ಇಟಾನಗರ/ನವದೆಹಲಿ: ಲಡಾಖ್ ಬಳಿಕ ಚೀನಾ ಯೋಧರು ಅರುಣಾಚಲಪ್ರದೇಶದ ಗಡಿ ಪ್ರದೇಶದಲ್ಲಿ 45 ಕಿ.ಮೀ. ಭಾರತದೊಳಕ್ಕೆ ನುಸುಳಿ ಬೀಡುಬಿಟ್ಟಿದ್ದ ವಿಷಯ ಬೆಳಕಿಗೆ ಬಂದಿದೆ. ಜೊತೆಗೆ, ಆ ಪ್ರದೇಶ ತಮಗೆ ಸೇರಿದ್ದು ಎಂದು ಅವರು ವಾದಿಸಿರುವುದೂ ತಿಳಿದುಬಂದಿದೆ.
ಈ ತಿಂಗಳ ಆರಂಭದಲ್ಲಿ ಅಂಜಾವ್ ಜಿಲ್ಲೆಯ ‘ಪುಲುಮ್ ಪೋಸ್ಟ್’ ಬಳಿ ವಾಸ್ತವಿಕ ಗಡಿ ರೇಖೆ ದಾಟಿ ಭಾರತದೊಳಕ್ಕೆ ಬಂದಿದ್ದ ಚೀನಾ ಯೋಧರು ತಾತ್ಕಾಲಿಕ ಆಶ್ರಯತಾಣ ನಿರ್ಮಿಸಿದ್ದರು. ಭಾರತೀಯ ಸೇನೆ ಮತ್ತು ಇಂಡೊ–ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ನಡೆಸಿದ ಜಂಟಿ ಗಸ್ತು ಕಾರ್ಯಾಚರಣೆ ವೇಳೆ ಸೆ. 9ಕ್ಕೆ ಇದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಆ ಪ್ರದೇಶ ತಮಗೆ ಸೇರಿದ್ದು ಎಂದು ವಾದಿಸಿದ್ದ ಚೀನಾ ಯೋಧರು ಹಿಂತಿರುಗಲು ನಿರಾಕರಿಸಿದ್ದರು. ನಂತರ ಸೆ.13ಕ್ಕೆ ಚೀನಾದ ಕೆಲ ಯೋಧರು ಆ ಪ್ರದೇಶ ಬಿಟ್ಟು ತೆರಳಿದ್ದಾರೆ. ಸೆ.14ಕ್ಕೆ ಭಾರತ–ಚೀನಾ ಧ್ವಜಸಭೆ ನಡೆಸಿದ್ದ ಸಂದರ್ಭ ಇತರ ಯೋಧರೂಅಲ್ಲಿಂದ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಚೀನಾ ನಿರಾಕರಣೆ: (ಬೀಜಿಂಗ್ ವರದಿ): ಅರುಣಾಚಲ ಪ್ರದೇಶದಲ್ಲಿ ತನ್ನ ಸೇನೆ ಅತಿಕ್ರಮಣ ನಡೆಸಿದೆ ಎಂಬ ವರದಿಯನ್ನು ತಳ್ಳಿಹಾಕಿರುವ ಚೀನಾ, ವಾಸ್ತವ ನಿಯಂತ್ರಣ ರೇಖೆ ಕುರಿತ ಭಾರತದ ಜತೆಗಿನ ಒಪ್ಪಂದಕ್ಕೆ ತಾನು ಬದ್ಧವಾಗಿರುವುದಾಗಿ ಹೇಳಿದೆ.
ಸೆಪ್ಟೆಂಬರ್ 9ರಂದು ಚೀನಾ ಪಡೆ ಅರುಣಾಚಲ ಪ್ರದೇಶದಲ್ಲಿ ಅತಿಕ್ರಮಣ ನಡೆಸಿದೆ ಎಂಬ ವರದಿಗೆ ಪ್ರತಿಕ್ರಿಯಿ ಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶಾಂಗ್, ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದ ಗಡಿ ಪ್ರತ್ಯೇಕವಾಗಿದೆ ಮತ್ತು ಸ್ಪಷ್ಟವಾಗಿದೆ. ಇಲ್ಲಿ ಉಭಯ ದೇಶಗಳ ನಡುವಿನ ಗಡಿ ಗುರುತಿಸುವ ಕೆಲಸ ನಡೆಯಬೇಕಿದೆ’ ಎಂದು ತಿಳಿಸಿದ್ದಾರೆ.