ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ಮತ್ತು ‘ನಮ್ಮ ಸೈಕಲ್’ ಸಂಘಟನೆ ಜಂಟಿಯಾಗಿ ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ಸೆ.27ರಂದು ‘ಬೆಂಗಳೂರು ಸೈಕಲ್ ಯಾತ್ರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೈಕಲ್ ಯಾತ್ರೆಯನ್ನು ಎರಡು ರೀತಿಯಲ್ಲಿ ವಿಭಾಗಿಸಲಾಗಿದ್ದು, ನಗರದ ಕೆಲ ಪ್ರದೇಶಗಳ ಇತಿಹಾಸ ಹಾಗೂ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಸಲಾಗುತ್ತದೆ. ನಗರದ ಟ್ರಿನಿಟಿ ಕಟ್ಟಡದಿಂದ ಪ್ರಾರಂಭವಾಗಿ ಎಂ.ಜಿ. ರಸ್ತೆಯಲ್ಲಿರುವ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಕಚೇರಿ, ಚಿನ್ನಸ್ವಾಮಿ ಕ್ರೀಡಾಂಗಣ, ರಾಜಭವನ, ಅಂಚೆ ಕಚೇರಿ, ಸಂಗ್ರಹಾಲಯಕ್ಕೆ ಭೇಟಿ ನೀಡಲಾಗುತ್ತದೆ.
ಲಾಲ್ಬಾಗ್ ಪಶ್ಚಿಮ ದ್ವಾರ, ಟಿಪ್ಪು ಅರಮನೆ, ದೊಡ್ಡ ಬಸವನಗುಡಿ, ರಾಮಸೇವಾ ಮಂಡಳಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಂಸ್ಥೆಗಳಿಗೆ ಭೇಟಿ ನೀಡಲಾಗುತ್ತದೆ.
‘ನಗರದಲ್ಲಿ ಪ್ರವಾಸೋದ್ಯಮಪುನಶ್ಚೇತನಗೊಳಿಸುವ, ಸಾಂಸ್ಕೃತಿಕ ಪರಂಪರೆ ಪರಿಚಯಿಸುವ ಉದ್ದೇಶದಿಂದ ಸೈಕಲ್ ಯಾತ್ರೆ ಹಮ್ಮಿ
ಕೊಳ್ಳಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಡಾ.ಎನ್. ಮಂಜುಳಾ ತಿಳಿಸಿದರು.
‘ನಮ್ಮ ಸೈಕಲ್’ ಸಂಘಟನೆಯ ಶಂಕರ್ ಅವರು, ‘ಯಾತ್ರೆ ಮಂಗಳವಾರ ಬೆಳಿಗ್ಗೆ 9ಕ್ಕೆ ಆರಂಭವಾಗಿ ಮಧ್ಯಾಹ್ನ 12.30ಕ್ಕೆ ಮುಕ್ತಾಯವಾಗಲಿದೆ’ ಎಂದು ಅವರು ಹೇಳಿದರು.