ಕಾಸರಗೋಡು: ಸೂಕ್ತ ಚಿಕಿತ್ಸಾ ಸೌಲಭ್ಯವಿಲ್ಲದೆ ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ಎಚ್ಐವಿ ಸೋಂಕು ಬಾಧಿತ ಕನಿಷ್ಠ 10 ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಮಂಜೇಶ್ವರ, ಧರ್ಮತ್ತಡ್ಕ, ಬಂದ್ಯೋಡು, ಕಾಸರಗೋಡು, ವೆಳ್ಳರಿಕುಂಡು ಮತ್ತು ನೀಲೇಶ್ವರ ಎಂಬಲ್ಲಿ ವಾಸಿಸುತ್ತಿರುವ ರೋಗಿಗಳು ಮೃತಪಟ್ಟಿದ್ದಾರೆ.
ಕೇರಳ ರಾಜ್ಯದಲ್ಲೇ ಅತ್ಯುತ್ತಮ ಚಿಕಿತ್ಸಾ ಕೇಂದ್ರವೆಂದು ಹೆಗ್ಗಳಿಕೆ ಪಡೆದಿರುವ ಕಾಸರಗೋಡು ಎಆರ್ಟಿ ಕೇಂದ್ರದಲ್ಲಿ ತಜ್ಞ ವೈದ್ಯರನ್ನು ನೇಮಿಸದೇ ಇರುವುದು, ನಿರಂತರ ರೋಗ ತಪಾಸಣೆ, ಔಷಧೋಪಚಾರ, ಹಾಗೂ ಪೋಷಕ ಆಹಾರ ನೀಡದೇ ಇರುವುದೇ ಎಚ್ಐವಿ ಸೋಂಕು ಬಾಧಿತರ ಸಾವಿಗೆ ಕಾರಣ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ.
ಕಾಸರಗೋಡು ಎಆರ್ಟಿ ಕೇಂದ್ರದಲ್ಲಿ ಒಟ್ಟು 970 ಮಂದಿ ಎಚ್ಐವಿ ಬಾಧಿತರು ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ ಶೇ 50 ರಷ್ಟು ಮಂದಿಯನ್ನು ಪ್ರತಿ ವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗಿದೆ.
ವೈದ್ಯರ ಸಲಹೆ ಮೇರೆಗೆ ಔಷಧಿ ಹಾಗೂ ಪೋಷಕ ಆಹಾರ ನೀಡಲಾಗುತ್ತಿತ್ತು. ಆದರೆ ಮೇ ತಿಂಗಳಿಂದ ಈ ಕೇಂದ್ರದಲ್ಲಿ ವೈದ್ಯರ ಸೇವೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದು, ಪೋಷಕ ಆಹಾರವನ್ನೂ ಐದು ತಿಂಗಳಿಂದ ಆರೋಗ್ಯ ಇಲಾಖೆ ಕಡಿತಗೊಳಿಸಿದೆ ಎಂದು ಅಧಿಕಾ ರಿಯೊಬ್ಬರು ತಿಳಿಸಿದ್ದಾರೆ.
ಎಚ್ಐವಿ ಬಾಧಿತರ ರೋಗ ಪ್ರತಿರೋಧಕ ಶಕ್ತಿ ಪರೀಕ್ಷೆ ಮಾಡುವ ಸಿ.ಡಿ. ಪರೀಕ್ಷೆಯನ್ನು ಮಾಡುವ ಸಿ.ಡಿ.–4 ಯಂತ್ರವನ್ನು ಎರಡು ವರ್ಷಗಳ ಹಿಂದೆ ₹10 ಲಕ್ಷ ವೆಚ್ಚದಲ್ಲಿ ಖರೀದಿಸಲಾಗಿತ್ತು. ಆದರೆ, ಈ ಯಂತ್ರ ಒಂದು ದಿನವೂ ಕೆಲಸ ಮಾಡದೆ ಮೂಲೆಗುಂಪಾಗಿದೆ ಎಂದು ರೋಗಿಗಳ ಕುಟುಂಬದವರು ದೂರುತ್ತಿದ್ದಾರೆ.