ಪರ್ವವೆಂದರೆ ಹಬ್ಬ. ಹಬ್ಬವೆಂದರೆ ಸಡಗರ, ಸಂಭ್ರಮ, ಸಂತೋಷ. ವಿವಿಧ ಉಡುಗೆ ತೊಡುಗೆಗಳು, ಬಗೆಬಗೆಯ ತಿಂಡಿ ತಿನಿಸುಗಳು, ಆಮೋದ ಪ್ರಮೋದಗಳು ನೆನಪಾಗುತ್ತವೆ. ಕಣ್ಣಮುಂದೆ ಭೋಗ ವಿಭವ ನಿಲ್ಲುತ್ತದೆ.
ಆದರೆ ದಶಲಕ್ಷಣ ಪರ್ವ, ಭೋಗದ ಪರ್ವವಲ್ಲ, ತ್ಯಾಗದ ಪರ್ವ, ವೀತರಾಗಿ ಪರ್ವ. ವೈರಾಗ್ಯದ ಕಡೆ ಮನಸ್ಸನ್ನು ಬಾಗಿಸುವ ಪರ್ವ.
ಇದು ವರ್ಷದಲ್ಲಿ ಮೂರು ಬಾರಿ ಬರುವುದು. ಆದರೆ ಚಾತುರ್ಮಾಸ್ಯದ ನಿಮಿತ್ತ ದಿಗಂಬರ ಮುನಿಗಳ ಸಾನ್ನಿಧ್ಯ, ಮಾರ್ಗದರ್ಶನ ದೊರೆಯುವ ಭಾದ್ರಪದ ಮಾಸದಲ್ಲಿ ಬರುವ ಪರ್ವಕ್ಕೆ ವಿಶೇಷ ಮಹತ್ವ ಬಂದಿದೆ. ಈ ಮಾಸದ ಶುದ್ಧ ಪಂಚಮಿಯಿಂದ ಚತುರ್ದಶಿಯವರೆಗೆ- 10 ದಿನಗಳ ಕಾಲ - ಆಚರಿಸಲಾಗುವುದು. ಅಲ್ಲದೆ ಪರ್ವದ ಮುಕ್ತಾಯದ ಮಾರನೆಯ ದಿನ ಕ್ಷಮೆ ಕೇಳುವ ದಿನವಾಗಿದೆ.
ಈ ಪರ್ವ ಯಾವ ವ್ಯಕ್ತಿಗಾಗಲಿ, ಯಾವುದೇ ಘಟನೆಗಾಗಲಿ ಸಂಬಂಧಿಸಿದ್ದಲ್ಲ. ಎಲ್ಲ ಕಾಲದ, ಎಲ್ಲ ಪ್ರದೇಶದ, ಎಲ್ಲ ಜೀವಗಳಿಗೆ ಸಂಬಂಧಿಸಿದ ಆಂತರಿಕವಾದ ಆಧ್ಯಾತ್ಮಿಕ ಪರ್ವ. ಇದು ನಮ್ಮನಮ್ಮ ಭವನೆಗಳನ್ನು ತಿದ್ದಿ, ತೀಡಿ, ಸೋಸಿ, ಪರಿಶುದ್ಧಗೊಳಿಸಿ ಕೊಳ್ಳುವ ಹಬ್ಬ. ವಿಕಾರಿ ಭಾವನೆಗಳನ್ನು ಪರಿತ್ಯಜಿಸಿ, ಉದಾತ್ತ ಭಾವನೆಗಳನ್ನು ಸ್ವೀಕರಿಸುವುದೇ ಈ ಪರ್ವದ ಮೂಲ ಉದ್ದೇಶ.
ಈ ಪರ್ವದಲ್ಲಿ ಶ್ರದ್ಧಾವಂತರು ಸಂಯಮಿಗಳಾಗುತ್ತಾರೆ. ಪೂಜಾ ಪಾಠಗಳಲ್ಲಿ ನಿರತರಾಗುತ್ತಾರೆ. ತಮಗೆ ಶಕ್ತಿ ಇದ್ದಷ್ಟು ಉಪವಾಸ ಮಾಡುತ್ತಾರೆ. ಸ್ವಾಧ್ಯಾಯ, ತತ್ತ್ವಚರ್ಚೆಯಲ್ಲಿ ತೊಡಗುತ್ತಾರೆ. ವಿದ್ವಾಂಸ ಪ್ರವಚನ ಕೇಳುತ್ತಾರೆ.
ಶ್ರಮಣರಿದ್ದರೆ ಧರ್ಮ ಶ್ರವಣ ಮಾಡುತ್ತಾರೆ. ಒಟ್ಟಿನಲ್ಲಿ ಶ್ರಾವಕರು ಭಾವತಪಸ್ವಿಗಳಾಗುತ್ತಾರೆ. ಅಲ್ಲದೆ ದಶಲಕ್ಷಣ ಹೆಸರಿನ ನೋಂಪಿಯೊಂದಿದೆ, ಅದನ್ನು ಕೆಲವರು ಹಿಡಿಯುತ್ತಾರೆ.
‘ಧರ್ಮ’ವನ್ನು ಅನೇಕ ಮಗ್ಗಲುಗಳಿಂದ ಆಚಾರ್ಯರು ಹೀಗೆ ಸೂತ್ರೀಕರಿಸಿದ್ದಾರೆ- 1. ಧರ್ಮ ವಸ್ತು ಸ್ವಭಾವವಾಗಿದೆ. 2. ಧರ್ಮ ರತ್ನತ್ರಯ ಧರ್ಮವಾಗಿದೆ. 3. ಧರ್ಮ ಎಲ್ಲ ಜೀವಗಳ ರಕ್ಷಣೆಯಾಗಿದೆ. 4. ಧರ್ಮವು ಕ್ಷಮಾದಿ ಭಾವನೆಗಳ ದೃಷ್ಟಿಯಿಂದ ದಶವಿಧವಾಗಿದೆ. ಕೊನೆಯ ಈ ದಶ ಧರ್ಮಗಳ ಆರಾಧನೆಯೇ ದಶಲಕ್ಷಣ ಪರ್ವದ ಪರಮ ಲಕ್ಷ್ಯವಾಗಿದೆ.
ಧರ್ಮದ ಆ ದಶ ಲಕ್ಷಣಗಳು ಹೀಗಿವೆ-
ಉತ್ತಮ ಖಮ-ಮದ್ದವಜ್ಜವ-ಸಚ್ಚ-ಸಉಚ್ಚಂ ಚ ಸಂಜಮಂ ಚೇವ |
ತವ-ಚಾಗಮಕಿಂಚಣ್ಹಂ, ಬಂಹ ಇದಿ ದಸವಿಹೋ ಧಮ್ಮೋ ||
ಉತ್ತಮ ಕ್ಷಮೆ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ. ತಪ, ತ್ಯಾಗ, ಆಕಿಂಚನ್ಯ ಹಾಗೂ ಬ್ರಹ್ಮಚರ್ಯ - ಇವು ಹತ್ತು ಧರ್ಮಗಳಾಗಿವೆ.
ಈ ಒಂದೊಂದು ಧರ್ಮಗಳು ಪರ್ವದ ಒಂದೊಂದು ದಿನಗಳಿಗೆ ಮೀಸಲಾಗಿದೆ.
ಆ ದಿನ ಆಯಾ ಧರ್ಮದ ಸ್ವಭಾವ ಹಾಗೂ ಅದನ್ನು ಕೆಡಿಸುವ ವಿಭಾವದ ಬಗ್ಗೆ ಚರ್ಚಿಸಲಾಗುವುದು. ಧರ್ಮದ ಈ ಲಕ್ಷಣಗಳನ್ನು ತಿಳಿಯುವುದರ ಮೂಲಕ ಧರ್ಮ(ಎಂದರೆ ಆತ್ಮಧರ್ಮ)ವನ್ನು ಅರಿಯಲು ಪ್ರಯತ್ನಿಸಲಾಗುವುದು. ಇದೇ ಈ ಪರ್ವದ ಪ್ರಯೋಜನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.