ನಮ್ಮ ದೇಶದಲ್ಲಿ ಅನೇಕ ತರಹದ ರಾಜರುಗಳು ಆಗಿ ಹೋಗಿದ್ದಾರೆ. ಕೆಲವರು ತಮ್ಮ ಶೌರ್ಯದಿಂದ ಖ್ಯಾತಿ ಗಳಿಸಿದರೆ, ಮತ್ತೆ ಕೆಲವರು ದಾನದಿಂದ. ಆದರೆ, ಕೆಲವರು ಕೇವಲ ಭೋಗದಿಂದ ಜನರ ಟೀಕೆಗೆ ಒಳಗಾದರೆ ಕೊಲ್ಹಾಪುರದ ಶಾಹೂ ಮಹಾರಾಜಅವರಂಥವರು ತಮ್ಮ ಪ್ರಜೆಗಳ ಹಕ್ಕುಗಳಿಗಾಗಿ, ಸಮಾನತೆಗಾಗಿ, ಅವರ ಶಿಕ್ಷಣಕ್ಕಾಗಿ ಬಹುದೊಡ್ಡ ಕೆಲಸವನ್ನು ಮಾಡಿ ಜಗಮಾನ್ಯರಾದರು. 1884 ರಲ್ಲಿ ಜನಿಸಿದ ಛತ್ರಪತಿ ಶಾಹೂ ಮಹಾರಾಜರು ಜನರ ಉತ್ಥಾನ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಂಬಿ ಸರ್ವರಿಗೂ ಶಿಕ್ಷಣದ ಅವಕಾಶ ಮಾಡಿಕೊಟ್ಟರು. ಅದರಲ್ಲಿಯೂ ಸಮಾಜದ ಅತ್ಯಂತ ಕಡೆಯ ವರ್ಗವನೆನ್ನಿಸಿಕೊಂಡವರಿಗೆ ಹೆಚ್ಚಿನ ಆದ್ಯತೆ ನೀಡಿ ವಸತಿ ಶಾಲೆಗಳನ್ನು ಸ್ಥಾಪಿಸಿ ಉಚಿತ ಹಾಗೂ ಕಡ್ಡಾಯದ ಶಿಕ್ಷಣ ದೊರಕಿಸಿದರು. ದಲಿತರ ಮುಖವಾಣಿಯಾದರು. ಆಗಿನ ಕಾಲದಲ್ಲಿ ಅಸ್ಪೃಶ್ಯರು ಬಾವಿಯನ್ನು ಮುಟ್ಟುವಂತಿರಲಿಲ್ಲ. ಯಾರಾದರೂ ಸವರ್ಣೀಯರು ಬಂದು ನೀರು ಸೇದಿ ಹಣಿಸಿದರೆ ಮಾತ್ರ ಅವರಿಗೆ ನೀರು. ಒಬ್ಬ ಅಸ್ಪೃಶ್ಯನಿಗೆ ತುಂಬ ಬಾಯಾರಿಕೆಯಾಗಿ ಅನೇಕರಿಗೆ ನೀರು ಕೊಡಿರೆಂದು ಹಲುಬುತ್ತಾನೆ.
ಯಾರೂ ಕರುಣೆ ತೋರದಿದ್ದಾಗ ಬಾಯಾರಿಕೆಯನ್ನು ತಡೆಯದೇ ತಾನೇ ನೀರು ಸೇದಿಕೊಂಡು ಕುಡಿಯುತ್ತಾನೆ. ಇದನ್ನು ಕಂಡ ಸವರ್ಣೀಯರು ಆತನನ್ನು ಪ್ರಜ್ಞೆ ತಪ್ಪುವಂತೆ ಥಳಿಸುತ್ತಾರೆ. ಆ ಮನುಷ್ಯನ ಸ್ನೇಹಿತರು, ಪರಿವಾರದವರು ಅವನನ್ನು ಹೊತ್ತು-ಕೊಂಡು ಅರಮನೆಗೆ ಬಂದು ಶಾಹೂ ಮಹಾರಾಜರನ್ನು ಕಂಡು ಸಂಗತಿಯನ್ನು ವಿವರಿಸುತ್ತಾರೆ. ಆಗ ಮಹಾರಾಜರು ಯಾವ ಯಾವ ಸವರ್ಣೀಯ ವ್ಯಕ್ತಿ ಈ ದೀನನನ್ನು ಹೊಡೆದಿದ್ದಾನೋ ಅವರನ್ನೆಲ್ಲ ಕರೆಸಿ ಇನ್ನೊಮ್ಮೆ ಆ ತರಹ ಮಾಡದಂತೆ ದಂಡಿಸುತ್ತಾರೆ. ಅಷ್ಟೇ ಅಲ್ಲ, ಆ ಅಸ್ಪೃಶ್ಯ ವ್ಯಕ್ತಿಗೆ ಹಣಕೊಟ್ಟು ಅರಮನೆಯ ಹತ್ತಿರವೇ ಒಂದು ಚಹಾದ ಅಂಗಡಿ ಹಾಕಿ ಕೊಡುತ್ತಾರೆ. ನಂತರ ಸಮಯ ದೊರೆತಾಗಲೆಲ್ಲ ಅವನ ಚಹಾದ ಅಂಗಡಿಗೆ ಹೋಗಿ ಅವನೇ ಮಾಡಿಕೊಟ್ಟ ಚಹಾವನ್ನು ಅವನೊಂದಿಗೇ ಕುಡಿಯುತ್ತಾರೆ. ತಮ್ಮನ್ನು ಕಾಣಲು ಬಂದವರನ್ನೆಲ್ಲ ಅದೇ ಚಹಾ ಅಂಗಡಿಗೆ ಕರೆಸಿ, ಅವರಿಗೂ ಆತ ಮಾಡಿದ ಚಹಾ ಕುಡಿಸಿ ಕಳಿಸುತ್ತಿದ್ದರು. ಜಾತಿಯ ಅಹಂಕಾರದಿಂದ ಮರೆಯುತ್ತಿದ್ದವರ ಭ್ರಮೆಗಳನ್ನು ಸ್ವತಃ ತಾವೇ ಮಾದರಿಯಾಗಿ ನಿಂತು ನಿವಾರಿಸುತ್ತಿದ್ದರು.
ಅವರು ಮೂಢನಂಬಿಕೆಯನ್ನೂ ಬಲವಾಗಿ ವಿರೋಧಿಸಿದ್ದರು. ಒಮ್ಮೆ ಅವರ ಆಸ್ಥಾನಕ್ಕೆ ಒಬ್ಬ ಜ್ಯೋತಿಷಿ ಬಂದ. ಅವರ ಭವಿಷ್ಯವನ್ನು ಹೇಳುತ್ತೇನೆ ಎಂದ. ಶಾಹೂ ಮಹಾರಾಜರು ಅವನನ್ನು ಮರುದಿನ ಬೆಳಿಗ್ಗೆ ಅರಮನೆಗೆ ಬರುವಂತೆ ಹೇಳಿದರು. ಆತ ಹೇಳಿದಂತೆ ಬಂದೊಡನೆ ಅರಮನೆಯ ಸೈನಿಕರು ಅವನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಿದರು. ಜ್ಯೋತಿಷಿ ಗಾಬರಿಯಾದ, ತನ್ನ ತಪ್ಪೇನು ಎಂದು ಸೈನಿಕರನ್ನು ಕೇಳಿದ. ಅವರು ತಮಗೆ ಕಾರಣ ಗೊತ್ತಿಲ್ಲವೆಂತಲೂ, ಬಹುಶಃ ಮರುದಿನ ಬೆಳಿಗ್ಗೆ ಅವನಿಗೆ ನೇಣು ಹಾಕಲಾಗುತ್ತದೆಂದೂ ಹೇಳಿದಾಗ ಆತ ಕಂಗಾಲಾಗಿ, ಹೊರಳಾಡಿ ಅತ್ತ, ರಾತ್ರಿಯೆಲ್ಲ ಒದ್ದಾಡಿದ ಆತನನ್ನು ಬೆಳಿಗ್ಗೆ ಶಾಹೂ ಮಹಾರಾಜರ ಮುಂದೆ ಕರೆತಂದರು.
ಆತ ದೊಪ್ಪನೇ ಮಹಾರಾಜರ ಕಾಲಮೇಲೆ ಬಿದ್ದು, ‘ಸ್ವಾಮೀ, ನನ್ನಿಂದ ಯಾವ ಅಪರಾಧವೂ ಆಗಿಲ್ಲ, ನನಗೆ ಏಕೆ ಈ ಶಿಕ್ಷೆ?’ ಎಂದು ಕೇಳಿದ. ಆಗ ಮಹಾರಾಜರು, ‘ಅಲ್ಲಪ್ಪ, ನೀನು ನಿನ್ನೆ ಬೆಳಿಗ್ಗೆ ಅರಮನೆಗೆ ಬರುವಾಗ ನಿನ್ನನ್ನು ಜೈಲಿಗೆ ಹಾಕುತ್ತಾರೆಂಬ ಭವಿಷ್ಯ ತಿಳಿದಿರಲಿಲ್ಲ. ನಿನಗೇ ನಾಳೆ ಏನಾಗುತ್ತದೆ ಎಂಬುದು ತಿಳಿಯದಿದ್ದಾಗ ನನ್ನ ಅಥವಾ ಮತ್ತೊಬ್ಬರ ಭವಿಷ್ಯ ನಿನಗೆ ಹೇಗೆ ತಿಳಿದೀತು? ಸಾಕು, ಇನ್ನೂ ಜನರನ್ನು ಮೋಸಮಾಡಬೇಡ’ ಎಂದು ತಾಕೀತು ಮಾಡಿ ಕಳುಹಿಸಿದರು. ಇಂತಹ ಸಾಮಾಜಿಕ ಕಳಕಳಿಯ, ಪ್ರಾಮಾಣಿಕ ಚಿಂತನೆಯ, ದೀನರಿಗೆ ಧ್ವನಿಯಾದ, ಸಮಾನತೆಯ ಹರಿಕಾರರಾದ ನಾಯಕರು ಮಾನವತೆ ಮೆರೆಯುತ್ತಾರೆ. ಇದ್ದಾಗ ಅನೇಕ ಜನರಿಗೆ ಬೆಳಕಾಗುತ್ತಾರೆ. ಜೀವಿತದ ಅವಧಿ ಮುಗಿದ ಬಳಿಕವೂ ಉಜ್ವಲ ಪ್ರಭೆಯ ದಾರಿದೀಪವನ್ನು ತೋರುತ್ತಾರೆ. ಅಂಥ ಮಹಾನುಭಾವರಲ್ಲಿ ಛತ್ರಪತಿ ಶಾಹೂ ಮಹಾರಾಜರೂ ಒಬ್ಬರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.