ಹುಬ್ಬಳ್ಳಿ: ‘ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಎಲ್ಲ ರೈಲು ಬೋಗಿಗಳಿಗೆ 2019ರ ಒಳಗೆ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗುವುದು. ಈಗಾಗಲೇ 753 ಬೋಗಿಗಳಲ್ಲಿ 2,700 ಜೈವಿಕ ಶೌಚಾಲಯ ಅಳವಡಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ಸೋಮವಾರ ಇಲ್ಲಿ ತಿಳಿಸಿದರು.
‘ವಲಯ ವ್ಯಾಪ್ತಿಯ 38 ರೈಲುಗಳಲ್ಲಿ ಈಗಾಗಲೇ ಸ್ವಚ್ಛತಾ ಸೇವೆ (ಆನ್ ಬೋರ್ಡ್ ಹೌಸ್ ಕೀಪಿಂಗ್ ಸರ್ವೀಸ್) ನೀಡಲಾಗುತ್ತಿದೆ. ಇದನ್ನು ಇತರೆ 12 ರೈಲುಗಳಿಗೆ ವಿಸ್ತರಿಸಲಾಗುವುದು. ಹುಬ್ಬಳ್ಳಿ ಕೇಂದ್ರ ರೈಲು ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನಿತ್ಯ 120 ರೈಲುಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಇದೇ 18ರಿಂದ 25ರವರೆಗೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗಗಳ ರೈಲು ನಿಲ್ದಾಣಗಳಲ್ಲಿ ‘ಸ್ವಚ್ಛ ರೈಲು–ಸ್ವಚ್ಛ ಭಾರತ ಅಭಿಯಾನ’ ನಡೆಯಿತು. ರೈಲು ನಿಲ್ದಾಣ, ರೈಲುಗಳ ಸ್ವಚ್ಛತೆ, ಸ್ವಚ್ಛ ನೀರು, ಸ್ವಚ್ಛ ಪರಿಸರದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುವ ಜೊತೆಗೆ, ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿ, ಸಲಹೆಗಳನ್ನು ಸಂಗ್ರಹಿಸಿದ್ದಾರೆ’ ಎಂದು ಹೇಳಿದರು.
‘ರೈಲು ನಿಲ್ದಾಣ ಮತ್ತು ರೈಲು ಗಾಡಿಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದು, ಗಲೀಜು ಮಾಡಿದ ಪ್ರಯಾಣಿಕರಿಂದ ಹುಬ್ಬಳ್ಳಿ ವಿಭಾಗದ ಮೂರು ನಿಲ್ದಾಣಗಳಲ್ಲಿ ₹ 7,375 ಮತ್ತು ಬೆಂಗಳೂರು ವಿಭಾಗದ 7 ನಿಲ್ದಾಣಗಳಲ್ಲಿ ಒಟ್ಟು ₹ 2.90 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ, ಮೈಸೂರು ವಿಭಾಗದಲ್ಲಿ ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಬೆಂಗಳೂರು ವಿಭಾಗಕ್ಕೂ ಶೀಘ್ರ ವಿಸ್ತರಿಸಲಾಗುವುದು’ ಎಂದರು.