ಬೆಂಗಳೂರು: ಭಾರತೀನಗರದ ರಾಜೇಶ್ (18) ಎಂಬುವರನ್ನು ಅಪಹರಿಸಿ ಮರ್ಮಾಂಗ ಕತ್ತರಿಸಿ ಚಿತ್ರಹಿಂಸೆ ನೀಡಿದ ಪ್ರಕರಣ ಸಂಬಂಧ ಪುಲಿಕೇಶಿ ನಗರದ ಪೊಲೀಸರು, ಐವರನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ.
‘ರಾಜೇಶ್ ಅವರ ತಾಯಿ ನೀಡಿದ ದೂರಿನ ಮೇರೆಗೆ ಶಿವಾಜಿನಗರದ ಅರ್ಚಕ ತುಳಸಿಯಪ್ಪನ್ ಹಾಗೂ ತೃತೀಯ ಲಿಂಗಿಗಳಾದ ಆನಂದಿ, ಶ್ರೇಯಾ, ಐಶು, ಗಣೇಶ ಯಾನೆ ಸಿಂಧು ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರೆಲ್ಲರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ರಾಜೇಶ್ ಅವರನ್ನು ತೃತೀಯ ಲಿಂಗಿಗಳ ಗುಂಪೊಂದು ಅಪಹರಣ ಮಾಡಿತ್ತು. ರಾಜೇಶ್ ಮನೆಗೆ ಬಾರದಿದ್ದಾಗ ತಾಯಿಯು ಮಗ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು’ ‘ರಾಜೇಶ್ನನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ತೃತೀಯ ಲಿಂಗಿಗಳ ತಂಡವು ಆತನ ಮರ್ಮಾಂಗ ಕತ್ತರಿಸಿ ಆ ಜಾಗಕ್ಕೆ ಬಿಸಿ ನೀರು ಹಾಕಿ ಚಿತ್ರಹಿಂಸೆ ನೀಡಿದ್ದಾರೆ.
ಅದರಿಂದ ಮಗನ ಆರೋಗ್ಯ ಹದಗೆಟ್ಟಿದೆ ಎಂದು ದೂರಿನಲ್ಲಿ ತಾಯಿ ತಿಳಿಸಿದ್ದಾರೆ. ಅದರನ್ವಯ ಆರೋಪಿಗಳನ್ನು ಅವರ ಮನೆಯಿಂದಲೇ ವಶಕ್ಕೆ ಪಡೆಯಲಾಗಿದೆ’ ಎಂದು ವಿವರಿಸಿದರು.