ಮದುರೆ: ‘ಮನೆಕೆಲಸದವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಶಶಿಕಲಾ ಪುಷ್ಪಾ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ ಆದೇಶವನ್ನು ಮದ್ರಾಸ್ ಹೈಕೋರ್ಟ್ ಪೀಠ ಸೋಮವಾರ ಕಾದಿರಿಸಿದೆ.
ಎಐಎಡಿಎಂಕೆ ಪಕ್ಷದ ರಾಜ್ಯಸಭೆ ಸದಸ್ಯೆಯಾಗಿದ್ದ ಪುಷ್ಪಾ ಅವರನ್ನು ಕೆಲ ದಿನಗಳ ಹಿಂದೆ ಉಚ್ಚಾಟನೆ ಮಾಡಲಾಗಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ವಿಚಾರಣೆಗಾಗಿ ಶಶಿಕಲಾ ಅವರು ಪೀಠದ ಮುಂದೆ ಸೋಮವಾರ ಹಾಜರಾಗಿದ್ದರು. ಅವರ ಅರ್ಜಿ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕೋರ್ಟ್ಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಆ.26 ರಂದು ಹೇಳಿತ್ತು.
ರಾಜೀನಾಮೆ ನೀಡಲಾರೆ(ಚೆನ್ನೈ ವರದಿ): ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಶಶಿಕಲಾ ಪುಷ್ಪಾ ಸೋಮವಾರ ಹೇಳಿದ್ದಾರೆ. ‘ನಾನು ರಾಜ್ಯಸಭೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದ್ದಾರೆ. ಶಶಿಕಲಾ, ಅವರ ಪತಿ ಮತ್ತು ಪುತ್ರನ ವಿರುದ್ಧ ಆಗಸ್ಟ್ 22 ರ ಒಳಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ದೆಹಲಿ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿತ್ತು.