ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ರೋಗಾಣು ಪತ್ತೆ ಕೇಂದ್ರ

ನಿರೋಧಕ ಶಕ್ತಿ ಪಡೆದ ದೈತ್ಯ ರೋಗಾಣುಗಳು ಈಗ ವಿಶ್ವಕ್ಕೇ ಸವಾಲು
Last Updated 16 ಸೆಪ್ಟೆಂಬರ್ 2016, 20:29 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ನಿತ್ಯವೂ ಹುಟ್ಟಿಕೊಳ್ಳುವ ಹೊಸ ಬಗೆಯ ಮಾರಣಾಂತಿಕ ರೋಗಾಣುಗಳ ಪತ್ತೆಗೆ  ಬೆಂಗಳೂರಿನಲ್ಲಿ ಸಂಶೋಧನಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ವಿಶ್ವ ವಿಖ್ಯಾತ  ರೋಗಾಣು ನಿರೋಧಕ ವಿಜ್ಞಾನಿ, ಹಾಗೂ ಯು.ಕೆಯ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಉಪಕುಲಪತಿ ಸರ್‌ ಲೆಜೇಕ್‌ ಬಾರ್ಸಿವಿಜ್‌ ಹೇಳಿದ್ದಾರೆ.

ಭಾರತ ಪ್ರವಾಸದ ಅಂಗವಾಗಿ ಬೆಂಗಳೂರಿನ ಐಐಎಸ್‌ಸಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿರುವ ಅವರು ‘ಪ್ರಜಾವಾಣಿ’ಗೆ ಶುಕ್ರವಾರ ವಿಶೇಷ ಸಂದರ್ಶನ ನೀಡಿದರು.

ಭಾರತ ಸೇರಿದಂತೆ ವಿಶ್ವವನ್ನು ಹೊಸದಾಗಿ ಕಾಡುತ್ತಿರುವ ಘೋರ ಸಮಸ್ಯೆ ಎಂದರೆ, ರೋಗಾಣುಗಳೇ ಪ್ರತಿರೋಧಕ ಶಕ್ತಿಗಳನ್ನು ಬೆಳೆಸಿಕೊಂಡಿರುವುದು.  ಅಂದರೆ, ರೋಗಕಾರಕ ಸೂಕ್ಷ್ಮ ಜೀವಿಗಳು ಎಲ್ಲ ಬಗೆಯ ಔಷಧಿಗಳಿಗೂ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವುದೇ ಈಗ ಜಗತ್ತಿನ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು.

ಕ್ಷಯ, ಎಚ್‌ಐವಿ, ಮಲೇರಿಯಾ ಸೇರಿದಂತೆ ಹಲವು ಬಗೆಯ ಮಾರಕ ಸೋಂಕು ರೋಗಗಳಿಗೆ ಸೂಕ್ಷ್ಮಜೀವಿಗಳು ಯಾವುದಕ್ಕೂ ಬಗ್ಗದ ಸ್ಥಿತಿ ತಲುಪಿರುವುದು ಆತಂಕಕಾರಿಯಾಗಿದೆ. ಅಲ್ಲದೆ, 30 ವರ್ಷಗಳಿಂದೀಚೆಗೆ ಹೊಸ ಬಗೆಯ ಸೂಕ್ಷ್ಮ ಜೀವಿಗಳು ಮಾನವ ಆರೋಗ್ಯಕ್ಕೆ ಬೆದರಿಕೆಯಾಗಿವೆ. ಹೊಸ ವರ್ಗದ ಸೂಕ್ಷ್ಮಜೀವಿಗಳನ್ನು ಬೆಂಗಳೂರಿನ ಸಂಶೋಧನಾ ಘಟಕ  ಪತ್ತೆ ಹಚ್ಚುವ ಕಾರ್ಯ ಮಾಡಲಿದೆ.  ಆದರೆ, ಈ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ಕಾಣುತ್ತಿಲ್ಲ ಎಂದು ಬಾರ್ಸಿವಿಚ್‌ ನಿರಾಸೆ ವ್ಯಕ್ತಪಡಿಸಿದರು.

‘ರೋಗಾಣುಗಳು ಔಷಧ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಮುಖ್ಯ ಕಾರಣವೇ ಜನರು. ಅವಶ್ಯಕತೆ ಇರಲಿ, ಬಿಡಲಿ ರೋಗ ನಿರೋಧಕ ಔಷಧವನ್ನು ಸೇವಿಸುತ್ತಾರೆ.

ಸಾಕಷ್ಟು ಸಂದರ್ಭಗಳಲ್ಲಿ ಅವುಗಳ ಅವಶ್ಯಕತೆಯೇ ಇರುವುದಿಲ್ಲ. ಆದರೆ, ಯಾಂತ್ರಿಕವಾಗಿ ಗುಳಿಗೆಗಳನ್ನು ನುಂಗುವುದನ್ನು ಬಿಡುವುದಿಲ್ಲ. ವೈವಿಧ್ಯಮಯ ರೋಗಾಣುಗಳ   ಸೃಷ್ಟಿಗೆ ನಾವೇ ಕಾರಣಾಗುತ್ತಿದ್ದೇವೆ.  ಇದರ ವ್ಯತಿರಿಕ್ತ ಪರಿಣಾಮವನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಜನರಿಲ್ಲ ’ಎಂದು ಹೇಳಿದರು.

ರೋಗಾಣುಗಳು ಔಷಧ ನಿರೋಧಕ ಶಕ್ತಿಯನ್ನು  ಬೆಳೆಸಿಕೊಳ್ಳುವುದನ್ನು ತಪ್ಪಿಸಬೇಕಾದರೆ, ವೈದ್ಯರು ಮತ್ತು ಜನರಲ್ಲಿ ಅರಿವು ಮೂಡಿಸುವ ಮೂಲಕ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ ಎಂದು ಲೆಜೇಕ್‌ ಬಾರ್ಸಿವಿಜ್‌ ತಿಳಿಸಿದರು.

ಕಡಿಮೆ ವೆಚ್ಚದ ಔಷಧ: ಹೃದ್ರೋಗ, ಕ್ಯಾನ್ಸರ್ ಗಳಂತಹ ಕಾಯಿಲೆಗಳಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಔಷಧವನ್ನು ತಯಾರಿಸುವ    ಪ್ರಯತ್ನಗಳು ನಡೆದಿವೆ. ಇದು ಸಾಕಾರಗೊಳಿಸಲು ವಿಜ್ಞಾನಿಗಳ ಜೊತೆ ಔಷಧಿ ಕಂಪನಿಗಳೂ ಕೈಜೋಡಿಸಬೇಕಾಗಿದೆ ಎಂದರು.

ಪರಿಣಾಮಕಾರಿ ಚಿಕಿತ್ಸೆ, ರೋಗ ಪತ್ತೆ ಹಚ್ಚುವ ವ್ಯವಸ್ಥೆ  ಮತ್ತು ಕೈಗೆಟಕುವ ದರದ ಔಷಧಿ ಲಭ್ಯತೆ ಈ ಮೂರೂ ಒಟ್ಟಿಗೆ ನಡೆಯಬೇಕಾದ ಕೆಲಸ. ಇವು ಒಂದಕ್ಕೊಂದು ಪೂರಕವಾಗಿದ್ದು, ಇದರಿಂದ ರೋಗಿಗಳಿಗೆ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟರು.

‘ಸದ್ಯದ ಸ್ಥಿತಿಯಲ್ಲಿ ವಿಜ್ಞಾನಿಗಳ ಸಂಶೋಧನೆಯ ಲಾಭ ಜನರಿಗೆ ಸಿಗುತ್ತಿಲ್ಲ. ಅದರ ಪ್ರಯೋಜನ ಜನರಿಗೆ ಕಡಿಮೆ ಬೆಲೆಯಲ್ಲೇ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದರು.

‘ಐಐಎಸ್‌ಸಿ ಮತ್ತು ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ(ಎನ್‌ಸಿಬಿಎಸ್‌)ಗಳಲ್ಲಿ ಕ್ಯಾನ್ಸರ್‌, ಮಧುಮೇಹಗಳಿಗೆ ಔಷಧಗಳ ಅಭಿವೃದ್ಧಿಯಲ್ಲಿ ನಾವು ಕೈ ಜೋಡಿಸಿದ್ದೇವೆ’ ಎಂದು ತಿಳಿಸಿದರು.

ಭಾರತದ ಜೊತೆ ಸಹಕಾರ: ಕೇಂಬ್ರಿಜ್‌ ವಿಶ್ವವಿದ್ಯಾಲಯವು ಭಾರತದ ಜೊತೆ  280  ವಿಜ್ಞಾನದ ಸಂಶೋಧನಾ  ಯೋಜನೆಗಳಲ್ಲಿ ಸಹಭಾಗಿತ್ವ ಹೊಂದಿದೆ. ಭಾರತವು ಪ್ರತಿಭಾನ್ವಿತ ಯುವ ವಿಜ್ಞಾನಿಗಳನ್ನು ಹೊಂದಿದೆ. ಇವರ ನೆರವಿನಿಂದ ವಿಜ್ಞಾನದ  ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳಿಗೆ ಅನುಕೂಲವಾಗುವ ಶ್ರೇಷ್ಠ ಸಂಶೋಧನೆಗಳನ್ನು ನಡೆಸಬಹುದು. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯ ಸದಾ ಮುಂಚೂಣಿಯಲ್ಲಿದೆ ಎಂದರು.

***
ಮೂಲಭೂತ ಸಂಶೋಧನೆ ರೈತರಿಗೆ ತಲುಪಬೇಕು

ಕೇಂಬ್ರಿಜ್‌ ವಿಶ್ವವಿದ್ಯಾಲಯ ಮಾತ್ರವಲ್ಲದೆ, ಬ್ರಿಟನ್‌ನ ಇತರ ಸಂಶೋಧನಾ  ಸಂಸ್ಥೆಗಳು ಭಾರತದ ಜೈವಿಕ ತಂತ್ರಜ್ಞಾನ ಇಲಾಖೆ ಜೊತೆಗೆ ಸೇರಿ, ವಿವಿಧ ಆಹಾರ ಧಾನ್ಯಗಳ ಇಳುವರಿ ಹೆಚ್ಚಳ, ಬರ ಮತ್ತು ರೋಗ ನಿರೋಧಕ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಕೈ ಹಾಕಿವೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ.

ನಮ್ಮ ಪ್ರಮುಖ ಉದ್ದೇಶ  ವಿಜ್ಞಾನದ ಮೂಲಭೂತ ಸಂಶೋಧನೆಯು ಕೃಷಿಕರಿಗೆ ತಲುಪಬೇಕು ಮತ್ತು ಆ ಮೂಲಕ    ಆಹಾರ ಭದ್ರತೆ, ಸುಸ್ಥಿರ ಕೃಷಿಯನ್ನು ಸಾಧಿಸುವುದರ ಜೊತೆಗೆ ರೈತರ ಬದುಕು ಹಸನಾಗಬೇಕು. ಸಂಶೋಧನೆ ಇಡೀ ಜಗತ್ತಿನ ಸಮಾಜಕ್ಕೆ ಅನುಕೂಲಕರವಾಗಲೆಂದು ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT