ಚಿಲ್ಲರೆ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಬಸ್ ಪ್ರಯಾಣ ಮಾಡುವಾಗಂತೂ ಪ್ರಯಾಣಿಕರು ಹಾಗೂ ಕಂಡಕ್ಟರ್ಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಇಬ್ಬರ ಮಧ್ಯೆ ವಾಗ್ವಾದಗಳು ನಡೆಯುತ್ತವೆ. ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗುವುದಿದೆ.
ಚಿಲ್ಲರೆ ಇಲ್ಲದ ಕಾರಣ ಕೆಲವೊಮ್ಮೆ ಜನ ಇಳಿಯಬೇಕಾದ ಸ್ಥಳದಲ್ಲಿ ಇಳಿಯದೆ ಚಿಲ್ಲರೆ ದೊರಕಿದ ನಂತರ ಮುಂದಿನ ನಿಲುಗಡೆಗೆ ಹೋಗಿ ಇಳಿಯುವಂತಾಗಿದೆ. ಇನ್ನು ಕೆಲವರು ಒಂದೆರಡು ರೂಪಾಯಿ ಸಲುವಾಗಿ ವಾಗ್ವಾದ ಯಾಕೆಂಬ ಕಾರಣಕ್ಕೆ ಚಿಲ್ಲರೆ ಪಡೆಯದೆ ಬೇಸರದಿಂದ ಇಳಿದುಹೊಗುತ್ತಾರೆ.
ಒಮ್ಮೊಮ್ಮೆ ಕಂಡಕ್ಟರ್ ಈ ಸಮಸ್ಯೆಯಿಂದ ಪಾರಾಗಲು ಇಬ್ಬರು ಪ್ರಯಾಣಿಕರ ಚಿಲ್ಲರೆ ಹಣವನ್ನು ಒಟ್ಟುಗೂಡಿಸಿ ಒಂದೇ ನಾಣ್ಯವನ್ನು ಒಬ್ಬರಿಗೆ ಕೊಟ್ಟು, ಹಂಚಿಕೊಳ್ಳಲು ತಿಳಿಸುತ್ತಾರೆ. ಇದರಿಂದ ಮಹಿಳೆಯರು ಹಾಗೂ ವೃದ್ಧರಿಗೆ ತೊಂದರೆಯಾಗುತ್ತಿದೆ.
ಸರ್ಕಾರ ಈ ಕಡೆ ಗಮನಹರಿಸಬೇಕು. ಅಗತ್ಯಕ್ಕೆ ಅನುಸಾರ ನಾಣ್ಯಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕಿದೆ.