ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಂಗುಬಾಕ ಕಪ್ಪುರಂಧ್ರ ನೀಡಿದ ಅಚ್ಚರಿ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬಾಹ್ಯಾಕಾಶದಲ್ಲಿ ಕೇವಲ ಕಣ್ಣು ಕೋರೈಸುವ ಸೂರ್ಯ, ಹೊಳೆಯುವ ಮಿಣುಕು ನಕ್ಷತ್ರಗಳು, ಗೋಲ ಆಕಾಶಕಾಯಗಳಷ್ಟೇ ಅಲ್ಲದೆ ಕಡುಗಪ್ಪು ಕುಳಿಗಳೂ ಇವೆ. ಈ ಕಪ್ಪುಕುಳಿ ಅಥವಾ ಕಪ್ಪುರಂಧ್ರವನ್ನು, ಭೂಮಿಯನ್ನೇ ನುಂಗುವ ಗುಮ್ಮ ಎಂದು ಭಾವಿಸಲಾಗಿತ್ತು.

ನಾವೆಲ್ಲರೂ ಭೂಮಿ ಮತ್ತು ಎಲ್ಲ ಗ್ರಹಗಳ ಸಮೇತ ಒಂದು ದಿನ ಕಪ್ಪು ರಂಧ್ರದೊಳಗೆ ಸೆಳೆದುಕೊಳ್ಳಲ್ಪಟ್ಟು, ಇದರ ಫಲವಾಗಿ  ಜೀವರಾಶಿಯ ಕೊನೆಯಾಗುತ್ತದೆ ಎಂಬ ಸಂಗತಿಗಳನ್ನು  ಚಿಕ್ಕಂದಿನಿಂದ ಕೇಳಿ ಬೆಳೆದಿರುತ್ತೇವೆ; ಆದರೆ ಇವೆಲ್ಲವೂ ಸತ್ಯಕ್ಕೆ ದೂರ ಎಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ, ಏಕೆಂದರೆ, ಸತ್ಯಕ್ಕಿಂತಲೂ ಬೆಳಕಿಗಿಂತಲೂ ವೇಗವಾಗಿ ಮಿಥ್ಯವು ಸಂಚಾರ ಮಾಡುತ್ತದೆ ಎನ್ನುತ್ತಾರೆ ಅನುಭವಿಗಳು!

   ಕಪ್ಪುರಂಧ್ರವೆಂದರೆ, ಅಕ್ಷರಶಃ ಕಣ್ಣಿಗೆ ಕಾಣದಷ್ಟು ಕಪ್ಪಾಗಿದ್ದು, ತನ್ನ ಸುತ್ತ ಒಂದು ನಿರ್ದಿಷ್ಟ ಅಂತರದೊಳಗಿರುವ ಎಲ್ಲವನ್ನೂ ತನ್ನ ಅಪರಿಮಿತ ಗುರುತ್ವಾಕರ್ಷಣ ಶಕ್ತಿಯಿಂದ ಒಳಗೆ ಸೆಳೆದುಕೊಳ್ಳುವ ರಂಧ್ರ; ಸುತ್ತಲಿನ ವಸ್ತುಗಳನ್ನು, ವಾಯುವನ್ನು, ಅಷ್ಟೇ ಅಲ್ಲದೇ ಬೆಳಕನ್ನೂ ಸಹ ತನ್ನೊಳಗೇ ನುಂಗಿಕೊಳ್ಳುವುದರಿಂದ ಇದು ಕಪ್ಪಾಗಿರುತ್ತದೆ.

ಇದು ಬೆಳಕನ್ನು ಪ್ರತಿಫಲಿಸುವಂತಿದ್ದರೆ, ನಮ್ಮ ಕಣ್ಣಿಗೆ ಕಾಣಿಸುತ್ತಿತ್ತು; ಆದರೆ ಇದು ಬೆಳಕನ್ನು ತನ್ನೊಳಗೆ ಲೀನವಾಗಿಸಿಕೊಳ್ಳುವುದರಿಂದ ಇದನ್ನು ಕಂಡುಹಿಡಿಯಲು ವಿಜ್ಞಾನಿಗಳು ಹರಸಾಹಸ ಪಡಬೇಕಾಗುತ್ತದೆ. ಪರೋಕ್ಷ ವಿಧಾನದಿಂದ, ಅಂದರೆ, ಬಾಹ್ಯಾಕಾಶದ ಯಾವ ಸ್ಥಳದಲ್ಲಿ ನಕ್ಷತ್ರಗಳೂ ಸೇರಿದಂತೆ ಆಕಾಶಕಾಯಗಳು ವಿಚಿತ್ರವಾಗಿ ಸುಳಿಗೆ ಸಿಕ್ಕಂತೆ ತಿಪ್ಪಾಲೆ ತಿರುಗುತ್ತಾ ಇರುತ್ತವೋ, ಅಲ್ಲೇ ಇರುತ್ತದೆ ಕಣ್ಣಿಗೆ ಕಾಣದ ಕಪ್ಪುಕುಳಿ. ಈ ಕಪ್ಪುಕುಳಿ ಅಥವಾ ಕಪ್ಪುರಂಧ್ರವು ಕೇವಲ ಒಂದು ಅಣುವಿನಷ್ಟು ಪುಟ್ಟದೂ ಇರಬಹುದು, ಹತ್ತು ಲಕ್ಷ ಸೂರ್ಯರನ್ನು ಮೀರಿಸುವಷ್ಟು ದೊಡ್ಡದೂ ಇರಬಹುದು ಎನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿಗಳು.

ಅಮೆರಿಕದ ‘ರಾಷ್ಟ್ರೀಯ ವೈಮಾನಿಕ ಮತ್ತು ಖಗೋಳ ಆಡಳಿತ ಸಂಸ್ಥೆ’ಯು (ನಾಸಾ), ತನ್ನ 'ಆಣ್ವಿಕ ವರ್ಣಪಟಲ ದೂರದರ್ಶಕ ವ್ಯೂಹ'ದ ಸಹಾಯದಿಂದ ಇದನ್ನು ಗಮನಿಸಿ ಧೃಢಪಡಿಸಿದೆ. ಇಂತಹ ಪ್ರಬಲ ದೂರದರ್ಶಕಗಳ ಮುಖಾಂತರ ತಿಳಿದುಬಂದದ್ದೆಂದರೆ, ಈ ಬೃಹತ್ ಕಪ್ಪುರಂಧ್ರವೊಂದರಿಂದ ಹೊರಬಂದದ್ದು ‘ಮಾರ್ಕಾರಿಯನ್ ಕರೋನಾ’; ಇದೊಂದು ವಿಕಿರಣ ಮೂಲವಾಗಿದ್ದು, ಎಕ್ಸ್ –ರೇಯಂತಹ ಕಿರಣಗಳನ್ನು ಉತ್ಪಾದಿಸುವ ಅಪಾರ ಶಕ್ತಿಯುಳ್ಳ ಕಣಗಳನ್ನು ಹೊಂದಿದೆ. ಈ ಬೃಹತ್ ಕರೋನಾದ ಗುಣಲಕ್ಷಣಗಳನ್ನು ಇನ್ನಷ್ಟೇ ಅಧ್ಯಯನ ನಡೆಸಬೇಕಿದೆ.

ಭಾರತದ ಗಣಿತ ದಂತಕಥೆ, ಶ್ರೀನಿವಾಸ ರಾಮಾನುಜನ್ ಅವರು ಈ ಕಪ್ಪುರಂಧ್ರಗಳ ಬಗ್ಗೆ ಯಾರಿಗೂ ಸ್ಪಷ್ಟವಾಗಿ ತಿಳಿದಿರದಿದ್ದ ಕಾಲದಲ್ಲೇ ಅಂದಾಜಿಸಿದ್ದರು. ನೂರು ವರ್ಷಗಳ ಕೆಳಗೆ, ತಮ್ಮ ಮರಣಶಯ್ಯೆಯಲ್ಲಿದ್ದಾಗ ಕನಸಿನಲ್ಲಿ ದೇವಿಯೇ ಹಲವು ಹೊಸ ಗಣಿತದ ಸೂತ್ರಗಳನ್ನು ಕರುಣಿಸಿದಳೆಂದು, ಆ ಗಣಿತಸೂತ್ರಗಳನ್ನು ರಹಸ್ಯರೂಪೀ ಸಂದೇಶಗಳಾಗಿ ಬರೆದು ಪತ್ರದ ಮುಖೇನ  ಜಿ.ಎಚ್. ಹಾರ್ಡಿಯವರಿಗೆ ಕಳುಹಿಸಿದ್ದರು. ಆ ರಹಸ್ಯ ಗಣಿತಸಂದೇಶಗಳನ್ನು ಅರ್ಥೈಸಲು 90ರಿಂದ 100 ವರ್ಷಗಳ ಕಾಲ ಗಣಿತಜ್ಞರು ಪ್ರಯತ್ನಿಸಿದ್ದರು.

ಇತ್ತೀಚೆಗೆ, ಆ ಗಣಿತಸೂತ್ರಗಳ ಅರ್ಥವನ್ನು ಭೇದಿಸಿದ ಗಣಿತಜ್ಞರಿಗೆ, ಅವುಗಳ ನಿಖರತೆ ಮತ್ತು ನೂರು ವರ್ಷಗಳ ಹಿಂದಿನ ಸೂತ್ರಗಳು ಇಂದಿಗೂ ಪ್ರಸ್ತುತವಾಗಿರುವುದು ಅತ್ಯಂತ ಅಚ್ಚರಿದಾಯಕವಾಗಿತ್ತು. ಈ ಮಹತ್ವದ ಸೂತ್ರಗಳ ನೆರವಿನಿಂದ, ಕಪ್ಪುರಂಧ್ರಗಳ ಬಗೆಗಿನ ಅಧ್ಯಯನಕ್ಕೆ ಹೊಸ ಸಾಧ್ಯತೆಗಳು ಗೋಚರವಾಗಿವೆ.

ಗಣಿತ ಮತ್ತು ಭೌತಶಾಸ್ತ್ರದ ಅನೇಕ ವಿದ್ಯಮಾನಗಳ ಅಧ್ಯಯನವನ್ನು, ರಾಮಾನುಜನ್ ರವರ ಈ ಗಣಿತ ಸೂತ್ರಗಳು ಹೊಸ ಮಜಲಿಗೆ ಕೊಂಡೊಯ್ಯುವ ಲಕ್ಷಣಗಳು ಕಂಡುಬಂದಿವೆ. ಕಪ್ಪುರಂಧ್ರದಿಂದ ಹೊರಬಂದು ಜಗತ್ತನ್ನೇ ಬೆರಗುಗೊಳಿಸಿದ ‘ಮಾರ್ಕಾರಿಯನ್ ಕರೋನಾ’ಕ್ಕೆ ಸಂಬಂಧಿತ ಮಾಹಿತಿ ಕಲೆ ಹಾಕಲು ಸಹ, ಈ ಗಣಿತಸೂತ್ರಗಳು ಸಹಾಯಕವೇನೋ ಕಾದುನೋಡಬೇಕಷ್ಟೇ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT