ಇಸ್ತಾಂಬುಲ್ನಲ್ಲಿ ಸಾರಿಗೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ಹೆಚ್ಚಿಸಲು ಟರ್ಕಿ ಸರ್ಕಾರ ‘ಬೃಹತ್ ಯೋಜನೆ’ ರೂಪಿಸಿದೆ. ಈ ಯೋಜನೆ ಜಾರಿಯಾದರೆ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದು ಟರ್ಕಿ ಹೇಳಿದೆ. ಯೂರೋಪ್ ಮತ್ತು ಏಷ್ಯಾ ನಡುವೆ ತ್ವರಿತವಾಗಿ ಸರಕು ಸಾಗಣೆ ಸಾಧ್ಯವಾಗಲಿದೆ. ಒಟ್ಟಾರೆ ಈ ಯೋಜನೆಯಿಂದ ಟರ್ಕಿಯ 20 ಲಕ್ಷ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ಜತೆಗೆ ದೇಶ ಹೂಡಿಕೆದಾರರನ್ನು ಆಕರ್ಷಿಸಲಿದೆ ಎಂದು ಟರ್ಕಿ ಹೇಳಿದೆ.
2011ರಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗಿ ಸಾಗುತ್ತಿದೆ. ಬಂಡವಾಳ ಹೂಡಿಕೆ ಕಡಿಮೆಯಾಗಿದೆ. ಈಚೆಗೆ ನಡೆದ ಸೇನೆಯ ವಿಫಲ ಧಂಗೆಯ ಪರಿಣಾಮ ಸಾವಿರಾರು ಜನ ತನಿಖೆಯ ಭಾಗವಾಗಿ ಕೆಲಸಗಳಿಂದ ಅಮಾನತಾಗಿದ್ದಾರೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವ ಮಹತ್ತರ ಜವಾಬ್ದಾರಿ ಎರ್ಡೊಗನ್ ಸರ್ಕಾರದ ಮೇಲಿದೆ.
ಇಂತಹ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡುತ್ತಿರುವುದರಿಂದ ದೇಶದ ಆರ್ಥಿಕತೆಗೆ ತೊಂದರೆ ಆಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಲಕ್ಷಾಂತರ ಮರಗಳನ್ನು ಕಡಿಯಬೇಕಿರುವುದರಿಂದ ಪರಿಸರದ ಮೇಲೂ ಕೆಟ್ಟ ಪರಿಣಾಮ ಉಂಟಾಗಲಿದೆ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ. –ಜಯಸಿಂಹ ಆರ್.
ಯಾವುಜ್ ಸುಲ್ತಾನ್ ಸೆಲಿಂ ತೂಗು ಸೇತುವೆ ಇಸ್ತಾಂಬುಲ್ನ ಗಾರಿಪ್ಸ್ (ಯೂರೋಪ್) ಮತ್ತು ಪೊಯ್ರಾಝ್ಕೋಯ್ (ಏಷ್ಯಾ) ನಡುವೆ ಸಂಪರ್ಕ ಕಲ್ಪಿಸುತ್ತದೆ. ಕಳೆದ ಶುಕ್ರವಾರ ಸಾರ್ವಜನಿಕ ಬಳಕೆಗೆ ಲಭ್ಯವಾಗಿರುವ ಈ ಸೇತುವೆ ವಿಶ್ವದ ಅತ್ಯಂತ ಅಗಲದ ತೂಗು ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
16ನೇ ಶತಮಾನದಲ್ಲಿ ಟರ್ಕಿಯನ್ನು ಆಳಿದ್ದ ಒಟ್ಟೊಮನ್ ದೊರೆಯ ಹೆಸರನ್ನು ಈ ಸೇತುವೆಗೆ ಇಡಲಾಗಿದೆ.
ಲಾಭಗಳು
ಟರ್ಕಿಯ ಎರಡು ಭಾಗಗಳ ನಡುವೆ ರಸ್ತೆ ಮತ್ತು ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ
ಎರಡು ಐತಿಹಾಸಿಕ ಸೇತುವೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ
ಸಮಯ, ಇಂಧನ ಉಳಿತಾಯದಿಂದ ದೇಶದ ಆರ್ಥಿಕತೆ ದೀರ್ಘಾವಧಿಯಲ್ಲಿ ಲಾಭವಾಗಲಿದೆ
ಬಳಕೆದಾರರ ಶುಲ್ಕದಿಂದ ಸರ್ಕಾರಕ್ಕೆ ಭಾರಿ ಆದಾಯ ಬರಲಿದೆ
ಇಸ್ತಾಂಬುಲ್ ಅನ್ನು ವಿಶ್ವದಲ್ಲೇ ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ ನಗರವನ್ನಾಗಿ ಮಾಡಲಾಗುವುದು
ರಿಸೆಪ್ ತಯ್ಯಿಪ್ ಎರ್ಡೊಗನ್
ಟರ್ಕಿ ಅಧ್ಯಕ್ಷ