ಬೆಂಗಳೂರು: ನಗರದ ಕಂದಾಯ ಭವನದ ಗ್ರೇಡ್–2 ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ನಿವೃತ್ತ ತಹಸೀಲ್ದಾರ್ ವೀರೇಶ್ ಅವರನ್ನು ಸಾರ್ವಜನಿಕರು ಥಳಿಸಿದ್ದಾರೆ.
‘ನಿವೃತ್ತಿ ನಂತರವೂ ಕಚೇರಿಗೆ ಬರುತ್ತಿದ್ದ ವೀರೇಶ್ ಅವರು ಸಾರ್ವಜನಿಕರ ಕೆಲಸಗಳಿಗೆ ಅಡ್ಡಿ ಪಡಿಸುತ್ತಿದ್ದರು. ಜತೆಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಇದರಿಂದ ಕೋಪಗೊಂಡ ಸಾರ್ವಜನಿಕರು ವೀರೇಶ್ ಅವರನ್ನು ಥಳಿಸಿದ್ದಾರೆ’ ಎಂದು ಹಲಸೂರು ಗೇಟ್ ಪೊಲೀಸರು ತಿಳಿಸಿದರು.
‘ಸುದ್ದಿ ತಿಳಿದು ಸ್ಥಳಕ್ಕೆ ಹೋಗಿ ವೀರೇಶ್ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು. ಈ ಘಟನೆ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಈ ಬಗ್ಗೆ ಯಾರೂ ದೂರು ನೀಡಿಲ್ಲ’ ಎಂದು ಅವರು ತಿಳಿಸಿದರು.