯಮಗಳಲ್ಲಿ ಪುರುಷತ್ವದ ಪ್ರತಿನಿಧೀಕರಣ ಹಾಗೂ ಪುರುಷತ್ವ ಮತ್ತು ಸಂಸ್ಕೃತಿ ಮುಂತಾದ ವಿಷಯಗಳ ಸುತ್ತ ಗೋಷ್ಠಿಗಳು ನಡೆಯುತ್ತಿದ್ದು ತಜ್ಞರು ವಿಚಾರಗಳನ್ನು ಮಂಡಿಸುತ್ತಿದ್ದಾರೆ.
ಲಿಂಗ ಸಮಾನ ಸಮಾಜದ ನಿರ್ಮಾಣಕ್ಕಾಗಿ ಪುರುಷತ್ವ ಕುರಿತಾದ ವಾಗ್ವಾದಗಳನ್ನು ಬೆಳೆಸಬೇಕಾಗಿರುವುದು ಇಂದಿನ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಪುರುಷತ್ವದ ಪರಿಕಲ್ಪನೆ ಎಷ್ಟರಮಟ್ಟಿಗೆ ಸಹಜವಾದದ್ದು? ಹೆಣ್ಣೆಂದರೆ ಹೀಗಿರಬೇಕು, ಗಂಡೆಂದರೆ ಹಾಗಿರಬೇಕು ಎಂಬಂತಹ ಸಾಮಾಜೀಕರಣ ಪ್ರಕ್ರಿಯೆಯ ಹಿಂದಿನ ರಾಜಕಾರಣಗಳೇನು? ಪಿತೃಪ್ರಧಾನ ಮೌಲ್ಯಗಳನ್ನು ಬಿತ್ತುವ ಯಜಮಾನ ಸಂಸ್ಕೃತಿಯ ಮಿಥ್ಯೆಯನ್ನು ಒಡೆಯುವುದು ಹೇಗೆ? ‘ನಾನು ಮೀಸೆ ಹೊತ್ತ ಗಂಡು’ ಎಂದು ಹೇಳುವಾಗಲೇ ಧ್ವನಿತವಾಗುವಂತಹ ‘ಹೆಣ್ಣೆಂದರೆ ಎರಡನೇ ದರ್ಜೆ’ ಎಂಬಂತಹ ಭಾವನೆಗಳನ್ನು ಅಳಿಸಿಹಾಕುವುದು ಅಷ್ಟು ಸುಲಭವೆ? ಮಹಿಳಾ ಸಬಲೀಕರಣ ಎಂದಾಕ್ಷಣ ಪುರುಷನ ದುರಭಿಮಾನ ಛಿದ್ರವಾಗುವುದೂ ಮುಖ್ಯವಲ್ಲವೆ? ಶತಶತಮಾನಗಳಿಂದ ರೂಢಿಸಿಕೊಂಡು ಬಂದಿರುವ ಈ ಮನೋಭಾವಗಳನ್ನು ಕಳಚಿಹಾಕಲು ಪುರುಷ ಹೊಣೆಗಾರಿಕೆಯ ಮರುವ್ಯಾಖ್ಯಾನಗಳು ಇಂದು ಎಂದಿಗಿಂತ ಹೆಚ್ಚು ಅಗತ್ಯವಾಗಿವೆ.
ಇಂತಹ ಮಹಿಳಾ ಪರ ಚಿಂತನೆಗಳನ್ನು ಸಮಾಜದಲ್ಲಿ ಆರಂಭದಲ್ಲಿ ರೂಢಿಸಿದವರಲ್ಲಿ ಪುರುಷರ ಪಾತ್ರವೂ ಮಹತ್ವದ್ದಾಗಿತ್ತು ಎಂಬುದನ್ನು ನಾವು ಅರಿತುಕೊಳ್ಳಬೇಕು. ಈ ಮಹಾಪುರುಷರ ಕಾಣ್ಕೆಗಳು, ಮುನ್ನೋಟಗಳು ಇಂದಿಗೂ ಪ್ರಸ್ತುತ. ಈ ಸಂದರ್ಭದಲ್ಲಿ ಬ್ರಿಟಿಷ್ ತತ್ವಜ್ಞಾನಿ ಹಾಗೂ ರಾಜಕೀಯ, ಸಾಮಾಜಿಕ ಚಿಂತಕ ಜಾನ್ ಸ್ಟುವರ್ಟ್ ಮಿಲ್ ಅವರನ್ನು ಇಲ್ಲಿ ನೆನೆಯಲೇಬೇಕು. 1869ರಷ್ಟು ಹಿಂದೆಯೇ ‘ದಾಸ್ಯದ ಬೇಡಿಗಳಲ್ಲಿ ಹೆಣ್ಣು’ (ದಿ ಸಬ್ಜೆಕ್ಷನ್ ಆಫ್ ವಿಮೆನ್) ಎಂಬ ಪ್ರಬಂಧವನ್ನು ಪ್ರಕಟಿಸಿದ್ದ ಮಿಲ್ ಅವರು ಮಹಿಳಾಕೋನದಿಂದ ಬದುಕನ್ನು ಗ್ರಹಿಸಿದ್ದರು. ಆ ಕಾಲಕ್ಕೇ ಮಿಲ್ ಪ್ರತಿಪಾದಿಸಿದ ವಿಚಾರಗಳು ಅವರ ಲಿಂಗಪಕ್ಷಪಾತ ರಹಿತ ಮನಸ್ಸನ್ನು ಅನಾವರಣಗೊಳಿಸುತ್ತದೆ.
ಅವರು ಬರೆಯುತ್ತಾರೆ: ‘ಇತರ ಎಲ್ಲಾ ಅಧೀನಕ್ಕೊಳಪಟ್ಟ ವರ್ಗಗಳಿಗಿಂತ ತೀರಾ ಭಿನ್ನವಾದ ಸ್ಥಾನ ಮಹಿಳೆಯರದ್ದು. ಇವರ ಒಡೆಯರಿಗೆ ಬರೀ ಸೇವೆಗಿಂತಲೂ ಹೆಚ್ಚಿನದಾದದ್ದು ಬೇಕಾಗಿದೆ. ಮಹಿಳೆಯರ ವಿಧೇಯತೆಯನ್ನಷ್ಟೇ ಪುರುಷರು ಬಯಸುವುದಿಲ್ಲ. ಅವರಿಗೆ ಅವರ ಅಂತಃಕರಣ, ಭಾವನೆಗಳೂ ಬೇಕು. ತೀರಾ ಮೃಗೀಯವಾದ ಕೆಲವರನ್ನು ಬಿಟ್ಟರೆ ಎಲ್ಲಾ ಪುರುಷರು ತಮ್ಮೊಡನೆ ಹೆಚ್ಚು ನಿಕಟ ಸಂಪರ್ಕವುಳ್ಳ ಮಹಿಳೆಯಲ್ಲಿ ಬಲವಂತದಿಂದಾದ ದಾಸಿಯನ್ನು ಇಷ್ಟಪಡುವುದಿಲ್ಲ. ತಾನೇ ಬಯಸಿ ಆಕೆ ದಾಸಿಯಾಗುವುದನ್ನು ಬಯಸುತ್ತಾರೆ. ಬರೇ ದಾಸಿ ಮಾತ್ರವಲ್ಲ. ಅಚ್ಚುಮೆಚ್ಚಿನವಳೂ ಆಗಬೇಕು. ಹೀಗಾಗಿ ಮಹಿಳೆಯ ಮನಸ್ಸನ್ನು ದಾಸ್ಯಕ್ಕೊಳಪಡಿಸುವಂತಹ ಎಲ್ಲವನ್ನೂ ಆಚರಣೆಗೆ ತರಲಾಗಿದೆ. ....ಬರೇ ಸರಳ ವಿಧೇಯತೆಗಿಂತ ಹೆಚ್ಚಿನದು ಮಹಿಳೆಯರ ಒಡೆಯರಿಗೆ ಬೇಕಾಗಿತ್ತು. ಈ ಉದ್ದೇಶ ಸಾಧನೆಗಾಗಿ ಇಡೀ ಶಿಕ್ಷಣದ ಒತ್ತನ್ನೇ ಇದಕ್ಕೆ ತಕ್ಕಂತೆ ತಿರುಗಿಸಿದರು. ಬಾಲ್ಯದಿಂದಲೇ ಎಲ್ಲಾ ಮಹಿಳೆಯರಿಗೆ ಪುರುಷರಿಗಿಂತ ತೀರಾ ಭಿನ್ನವಾದ ಸ್ವಭಾವದ ಆದರ್ಶ ಪರಿಕಲ್ಪನೆಯನ್ನು ತುಂಬಲಾಗುತ್ತದೆ. ಸ್ವಂತಿಕೆಯನ್ನಲ್ಲ, ಸ್ವನಿಯಂತ್ರಣವನ್ನಲ್ಲ, ಆದರೆ ಶರಣಾಗತಿ. ಇತರರ ನಿಯಂತ್ರಣಕ್ಕೆ ತನ್ನನ್ನೇ ತಲೆಬಾಗಿಸಿಕೊಳ್ಳುವುದು. ಬೇರೆಯವರಿಗಾಗಿ ಬದುಕುವುದು ಹೆಣ್ಣಿನ ಕರ್ತವ್ಯವೆಂದು ಎಲ್ಲಾ ನೀತಿಗಳೂ ಹೇಳುತ್ತವೆ.’
ಭಾರತದಲ್ಲೂ ಅನೇಕ ಮಹಾನ್ ಪುರುಷರು ಮಹಿಳಾ ಪರ ಚಿಂತನೆಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ರಾಜಾ ರಾಮ್ ಮೋಹನ ರಾಯ್ ಅವರು ಆಧುನಿಕ ಭಾರತದ ಪಿತಾಮಹ. 1829ರಲ್ಲಿ ಬ್ರಿಟಿಷ್ ಆಡಳಿತ, ಸತಿ ಪದ್ಧತಿ ನಿಷೇಧಿಸಿದ್ದರ ಹಿಂದೆ ಅವರ ನಿರಂತರ ಹೋರಾಟವಿತ್ತು ಎಂಬುದನ್ನು ಮರೆಯಲಾಗದು. ಇನ್ನು ಗಾಂಧೀಜಿಯವರ ಸ್ತ್ರೀನಿಷ್ಠ ಧೋರಣೆಗಳಂತೂ ಸ್ವಾತಂತ್ರ್ಯ ಚಳವಳಿಗೆ ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ಸೆಳೆದುಕೊಂಡಿದ್ದನ್ನು ಮರೆಯುವಂತಿಲ್ಲ. ಭಾರತದಲ್ಲಿ ಮಹಿಳಾ ಶಿಕ್ಷಣ ಹಾಗೂ ವಿಧವೆಯರ ಉದ್ಧಾರಕ್ಕಾಗಿ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಜೊತೆ ಮಹಾತ್ಮ ಜ್ಯೋತಿಬಾ ಫುಲೆ ಅವರು 19ನೇ ಶತಮಾನದಲ್ಲಿಯೇ ಅರಿವಿನ ಜ್ಯೋತಿ ಹೊತ್ತಿಸಿದವರು. ಈ ಪರಂಪರೆಯ ಮುಂದುವರಿಕೆಯಾಗಿ ಸಮಾಜದಲ್ಲಿ ಬೇರೂರಿರುವಂತಹ ಪುರುಷತ್ವ ಪ್ರಜ್ಞೆ ಬದಲಾಗಬೇಕಾಗಿದೆ.
ಸರ್ಕಾರದ ನೀತಿನಿರೂಪಣೆಗಳಲ್ಲಿ ಒಂದಷ್ಟು ಮಟ್ಟಿಗಿನ ಸಂವೇದನಾಶೀಲತೆ ವ್ಯಕ್ತವಾದರೂ ಲಿಂಗತ್ವ ಅಸೂಕ್ಷ್ಮತೆ ವಿವಿಧ ರೀತಿಗಳಲ್ಲಿ ಹೊರಹೊಮ್ಮುತ್ತಿರುತ್ತವೆ. ರಾಜಕೀಯ ನಾಯಕರು ಅಸೂಕ್ಷ್ಮವಾದ ಹೇಳಿಕೆಗಳನ್ನು ನೀಡುವುದೂ ಮಾಮೂಲು. ಈ ಬಗ್ಗೆ ನಾಗರಿಕ ಸಮಾಜದ ಎಚ್ಚೆತ್ತ ಪ್ರಜ್ಞೆ ಸದಾ ಕಾವಲು ಕಾಯಬೇಕು. ಇಂತಹ ಅಸೂಕ್ಷ್ಮ ಪ್ರಜ್ಞೆ ನಮ್ಮೊಳಗೂ ಅಂತರ್ಗತವಾಗಿರಬಹುದು. ಈ ವಿಚಾರದಲ್ಲಿ ನಿರಂತರ ಕಲಿಕೆ ಮುಖ್ಯ.
ಪಿತೃಪ್ರಧಾನ ವ್ಯವಸ್ಥೆ ಬದಲಾಗಬೇಕಾದಲ್ಲಿ ಪುರುಷರ ಮನೋಭಾವಗಳಲ್ಲಿ ಬದಲಾವಣೆ ಆಗಬೇಕಾದುದು ಅಗತ್ಯ. ಇದಕ್ಕೆ ಸದ್ಯದ ಮಾದರಿ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಪತಿ ಓನ್ಲರ್ ಕೋಮ್. ಐದು ಬಾರಿ ವಿಶ್ವಚಾಂಪಿಯನ್ ಎಂಸಿ ಮೇರಿ ಕೋಮ್ ಅವರ ಜೀವನ ಸಂಗಾತಿ ಎಂದು ಅವರು ತಮ್ಮನ್ನು ತಾವು ಹೆಮ್ಮೆಯಿಂದ ಪರಿಚಯಿಸಿಕೊಳ್ಳುತ್ತಾರೆ. ಜೀವನ ಸಂಗಾತಿಯ ಭಾವನೆಗಳಿಗೆ ಸ್ಪಂದಿಸುವುದು ಇಬ್ಬರ ಬದುಕನ್ನೂ ಶ್ರೀಮಂತಗೊಳಿಸುತ್ತದೆ ಎನ್ನುವ ಅವರ ಅಭಿಪ್ರಾಯ ಸರಿಯಾದುದು.
‘ಶತಶತಮಾನಗಳಿಂದ ನಾವು ಗಟ್ಟಿಯಾಗಿ, ದೊಡ್ಡದಾಗಿ ಬೆಳೆಯಲು ಮಹಿಳೆಯರು ನಮಗೆ ನೆರವಾಗಿದ್ದಾರೆ. ಪತ್ನಿ ಅಥವಾ ಸಂಗಾತಿ ಮಟ್ಟದಲ್ಲಷ್ಟೇ ಮಹಿಳೆಯರ ಪಾತ್ರವನ್ನು ಕುಗ್ಗಿಸುವುದನ್ನು ನಿಲ್ಲಿಸಬೇಕು. ಮಹಿಳೆ ತನ್ನ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ಹಾಗೂ ತನ್ನದೇ ಸ್ವಂತ ವ್ಯಕ್ತಿತ್ವದ ಘನತೆಯ ವ್ಯಕ್ತಿಯಾಗಲು ಜೀವನ ಸಂಗಾತಿಗೆ ನೆರವಾಗುವ ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಅವರಿಗೆ ಒತ್ತಾಸೆಯಾಗಿರಬೇಕು’ ಎಂದೂ ಅವರು ಹೇಳಿದ್ದಾರೆ. ಮಹಿಳೆಯರ ಸಮಾನತೆ ಸಾಧ್ಯವಾಗಲು, ಮಹಿಳೆಯರ ಸಮಸ್ಯೆಗಳು ಪರಿಹಾರವಾಗಲು ಪುರುಷರೂ ಪರಿಹಾರದ ಭಾಗವಾಗಬೇಕಾದುದು ಅಗತ್ಯ ಎಂಬುದು ಇಲ್ಲಿ ಸುವ್ಯಕ್ತ.
ಹೆಣ್ಣುಮಕ್ಕಳಂತೆಯೇ ಗಂಡುಮಕ್ಕಳಿಗೂ ಸಮಸ್ಯೆಗಳಿವೆ. ಪಡಿಯಚ್ಚಿನ ಸಿದ್ಧಪಾತ್ರಗಳಿಗೆ ತಕ್ಕಂತೆಯೇ ಗಂಡುಹುಡುಗರು ವರ್ತಿಸಬೇಕೆಂಬ ನಿಯಮಗಳಿವೆ. ಗಂಡುಹುಡುಗರು ಅಳಕೂಡದು, ಭಾವುಕತೆ ಪ್ರದರ್ಶಿಸಬಾರದು ಎಂಬುದು ಸಮಾಜದ ಅಲಿಖಿತ ನಿಯಮಗಳು. ಕೃತಕವಾದ ಇಂತಹ ಕಟ್ಟುಪಾಡುಗಳು ವ್ಯಕ್ತಿತ್ವಗಳನ್ನು ತಿರುಚುವಂತಹದ್ದು. ನಮ್ಮ ಪುರಾಣಗಳ ‘ಅರ್ಧನಾರೀಶ್ವರ’ ಕಲ್ಪನೆಯ ಆದರ್ಶ ನಮ್ಮದಾದಲ್ಲಿ ಇಂತಹ ಕೃತಕ ಸಾಮಾಜಿಕ ನಡಾವಳಿಗಳ ಬಂಧನಗಳಿಂದ ಮುಕ್ತವಾಗುವುದು ಸಾಧ್ಯ.
ಪುರುಷಪ್ರಾಧಾನ್ಯವನ್ನು ಪ್ರತಿಪಾದಿಸುವ ನಮ್ಮ ಅನೇಕ ಸಾಮಾಜಿಕ, ಸಾಂಸ್ಕೃತಿಕ ನಡಾವಳಿಗಳು ಸಮಾನತೆಯನ್ನು ಬೋಧಿಸುವ ಸಂವಿಧಾನದ ಆಶಯಗಳಿಗೆ ವಿರೋಧಿಯಾಗಿವೆ ಎಂಬುದನ್ನು ಸಮಾಜ ಅರಿಯಬೇಕು. ಸಂವಿಧಾನಕ್ಕೆ ಗೌರವ ಸಲ್ಲಿಸುವುದಕ್ಕಾದರೂ ಹೆಣ್ಣುಮಕ್ಕಳನ್ನು ಕ್ಷುಲ್ಲಕೀಕರಿಸುವ ಸಂಸ್ಕೃತಿಗೆ ವಿದಾಯ ಹೇಳಬೇಕಾಗಿದೆ. ಇಂತಹದೊಂದು ಬದಲಾವಣೆಗೆ ಸಹಜೀವಿಗಳಾಗಿರುವ ಪುರುಷರ ಸ್ಪಂದನೆ, ಸಹಭಾಗಿತ್ವ ಮುಖ್ಯ. ಗಂಡು, ಹೆಣ್ಣಿನ ಮಧ್ಯೆ ಪರಸ್ಪರ ಅನುಮಾನಗಳು ಹಾಗೂ ಸಂಘರ್ಷ ತಪ್ಪಿಸಲೂ ಇದು ಅನಿವಾರ್ಯ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.