ಬೆಂಗಳೂರು: ವಸಂತನಗರದ ಶಾಂಗ್ರಿಲಾ ಹೋಟೆಲ್ ಬಳಿ ರಸ್ತೆ ಕುಸಿದ ಬೆನ್ನಲ್ಲೇ ಸೋಮವಾರ ಕಸ್ತೂರ ಬಾ ರಸ್ತೆಯ ಕ್ವೀನ್ಸ್ ವೃತ್ತದ ಮಧ್ಯದಲ್ಲೇ ದೊಡ್ಡ ಗಾತ್ರದ ರಂಧ್ರ ಕಾಣಿಸಿಕೊಂಡಿದೆ.
ಕುಸಿತಗೊಂಡ ಜಾಗದ ಸುತ್ತಲೂ ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಪೊಲೀಸರು ಬ್ಯಾರಿಯರ್ಸ್ಗಳನ್ನು ಇಟ್ಟು, ಸಂಚಾರವನ್ನು ನಿರ್ಬಂಧಿಸಿದರು. ಇದರಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿತ್ತು.
‘ರಸ್ತೆಯಲ್ಲಿ ಹಾದು ಹೋಗಿರುವ ಒಳಚರಂಡಿಯ ನೀರು ಆಗಾಗ್ಗೆ ಉಕ್ಕುತ್ತದೆ. ಇದರಿಂದ ಮ್ಯಾನ್ಹೋಲ್ಗಳು ಕುಸಿಯುವುದು, ರಸ್ತೆಯಲ್ಲಿ ರಂಧ್ರ ಬೀಳುವುದು ಸಾಮಾನ್ಯವಾಗಿದೆ. ರಂಧ್ರ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದು ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.
‘ಸರ್ಕಾರಿ ಮತ್ಸ್ಯಾಲಯದ ಎದುರು ಮ್ಯಾನ್ಹೋಲ್ನಲ್ಲಿ ಕೊಳಚೆ ನೀರು ಉಕ್ಕಿ ರಸ್ತೆಗೆ ಬರುತ್ತದೆ. ದುರ್ವಾಸನೆ ಬೀರುವ ಜತೆಗೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತದೆ. ಇದೇ ಜಾಗದಲ್ಲಿ ಈ ಹಿಂದೆ ರಸ್ತೆ ಕುಸಿದಿತ್ತು. ಆಗ ಸಿಮೆಂಟ್ ಹಾಕಿ ಮುಚ್ಚಲಾಗಿತ್ತು’ ಎಂದು ಹೇಳಿದರು.