ಬೆಂಗಳೂರು: ‘ಕಾಶ್ಮೀರ ಸಮಸ್ಯೆ ಬಗೆಹರಿಯುವುದು ಯಾರಿಗೂ ಬೇಡವಾಗಿದೆ. ಅದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ಲೇಖಕ ಪ್ರೊ. ಪ್ರೇಮಶೇಖರ ಅಭಿಪ್ರಾಯಪಟ್ಟರು.ನಿಲುಮೆ ತಂಡ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಜಮ್ಮು–ಕಾಶ್ಮೀರದ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಪೂರ್ತಿ ಕಾಶ್ಮೀರ ನಮಗೆ ದೊರೆಯುವುದಿಲ್ಲ ಎಂದು ತಿಳಿದ ಪಾಕಿಸ್ತಾನದ ಮೊದಲ ಅಧ್ಯಕ್ಷ ಇಸ್ಕಂದರ್ ಮಿರ್ಜಾ ಅವರು ದಾಳಿಯನ್ನು ಬಿಟ್ಟು ಮುಸ್ಲಿಮರು ಹೆಚ್ಚಿದ್ದ ಕಾಶ್ಮೀರ ಭಾಗವನ್ನು ಪಡೆಯಲು ಸಂಧಾನಕ್ಕೆ ಮುಂದಾದರು. ಆ ನಡೆಯ ನಂತರ ಅವರನ್ನು ಲಂಡನ್ಗೆ ಓಡಿಸಲಾಯಿತು.’ ‘ಅಧ್ಯಕ್ಷರಾಗಿದ್ದ ಮಹಮ್ಮದ್ ಜಿಯಾ ಉಲ್ ಹಕ್ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮುಂದಾದರು. ಅವರನ್ನು ಹತ್ಯೆ ಮಾಡಲಾಯಿತು. ಇದೇ ಹಾದಿ ತುಳಿದ ಮುಷರಫ್ ಅವರಿಗೂ ಹಿಂಸೆ ನೀಡಲಾಯಿತು. ಕಾಶ್ಮೀರ ಸಮಸ್ಯೆಯಾಗಿಯೇ ಮುಂದುವರಿಯಬೇಕು ಎಂಬುದರಲ್ಲಿ ಮೂರನೇಯವರ ಹಿತಾಸಕ್ತಿ ಎದ್ದು ಕಾಣುತ್ತಿದೆ’ ಎಂದರು.
‘ಮುಸ್ಲಿಮರ ಮೇಲಿನ ಪ್ರೀತಿಯಿಂದ ಕಾಶ್ಮೀರವನ್ನು ಪಡೆಯಲು ಪಾಕಿಸ್ತಾನ ಇಚ್ಛಿಸುತ್ತಿಲ್ಲ. ಆರ್ಥಿಕ ಸ್ಥಿತಿಯನ್ನು ಕಾಪಾ
ಡಿಕೊಳ್ಳುವ ಉದ್ದೇಶದಿಂದ ಮಾತ್ರ ಅದು ಕಾಶ್ಮೀರದ ಹಿಂದೆ ಬಿದ್ದಿದೆ. ಜಮ್ಮು–ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸುತ್ತಿರುವ ಪ್ರತ್ಯೇಕತಾವಾದಿ ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಕಾಶ್ಮೀರದ ಸಮಸ್ಯೆಯಿಂದ ಪ್ರತ್ಯೇಕತಾವಾದಿಗಳಿಗೂ ಲಾಭ ಇದೆ. ಗಲಾಟೆ ಸೃಷ್ಟಿಸಬೇಕೆಂದೇ ಅವರಿಗೆ ಪಾಕಿಸ್ತಾನದಿಂದ ಹಣ ಹರಿದು ಬರುತ್ತಿದೆ. ಇತ್ತೀ
ಚೆಗೆ ಅವರಿಗೆ ₹1.5 ಕೋಟಿ ವಾಚ್ ಸಿಕ್ಕಿದೆ. ಅವರ ಮಕ್ಕಳೆಲ್ಲ ವಿದೇಶಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಮಾತನಾಡಿ, ‘ಮಾನವ ಹಕ್ಕು ಎನ್ನುವುದು ಈಗ ಅಪರಾಧಿಗಳ ಮತ್ತು ಭಯೋತ್ಪಾದಕರ ಹಕ್ಕಾಗಿದೆ. ಅದೊಂದು ವ್ಯಾಪಾರವಾಗಿದೆ’ ಎಂದು ಹೇಳಿದರು.
‘ದೇಶದಲ್ಲಿ ಬಲವಾದ ಕಾನೂನಿನ ಅಗತ್ಯವಿದೆ. ಇತರೆ ಎಲ್ಲ ಕೆಲಸ ಬದಿಗೊತ್ತಿ ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕು. ಅಭಿವೃದ್ಧಿಯಿಂದ ಶೇ 30ರಷ್ಟು ಕಮಿಷನ್ ಬರುತ್ತದೆ ಎಂದು ಎಲ್ಲಾ ಸರ್ಕಾರಗಳು ಅಭಿವೃದ್ಧಿ ನಮ್ಮ ಮೂಲಮಂತ್ರ ಎನ್ನುತ್ತವೆ. ಸರಿಯಾದ ಕಾನೂನು ಜಾರಿಯಾದರೆ ಸಂಸತ್ತು, ವಿಧಾನಸಭೆ ಶೇ 80ರಷ್ಟು ಖಾಲಿಯಾಗುತ್ತವೆ’ ಎಂದು ಶಂಕರ ಬಿದರಿ ಅವರು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.