ನವದೆಹಲಿ (ಪಿಟಿಐ): ಮುಂಬೈನ ಹಾಜಿ ಅಲಿ ದರ್ಗಾದ ಒಳಗೆ ಸಮಾಧಿ ಇರುವ ಸ್ಥಳಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಬಾಂಬೆ ಹೈಕೋರ್ಟ್ ನೀಡಿರುವ ಆದೇಶ ‘ಪ್ರಗತಿಪರ’ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಪ್ರಶಂಸಿಸಿದ್ದಾರೆ.
ಅಲ್ಲದೆ, ಮೂರು ಬಾರಿ ತಲಾಖ್ ಹೇಳಿ ವಿವಾಹ ವಿಚ್ಛೇದನ ನೀಡುವ ಪದ್ಧತಿಯನ್ನು ಕಾನೂನು ಬಾಹಿರ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ. ‘ಬಾಂಬೆ ಹೈಕೋರ್ಟ್ ಆದೇಶವನ್ನು ವಿರೋಧಿಸಿ ದರ್ಗಾದ ಟ್ರಸ್ಟಿಗಳು ಮೇಲ್ಮನವಿ ಸಲ್ಲಿಸಬಾರದು’ ಎಂದು ತಿವಾರಿ ಅವರು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ದರ್ಗಾದ ಒಳಗೆ ಸಮಾಧಿ ಇರುವ ಸ್ಥಳಕ್ಕೆ ಮಹಿಳೆಯರು ಹೋಗಬಾರದು ಎನ್ನುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದ ಹೈಕೋರ್ಟ್, ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಶುಕ್ರವಾರದ ಆದೇಶದ ಮೂಲಕ ತೆರವುಗೊಳಿಸಿದೆ.
ಆದರೆ, ‘ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ದರ್ಗಾದ ಟ್ರಸ್ಟಿಗಳು ಮಾಡಿದ ಮನವಿ ಆಧರಿಸಿ ತನ್ನ ಆದೇಶಕ್ಕೆ ಆರು ವಾರಗಳ ತಡೆಯಾಜ್ಞೆ ನೀಡಿದೆ.