ದಾವಣಗೆರೆ: ನಗರದಲ್ಲಿ ಹಂದಿಗಳ ನಿಯಂತ್ರಿಸಿ, ಇಲ್ಲ ಶಿಕ್ಷೆ ಎದುರಿಸಿ ಎಂದು ಪಾಲಿಕೆ ಮೇಯರ್ ಅಶ್ವಿನಿ ಪ್ರಶಾಂತ್ ಹಾಗೂ ಆಯುಕ್ತ ಬಿ.ಎಚ್.ನಾರಾಯಣಪ್ಪ, ಹಂದಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಪಾಲಿಕೆಯಲ್ಲಿ ಶನಿವಾರ ನಡೆದ ಹಂದಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
ಜನವಸತಿ ಪ್ರದೇಶದಲ್ಲಿ ಹಂದಿ ಸಾಕುವುದಕ್ಕೆ ಆಸ್ಪದ ಇಲ್ಲ. ಇದಕ್ಕೆ ಪಾಲಿಕೆಯ ಅನುಮತಿ ಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಂದಿಗಳನ್ನು ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹಂದಿ ಸ್ಥಳಾಂತರ ಮಾಡದಿರುವುದರಿಂದ ಪಾಲಿಕೆ ಮೇಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕರಣ ದಾಖಲಿಸಿದೆ. ಹಂದಿ ನಿಯಂತ್ರಣ ಮಾಡುವಂತೆ ಜನರ ಒತ್ತಡವೂ ಪಾಲಿಕೆ ಮೇಲೆ ಹೆಚ್ಚಿದೆ. ಹಾಗಾಗಿ, ಹಂದಿ ಮಾಲೀಕರು ಪಾಲಿಕೆ ಕ್ರಮಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಗರದಲ್ಲಿ ಪಾಲಿಕೆ ಕೈಗೊಂಡಿರುವ ಪ್ಲಾಸ್ಟಿಕ್ ಹಾಗೂ ದೂಳು ಮುಕ್ತ ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. ಆದರೆ, ಹಂದಿಗಳ ನಿಯಂತ್ರಣ ಮಾತ್ರ ನನೆಗುದಿಗೆ ಬಿದ್ದಿದೆ. ಸಾರ್ವಜನಿಕ ಸ್ಥಳಗಳಿಂದ ಹಂದಿ ನಿರ್ಮೂಲನೆ ಮಾಡಲು ಇನ್ನೂ 30 ದಿವಸ ಗಡುವು ನೀಡಲಾಗುವುದು.
ಈ ಕಾಲಮಿತಿ ಒಳಗೆ ನಿಯಂತ್ರಿಸದಿದ್ದರೆ ಆಯಾ ವಾರ್ಡ್ ವ್ಯಾಪ್ತಿಯ ಆರೋಗ್ಯ ನಿರೀಕ್ಷಕರನ್ನೇ ಹೊಣೆ ಮಾಡಲಾಗುತ್ತದೆ. ಶೀಘ್ರ ಹಂದಿ ನಿಯಂತ್ರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ನೂತನ ಜಿಲ್ಲಾಧಿಕಾರಿಗಳೂ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.
ನಗರದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹಂದಿ ಹಾವಳಿಯಿಂದಾಗಿ ಕಾಮಗಾರಿ ಪ್ರಗತಿಗೆ ಅಡ್ಡಿಯಾಗಿದೆ. ಒಳಚರಂಡಿ ವ್ಯವಸ್ಥೆಯಿಂದ ಹಿಡಿದು ಉದ್ಯಾನ, ಸಿಮೆಂಟ್ ರಸ್ತೆ ಮತ್ತಿತರ ಕಾಮಗಾರಿಗಳನ್ನೂ ಹಂದಿಗಳು ಹಾಳು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.