ಮುಂಬೈ: ಸರ್ಕಾರದ ರಾಷ್ಟ್ರೀಯ ಮಹತ್ವದ ಸಬ್ಸಿಡಿ ಯೋಜನೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ನಿಯಮಾವಳಿ ಸಡಿಲಿಸುವಾಗ ಭಾರತೀಯ ರಿಸರ್ವ್ ಬ್ಯಾಂಕ್ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ ಎಂದು ಆರ್ಬಿಐ ಗವರ್ನರ್ ರಘುರಾಂ ರಾಜನ್ ಕಿವಿಮಾತು ಹೇಳಿದ್ದಾರೆ.
ಇಂತಹ ಆಡಳಿತಾತ್ಮಕ ವಿಷಯಗಳಲ್ಲಿ ಆರ್ಬಿಐ ಉದಾರಿಯಾದರೆ ಆರ್ಥಿಕ ವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುತ್ತವೆ ಎಂದು ಅವರು ಶನಿವಾರ ಮುಂಬೈನಲ್ಲಿ ನಡೆದ ಭಾರತೀಯ ವಿದೇಶಿ ವಿನಿಯಮ ವರ್ತಕರ ಸಂಘದ ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದರು.
ಮೂಲಸೌಕರ್ಯ ಅಭಿವೃದ್ಧಿಯಂತಹ ರಾಷ್ಟ್ರೀಯ ಹಿತಾಸಕ್ತಿಯ ಚಟುವಟಿಕೆಗಳನ್ನು ಬೆಂಬಲಿಸಲು ಆರ್ಬಿಐ ತನ್ನ ನಿಯಮಾವಳಿ ಸಡಿಲಿಸಿದರೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬಹಳಷ್ಟು ಮೂಲಸೌಕರ್ಯಗಳಿಗೆ ಡಾಲರ್ ಇಲ್ಲವೇ ಯೆನ್ ರೂಪದಲ್ಲಿ ನೀಡಿದ ಸಾಲ ಮರು ಪಾವತಿಯಾಗಿಲ್ಲ. ಹೀಗಾಗಿ ಇಂತಹ ಚಟುವಟಿಕೆಗಳಿಗೆ ಆರ್ಬಿಐ ಬದಲು ಸರ್ಕಾರವೇ ನೇರವಾಗಿ ಸಬ್ಸಿಡಿ ನೆರವು ನೀಡಬೇಕು ಎಂದು ಅವರು ಸಲಹೆ ಮಾಡಿದರು.