ಹಾಸನ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ ಬಲಿಯಾದ ಹಾಸನ ಜಿಲ್ಲೆಯ ಅರಕಲಗೂಡಿನ ಯೋಧ ಎಚ್.ಎಸ್.ಚಂದ್ರ (25) ಅವರ ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ.
ಅರಕಲಗೂಡು ತಾಲ್ಲೂಕು ಹರದೂರು ಗ್ರಾಮದ ಚಂದ್ರ 4 ವರ್ಷಗಳ ಹಿಂದಷ್ಟೇ ಸಿಆರ್ಪಿಎಫ್ ಸೇರಿದ್ದರು. ವರ್ಷದ ಹಿಂದಷ್ಟೇ ಮದುವೆಯಾಗಿದ್ದು, ಪತ್ನಿ ಪೃಥ್ವಿ 8 ತಿಂಗಳ ಗರ್ಭಿಣಿಯಾಗಿದ್ದಾರೆ.
ಫೆಬ್ರವರಿ 17 ರಂದು ರಜೆ ಮೇಲೆ ಊರಿಗೆ ಬಂದಿದ್ದ ಚಂದ್ರ, ಫೆಬ್ರುವರಿ 18ರಂದು ಪತ್ನಿಗೆ ಸೀಮಂತ ಕಾರ್ಯ ನೆರವೇರಿಸಿ, ತವರೂರಿಗೆ ಕಳಿಸಿದ್ದರು. ಮಾರ್ಚ್ 8ರಂದು ಗೃಹಪ್ರವೇಶ ಮುಗಿಸಿ 11 ರಂದು ಕರ್ತವ್ಯಕ್ಕೆ ತೆರಳಿದ್ದರು. ಇವರಿಗೆ ಮೂವರು ಸೋದರರು ಇದ್ದಾರೆ.
ಚಂದ್ರ ಅವರಿಲ್ಲದ ಮನೆ ಈಗ ಬಿಕೋ ಎನ್ನುತ್ತಿದ್ದು, ಇಡೀ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ಪಾರ್ಥಿವ ಶರೀರ ಬರಮಾಡಿಕೊಳ್ಳಲು ಕುಟುಂಬ ಸದಸ್ಯರು ಖಾಸಗಿ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ.