ರಾಜ್ಯದಲ್ಲಿ ಮನೆಮಾತಾಗಿದ್ದ ಜೀ ಕನ್ನಡ ವಾಹಿನಿಯ ರಿಯಾಲಿಟಿ ಷೋ ‘ಸರೆಗಮಪ ಲಿಟಲ್ ಚಾಂಪ್ಸ್’ನ ಸೀಸನ್–12ಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರದಿಂದ (ಸೆಪ್ಟೆಂಬರ್ 17) ರಾತ್ರಿ 7.30ಕ್ಕೆ ಮಕ್ಕಳ ದನಿಯ ಮಾಧುರ್ಯತೆಯನ್ನು ವೀಕ್ಷಕರು ಸವಿಯಬಹುದಾಗಿದೆ.
ಯಶಸ್ವಿ ನಿರೂಪಕಿ ಅನುಶ್ರೀ ‘ಸರೆಗಮಪ’ದ ನಿರೂಪಣೆಯ ಹೊಣೆ ವಹಿಸಿಕೊಂಡಿದ್ದಾರೆ. ನಿರ್ಣಾಯಕರಾಗಿ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇರಲಿದ್ದಾರೆ.
ಈ ಸಲದ ಕಾರ್ಯಕ್ರಮದಲ್ಲಿ ಒಂದಷ್ಟು ವಿಶೇಷತೆ ಇರಲಿದೆ. ಪ್ರತಿ ಸಂಚಿಕೆಯಲ್ಲೂ ಸಂಗೀತ ಲೋಕದ ಗಾಯಕರು, ಸಂಗೀತ ನಿರ್ದೇಶಕರು, ತಂತ್ರಜ್ಞರು, ವಾದ್ಯದವರು... ಹೀಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 20 ಜನರ ಜ್ಯೂರಿ ಪಾನೆಲ್ ಮಕ್ಕಳ ಗಾಯನ ನೋಡಿ ತೀರ್ಪು ನೀಡಲಿದೆ.
ಹಾಗಾದರೆ, ನಿರ್ಣಾಯಕರು ಏನು ಮಾಡಲಿದ್ದಾರೆ ಎಂದು ಹುಬ್ಬೇರಿಸಬೇಡಿ. ಆ ಗುಟ್ಟು ಕಾರ್ಯಕ್ರಮದಲ್ಲಿ ರಟ್ಟಾಗಲಿದೆ. ಸದ್ಯ ಅಲ್ಲಿಯವರೆಗೆ ಕಾಯಬೇಕಷ್ಟೆ.
ಕಾರ್ಯಕ್ರಮಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸುಮಾರು 5 ಸಾವಿರ ಮಕ್ಕಳಿಗೆ ಆಡಿಷನ್ ನಡೆಸಿ, 30 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಮೆಗಾ ಆಡಿಷನ್ನಲ್ಲಿ 15 ಮಕ್ಕಳನ್ನು ಆಯ್ಕೆ ಮಾಡುವ ಯೋಜನೆಯಿದೆ. ಕಳೆದ ಸೀಸನ್ನಂತೆ ಈ ಬಾರಿಯೂ 5 ವರ್ಷದಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಆದ್ಯತೆ ನೀಡಲಾಗಿದೆ.