ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವದುಂಬಿದ ಭರತನಾಟ್ಯದ ಮೆರುಗು

ನಾದ ನೃತ್ಯ
Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನವರಸಗಳು ಮೇಳೈಸಿದ ಒಂದು ಸುಂದರ ಅನುಭೂತಿಯ ನಾಟ್ಯ ಪ್ರದರ್ಶನ ನೀಡಿದವರು ಭರತನಾಟ್ಯ ಕಲಾವಿದೆ ಕಾವ್ಯಾ ದಿಲೀಪ್. ನೃತ್ಯಗುರು ಅರ್ಚನಾ ಪುಣ್ಯೇಶ್ ಅವರ ಗರಡಿಯಲ್ಲಿ ತಯಾರಾದ ಈ ಉತ್ತಮ ಕಲಾವಿದೆಯ ‘ರಂಗಪ್ರವೇಶ’ ಕಾರ್ಯಕ್ರಮವು ಇತ್ತೀಚಿಗೆ ನಗರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನೆರವೇರಿತು.

ಅತೀವ ಕಾಳಜಿ, ಪರಿಶ್ರಮ, ಬದ್ಧತೆಗಳು ಕಾವ್ಯಾ ಅವರು ಪ್ರಸ್ತುತಪಡಿಸಿದ ಎಲ್ಲ ಕೃತಿಗಳಲ್ಲೂ ಎದ್ದುಕಾಣುತ್ತಿದ್ದವು. ಪ್ರಸ್ತುತಿಗೆ ಆರಿಸಿಕೊಂಡ ಕೃತಿಗಳೂ ರಸಾನುಭವ ಸ್ಫುರಿಸಲು ಅಷ್ಟೇ ಸಮಂಜಸವಾಗಿದ್ದವು. ಅರ್ಚನಾ ಅವರ ಸಮರ್ಥ ನಟುವಾಂಗದ ಜೊತೆ ವಿದ್ವಾನ್ ಕಾರ್ತಿಕ್ ಹೆಬ್ಬಾರರ ಸುಶ್ರಾವ್ಯ ಕಂಠವೂ ನರ್ತನಕ್ಕೆ ಜೀವ ತುಂಬಿತ್ತು.

ನಾದಸ್ವರದಲ್ಲಿ ನುಡಿಸಿ ಅರ್ಚಿಸುವ ವಿಶಿಷ್ಟ ನೃತ್ಯ ‘ಮಲ್ಲಾರಿ’ ಗಂಭೀರ ನಾಟರಾಗದಲ್ಲಿ ಸುಂದರವಾಗಿ ಪ್ರಸ್ತುತಗೊಂಡಿತು. ಅನಂತರ ಗಣೇಶ ಸ್ತುತಿಯನ್ನು ಕಾವ್ಯ, ಭಕ್ತಿರಸವನ್ನು ಹೊರಹೊಮ್ಮಿಸುತ್ತ, ತನ್ಮಯತೆಯಿಂದ ನರ್ತಿಸಿ ನಾಟ್ಯಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು.

ಅನಂತರ ಆಕರ್ಷಕ ಜತಿಗಳಿಂದ ಮೂಡಿಬಂದದ್ದು (ಗೌಳ ರಾಗ- ಆದಿತಾಳ) ‘ಮಯೂರ ಕೌತ್ವಮ್’. ವೇಲಾಯುಧನಾದ ಸುಬ್ರಹ್ಮಣ್ಯನನ್ನು  ‘ನೀಲಕಂಠ  ವಾಹನಂ’ ಮುಂತಾಗಿ ಅವನ ಅಂದ-ಅಲಂಕಾರಗಳನ್ನು ಬಗೆಬಗೆಯಾಗಿ ವರ್ಣಿಸುವ ಮೂಲಕ ನೃತ್ಯಗಾರ್ತಿ ಆಕರ್ಷಕ ಭಾವ-ಭಂಗಿಗಳಲ್ಲಿ ಮನಸೂರೆಗೊಂಡರು.

ನವಿಲಿನಂತೆ ಕೊರಳನ್ನು ಬೆಡಗಿನಿಂದ ಕೊಂಕಿಸುತ್ತಾ ರಂಗದ ತುಂಬಾ ಪಾದರಸದ ಹೆಜ್ಜೆಗಳಲ್ಲಿ ನರ್ತಿಸುತ್ತಾ ಮುದನೀಡಿದರು.

ಕಲ್ಯಾಣಿ ರಾಗ, ಆದಿತಾಳದಲ್ಲಿ ದಂಡಾಯುಧಪಾಣಿ ಪಿಳ್ಳೈ ರಚಿಸಿದ ‘ಜತಿಸ್ವರ’ವನ್ನು ಕಾವ್ಯ, ಕೌಶಲ್ಯಪೂರ್ಣ ಜತಿಗಳಿಂದ ಕೂಡಿದ  ಸುಂದರ ನೃತ್ಯಬಂಧದಲ್ಲಿ ಪ್ರದರ್ಶಿಸಿದರು.

ಭರತನಾಟ್ಯ ಕಾರ್ಯಕ್ರಮದ  ಹೃದಯಭಾಗ ‘ವರ್ಣಂ’. ಅದು  ಸಂಕೀರ್ಣ, ಜೊತೆಗೆ ಅಷ್ಟೇ ಆಕರ್ಷಕ ಭಾಗ ಕೂಡ. ‘ವರ್ಣಂ’ ಸಾಮಾನ್ಯವಾಗಿ ನೃತ್ಯ ಕಲಾವಿದೆಯರ ಸ್ಮರಣಶಕ್ತಿಗೆ ಸವಾಲೆಸೆವ, ನೃತ್ಯ ಮತ್ತು ಅಭಿನಯಗಳೆರಡರಲ್ಲೂ ಪರಿಣತಿ ಬೇಡುವ ಕ್ಲಿಷ್ಟ ನೃತ್ಯಬಂಧ.

ವಿದ್ವಾನ್ ಗುರುಮೂರ್ತಿ ಅವರ ಸುಂದರ ರಚನೆಯಲ್ಲಿ ಆದಿಶಕ್ತಿಯಾದ ದೇವಿಯನ್ನು ಸುದೀರ್ಘವಾಗಿ ವರ್ಣಿಸುವ ಸಶಕ್ತ ಕೃತಿ ಇದು. ‘ದೇವಿ ಸಪ್ತಮಾತೃಕ ರೂಪಿಣಿ, ಪಾಹಿ ನವರಸ ರಂಜಿನಿ’ (ರಾಗಮಾಲಿಕೆ) ಎಂದು ಸಪ್ತಮಾತೆಯರಾದ ಬ್ರಾಹ್ಮೀ, ವೈಷ್ಣವಿ, ಮಾಹೇಶ್ವರಿ, ಕಾಮಾರಿ, ವರಾಹಿ, ನಾರಸಿಂಹೀ ಮತ್ತು ಚಾಮುಂಡಿಯರ ವೈಭವೋಪೇತ ವರ್ಣನೆಗಳನ್ನು ಅದ್ಭುತವಾಗಿ ತನ್ನ ಪರಿಣಾಮಕಾರಿ ಅಭಿನಯದಲ್ಲಿ ಸಾಕಾರಗೊಳಿಸಿದರು ಕಾವ್ಯಾ.

ಸಂಚಾರಿ ಭಾಗದಲ್ಲಿ ಸುಂದರೇಶ್ವರ ಮತ್ತು ಮೀನಾಕ್ಷಿಯರ ವಿವಾಹದ ಸುಂದರ ಚಿತ್ರಣವನ್ನು ಕಾವ್ಯಾ, ಅನುಭವ ಜನ್ಯ ಅಭಿನಯಗಳಲ್ಲಿ ಕಟ್ಟಿಕೊಟ್ಟದ್ದು ವಿಶೇಷ.
ಸಪ್ತ ಮಾತೃಕೆಯರ ಪ್ರಸನ್ನ, ಸೌಮ್ಯ, ಕರುಣ, ಕೋಮಲ ಭಾವಗಳನ್ನು ಕಲಾವಿದೆ ಎಷ್ಟು ಚೆನ್ನಾಗಿ ನಯವಾದ ಲಾಸ್ಯದ ಹೆಜ್ಜೆಗಳಲ್ಲಿ  ಹೊರಹೊಮ್ಮಿಸಿದರೋ, ರೌದ್ರಭಾವವನ್ನು ಅಷ್ಟೇ ವ್ಯಗ್ರವಾಗಿ, ಭೀಷಣ-ರೋಷಭರಿತವಾಗಿ ಮೈದುಂಬಿ ನರ್ತಿಸಿ ಮನಸೂರೆಗೊಂಡರು.

ಏಳು ವಿವಿಧ ರೂಪಗಳನ್ನು ಭಿನ್ನವಾಗಿ ಅನಾವರಣಗೊಳಿಸಿದ ಕಾವ್ಯಾ, ನೆರೆದ ಕಲಾರಸಿಕರನ್ನು ರೋಮಾಂಚನ ಗೊಳಿಸಿದರು.

ಮುಂದಿನ ಪ್ರಸ್ತುತಿಯಲ್ಲಿ ‘ಏನ ಬೇಡಲಿ ಹನುಮ, ಬಕುತಿಯೊಂದನು  ಹೊರತು’ (ರಾಗ-ಆಂದೋಳಕ, ತಾಳ-ಖಂಡಚಾಪು) ಎಂಬ ದೇವರನಾಮದ ಸಾಕಾರದಲ್ಲಿ ಕಲಾವಿದೆಯ  ಭಕ್ತಿ ತಾದಾತ್ಮ್ಯತೆ ಕೆನೆಗಟ್ಟಿತು.

ಕವಿ ಚಂದ್ರಶೇಖರ ಕಂಬಾರರ ‘ಕಾಂತನಿಲ್ಲದ ಮೇಲೆ ಏಕಾಂತವೇತಕೆ’- ವಾಸಂತಿ ರಾಗದ ಜಾವಳಿ ವಿರಹೋತ್ಕಂಠಿತ ನಾಯಕಿಯ ವಿರಹದ ದುಃಖವನ್ನು ಕಾವ್ಯಾ ಸಮರ್ಥವಾಗಿ ನಿರೂಪಿಸಿದರು.

ಕಾರ್ಯಕ್ರಮದ ಪರಾಕಾಷ್ಠೆಯ ಭಾಗವೆಂದರೆ ‘ತಿಲ್ಲಾನ’. ಜೊತೆಗೆ ರೋಮಾಂಚನ  ಮೂಡಿಸಿದ ಪ್ರಸ್ತುತಿಯೂ ಕೂಡ. ಡಾ.ಬಾಲಮುರಳೀಕೃಷ್ಣ ವಿರಚಿತ ಬೃಂದಾವನೀ ರಾಗದ ತಿಲ್ಲಾನ ಆದಿತಾಳಕ್ಕೆ ಬದ್ಧವಾದ ಕೃತಿ. ಏಳು ಹಿತ್ತಾಳೆಯ ಮಡಕೆಗಳ ಮೇಲ್ಭಾಗವೇ  ರಂಗಸ್ಥಳವಾಗಿ ನೃತ್ಯ ಕಲಾವಿದೆ ತಾಳಬದ್ಧ ನಾಜೂಕಿನ ಹೆಜ್ಜೆಗಳಲ್ಲಿ ಅದರ ಮೇಲೆ ಚೆಂದದಿಂದ ನರ್ತಿಸಿದರು.

ಕಡೆಯಲ್ಲಿ ಅಂದು ಸ್ವಾತಂತ್ರೋತ್ಸವ ಸಂದರ್ಭವಾದ ಕಾರಣ ‘ವಂದೇಮಾತರಂ’ ಎಂಬ ಭಾವೈಕ್ಯ ಮಂತ್ರದ ದೇಶಭಕ್ತಿಯನ್ನು ನೃತ್ಯದ ಮೂಲಕ ಪಸರಿಸಿದರು. ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು.

ಕಾವ್ಯಾ ಅವರ ನೃತ್ಯ ಗುರು ಅರ್ಚನಾ ಅವರ ಹಿರಿಯ ನೃತ್ಯಗುರು ಭರತನಾಟ್ಯ ಮತ್ತು ಕೂಚಿಪುಡಿ ಉಭಯಶೈಲಿ ವಿಶಾರದೆ ಸುನಂದಾದೇವಿ, ಕೂಚಿಪುಡಿ ಗುರು ಧರಣಿ ಕಶ್ಯಪ್ ಮತ್ತು ಭರತನಾಟ್ಯ ಗುರು ಸುಪರ್ಣಾ ವೆಂಕಟೇಶ್ ಹಾಜರಿದ್ದು ಕಾವ್ಯಾ ಅವರಿಗೆ ಆಶೀರ್ವದಿಸಿದರು.

ವಾದ್ಯ ಸಹಕಾರದಲ್ಲಿ ಗಾಯನ- ಕಾರ್ತಿಕ್ ಹೆಬ್ಬಾರ್, ಮೃದಂಗ-ಹರ್ಷ ಸಾಮಗ, ಕೊಳಲು-ವಿವೇಕ್, ವೀಣೆ-ಗೋಪಾಲ್, ರಿದಂ ಪ್ಯಾಡ್- ಕಾರ್ತಿಕ್ ದಾತಾರ್ ಮತ್ತು ನಟುವಾಂಗ-ಅರ್ಚನಾ ಪುಣ್ಯೇಶ್ ತಮ್ಮ ಪರಿಣತಿಯನ್ನು ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT