ಚೆನ್ನೈ: ಕಾವೇರಿ ನೀರಿಗಾಗಿ ಕರ್ನಾಟಕದ ಜತೆ ತಮಿಳುನಾಡು ಸಂಘರ್ಷಕ್ಕೆ ಇಳಿದಿರುವುದರ ನಡುವೆಯೇ ಅಲ್ಲಿ ಈ ಬಾರಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿದೆ.
ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಜೂನ್ 1ರಿಂದ ಈವರೆಗೆ ತಮಿಳುನಾಡಿನಲ್ಲಿ ವಾಡಿಕೆಗಿಂತ ಶೇ 16ರಷ್ಟು ಮಳೆ ಕೊರತೆಯಾಗಿದೆ. ಕಾವೇರಿ ನದಿ ಮುಖಜ ಭೂಮಿ ಪ್ರದೇಶದ ಜಿಲ್ಲೆಗಳಾದ ತಂಜಾವೂರು, ತಿರುವರೂರು, ತಿರುಚ್ಚಿ, ನಾಗಪಟ್ಟಿಣಂ ಮತ್ತು ಸೇಲಂಗಳಲ್ಲಿ ವಾಡಿಕೆಗಿಂತ ಶೇ 15ರಷ್ಟು ಮಳೆ ಕೊರತೆಯಾಗಿದೆ. ಮೂರು ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಸಾಂಬಾ ಬೆಳೆ ಬೆಳೆಯುವ ತಿರುವರೂರಿನಲ್ಲಿ ಶೇ 31ರಷ್ಟು ಕಡಿಮೆ ಮಳೆ ಬಿದ್ದಿದೆ.
ಕಾವೇರಿ ಗಲಾಟೆಗೆ ವೆಂಕಯ್ಯ ಕಳವಳ (ಹೈದರಾಬಾದ್– ಪಿಟಿಐ ವರದಿ): ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈಚೆಗೆ ನಡೆದ ಹಿಂಸಾಚಾರ ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಅಲ್ಲ ಎಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದರು.
‘ಸ್ವಾತಂತ್ರ್ಯ ದೊರೆತು 69 ವರ್ಷಗಳು ಕಳೆದ ನಂತರ ಜಗಳ ಆರಂಭಿಸಿದರೆ, ಬಸ್ಸುಗಳಿಗೆ ಬೆಂಕಿ ಇಟ್ಟರೆ ಪ್ರಜಾತಂತ್ರಕ್ಕೆ ಒಳಿತಾಗದು’ ಎಂದು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ಹೇಳಿದರು.
‘ಆಡಳಿತ ಹಾಗೂ ಅಭಿವೃದ್ಧಿಯ ಕಾರಣಗಳಿಂದ ನಮ್ಮಲ್ಲಿ ಬೇರೆ ಬೇರೆ ರಾಜ್ಯಗಳನ್ನು ಸೃಷ್ಟಿಸಿರಬಹುದು. ಆದರೆ, ನಾವು ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಕರ್ನಾಟಕ, ತಮಿಳುನಾಡು ಒಟ್ಟಾಗಿ ಸೇರಿ ಕೆಲಸ ಮಾಡಬೇಕು’ ಎಂದರು.