ಬೆಂಗಳೂರು: ‘ಯಾವುದೇ ಪಳೆಯುಳಿಕೆ ಇಂಧನ ಬಳಸದ ಹಾಗೂ ತ್ಯಾಜ್ಯ ಸೃಷ್ಟಿಸದ ಹಸಿರು ಅಡುಗೆ ಮನೆ ಪರಿಕಲ್ಪನೆಯನ್ನು ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿನಿಲಯಗಳಲ್ಲೂ ಅನುಷ್ಠಾನ ಗೊಳಿಸಬೇಕಾದ ಅಗತ್ಯ ಇದೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಶ್ರೀಧರ್ ಅಭಿಪ್ರಾಯಪಟ್ಟರು.
ಅದಮ್ಯ ಚೇತನ ಸಂಸ್ಥೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಹಸಿರು ಅಡುಗೆಮನೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿನಿಲಯಗಳಲ್ಲಿ ಹಸಿರು ಅಡುಗೆ ಮನೆ ಪರಿಕಲ್ಪನೆಯನ್ನು ಜಾರಿಗೊಳಿಸಿದರೆ, ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಲಿದೆ. ಈ ಪರಿಕಲ್ಪನೆಯನ್ನು ಇನ್ನಷ್ಟು ಸುಧಾರಣೆ ತರುವುದಕ್ಕೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಯತ್ನಿಸಬಹುದು’ ಎಂದರು.
ಐಐಎಸ್ಸಿ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ ಮಾತನಾಡಿ, ‘ಬೆಂಗಳೂರು ಬದುಕಲು ದುಸ್ತರವಾದ ನಗರವಾಗಿ ಪರಿವರ್ತನೆಯಾಗುತ್ತಿದೆ. ಗಿಡ ಮರಗಳ ನಾಶ ಹಾಗೂ ಪರಿಸರ ಮಾಲಿನ್ಯ ಮಿತಿ ಮೀರಿದೆ. ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ನಮ್ಮ ನೈಸರ್ಗಿಕ ಕೆರೆಗಳನ್ನು ಉಳಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ’ ಎಂದರು.
‘ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಅಡುಗೆಗೆ ಜೈವಿಕ ಅನಿಲ ಬಳಸುವ ನಿರ್ಣಯವನ್ನು ಕಾರ್ಯಾಗಾರದಲ್ಲಿ ಕೈಗೊಳ್ಳಲಾಯಿತು. ಅದಮ್ಯ ಚೇತನ ಹಾಗೂ ಐಐಎಸ್ಸಿ ಇದಕ್ಕೆ ಪೂರಕ ಮಾರ್ಗದರ್ಶನ ನೀಡಲಿವೆ’ ಎಂದು ಅದಮ್ಯ ಚೇತನದ ಡಾ.ಸಮೀರ್ ಕಾಗಲ್ಕರ್ ತಿಳಿಸಿದರು.