ಸುತ್ತೂರು (ಮೈಸೂರು): ಇನ್ನು ಮೂರು ವರ್ಷದೊಳಗೆ ದೇಶದ ಎಲ್ಲಾ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಸುತ್ತೂರು ಕ್ಷೇತ್ರದಲ್ಲಿ ಶನಿವಾರ ನಡೆದ ಜೆಎಸ್ಎಸ್ ಮಹಾವಿದ್ಯಾಪೀಠದ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಇಂಚು ಕೃಷಿ ಭೂಮಿಯೂ ನೀರಾವರಿ ಕೊರತೆ ಎದುರಿಸಬಾರದು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪ್ರತಿ ಹೊಲಗಳಿಗೆ ನೀರು ಒದಗಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ರೈತರು ಸಂತೃಪ್ತರಾಗದಿದ್ದರೆ ದೇಶವೂ ಸಮೃದ್ಧಿ ಹೊಂದುವುದಿಲ್ಲ. ಅನ್ನದಾತರ ಮೊಗದಲ್ಲಿ ನೆಮ್ಮದಿ ಕಾಣುವುದು ಅಗತ್ಯವಾಗಿದೆ. 2020ರ ವೇಳೆಗೆ ದೇಶದ ರೈತರ ಆದಾಯ ದುಪ್ಪಟ್ಟು ಆಗಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆ ರೂಪಿಸುತ್ತಿದ್ದಾರೆ ಎಂದು ಹೇಳಿದರು.