ಮಳವಳ್ಳಿ: ಮಳೆಯಿಲ್ಲದೆ ಒಣಗುತ್ತಿರುವ ಮುಸುಕಿನ ಜೋಳದ ಬೆಳೆ ಉಳಿಸಿಕೊಳ್ಳಲು ರೈತರೊಬ್ಬರು ಟ್ಯಾಂಕರ್ನಿಂದ ನೀರು ಪೂರೈಕೆ ಮಾಡುತ್ತಿದ್ದಾರೆ.
ತಾಲ್ಲೂಕಿನ ಹೆಬ್ಬಣಿ ಗ್ರಾಮದ ರಾಜೇಂದ್ರ ಎಂಬುವವರು ಮುಸುಕಿನ ಜೋಳ ಉಳಿಸಿಕೊಳ್ಳಲು ಬಾಡಿಗೆ ನೀಡಿ ಟ್ಯಾಂಕರ್ ಮೂಲಕ ನೀರು ಬಳಕೆ ಮಾಡುತ್ತಿದ್ದಾರೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಮುಸುಕಿನಜೋಳ ಬೆಳೆ ಹಾಕಿದ್ದು ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದು ಮಳೆ ಬಾರದೆ ಒಣಗುತ್ತಿದೆ.
ಒಂದೂವರೆ ತಿಂಗಳ ಹಿಂದೆ ಬಿದ್ದ ಮಳೆಗೆ ಬಿತ್ತನೆ ಮಾಡಿದ್ದು ಈಗ ಹಲವು ದಿನಗಳಿಂದ ಮಳೆ ಬಾರದ ಕಾರಣ ಬೆಳೆ ಒಣಗುತ್ತಿದೆ. ಬೆಳೆ ಒಣಗುತ್ತದೆ ಎಂದು ₹ 500 ಬಾಡಿಗೆ ನೀಡಿ ನೀರು ತಂದು ಹಾಕಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಒಂದು ತಿಂಗಳು ಕಳೆದರೆ ಬೆಳೆ ಕೈಗೆ ಸಿಗುತ್ತದೆ ಇದರಿಂದ ಉಳಿಸಿಕೊಳ್ಳಲು ನೀರು ಹಾಕುತ್ತಿದ್ದೇನೆ ಎನ್ನುತ್ತಾರೆ ರಾಜೇಂದ್ರ. ಈಗಾಗಲೇ ಉಳುಮೆ, ಬಿತ್ತನೆಗೆ ಅಂದಾಜು ₹ 17 ಸಾವಿರ ವೆಚ್ಚವಾಗಿದೆ. ಈಗ ನೀರಿಗಾಗಿ ₹ 15ರಿಂದ 18 ಸಾವಿರ ವೆಚ್ಚದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ್ದೇನೆ ಟ್ಯಾಂಕರ್ ನೀರು ಪೂರೈಸುವುದು ಬಿಟ್ಟ ತಕ್ಷಣ ಭೂಮಿ ಒಣಗುತ್ತದೆ. ಮಳೆ ಬಾರದೆ ಇದ್ದರೆ ದೇವರೆ ಗತಿ ಎನ್ನುತ್ತಾರೆ.
2 ಎಕರೆಯಿಂದ ಸಮರ್ಪಕವಾಗಿ ಬೆಳೆಯಾಗಿದ್ದರೆ ₹ 50 ಸಾವಿರಕ್ಕೂ ಹೆಚ್ಚಿನ ಹಣ ದೊರೆಯುತ್ತಿತ್ತು. ಆದರೆ ಬೆಳೆ ಸಿಗುವುದೇ ಅನುಮಾನ ಎಂದು ಆತಂಕ ವ್ಯಕ್ತಪಡಿಸಿದರು.