ಚಿಕ್ಕಮಗಳೂರು: ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾದ ನಗರಾಧ್ಯಕ್ಷ ಎಂ.ವಿ.ಅನಿಲ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಮರಣಪತ್ರ ಸಿಕ್ಕಿದೆ. ಧನ್ಯಶ್ರೀ ಮತ್ತು ಅವರ ತಾಯಿಯನ್ನು ಕೆಲ ಸಂಘಟನೆಗಳ ಯುವಕರು ನಿಂದಿಸಿ, ಬೆದರಿಕೆ ಹಾಕಿದ್ದರು ಎಂಬ ಅಂಶ ಪತ್ರದಲ್ಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
ಧನ್ಯಶ್ರೀ ಮುಸ್ಲಿಂ ಯುವಕನ ಜೊತೆ ಓಡಾಡುತ್ತಿದ್ದು, ಇದರಿಂದ ಲವ್ ಜಿಹಾದ್ಗೆ ಅವಕಾಶ ಮಾಡಿಕೊಟ್ಟಂತಾಗುತ್ತಿದೆ ಎಂದು ಆರೋಪಿಸಿದ್ದ ಐವರು ಯುವಕರು, ಧನ್ಯಶ್ರೀ ಮನೆಗೆ ತೆರಳಿ ಬೆದರಿಕೆ ಹಾಕಿದ್ದರು. ಜತೆಗೆ ಧನ್ಯಶ್ರೀ ತಾಯಿಯನ್ನೂ ನಿಂದಿಸಿದ್ದರು.
ಇದರಿಂದ ಮನನೊಂದಿದ್ದ ಧನ್ಯಶ್ರೀ ‘ಸಮಾಜದಲ್ಲಿ ಬದುಕಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಧನ್ಯಶ್ರೀ ಮತ್ತು ಮುಸ್ಲಿಂ ಯುವಕ ಇರುವ ಫೋಟೊವನ್ನು ಕೆಲವರು ವಾಟ್ಸ್ಆ್ಯಪ್, ಟ್ವಿಟರ್, ಫೇಸ್ಬುಕ್ನಲ್ಲಿ ಹಾಕಿದ್ದಾರೆ. ಆ ಫೋಟೊವನ್ನು ಧನ್ಯಶ್ರೀಗೂ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ಹಾಕಿದ್ದವರನ್ನು ಪಟ್ಟಿ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಧನ್ಯಶ್ರೀ ಮನೆಗೆ ಹೋಗಿ ಬೆದರಿಕೆ ಹಾಕಿದವರು, ಕಾಲೇಜಿನಲ್ಲಿ ಬೆದರಿಕೆ ಹಾಕಿದವರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕಿದವರನ್ನು ಬಂಧಿಸುತ್ತೇವೆ. ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಪ್ರಕರಣ ದಾಖಲಿಸಲಾಗಿದೆ. ಸದ್ಯ ಬಿಜೆಪಿ ಯುವ ಮೋರ್ಚಾದ ನಗರಾಧ್ಯಕ್ಷ ಎಂ.ವಿ.ಅನಿಲ್ ಅನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದೇವೆ’ ಎಂದು ಹೇಳಿದ್ದಾರೆ.