ಮಾಗಡಿ: ತಾಲ್ಲೂಕಿನ ಮಂಚನಬೆಲೆ ಜಲಾಶಯದಲ್ಲಿ ಕಾಲಿನ ಗಾಯ ಕೊಳೆಯುತ್ತಿರುವುದರಿಂದ ಅರಣ್ಯ ಇಲಾಖೆಯವರು ಬಾಳೆ ಹಣ್ಣಿನಲ್ಲಿ ಔಷಧಿ ಇಟ್ಟು ನೀಡುತ್ತಿರುವ ಆಹಾರವನ್ನು ತಿನ್ನಲು ಆನೆ ನಿರಾಕರಿಸಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯ ಬಳಿ ಚರಂಡಿ ದಾಟುವಾಗ ಕಾಲು ಮುರಿದುಕೊಂಡು ಮಂಚನ ಬೆಲೆ ಜಲಾಶಯ ಸೇರಿ 18 ದಿನಗಳಾದವು. ಕಾಡಾನೆಯ ಮುರಿದ ಕಾಲು ಸದಾ ನೀರಿನಲ್ಲಿ ಇರುವುದರಿಂದ ಕೊಳೆಯಲಾರಂಭಿಸಿದೆ.
ಮನವಿ: ಮಂಚನಬೆಲೆ ಜಲಾಶಯದಲ್ಲಿ ‘ಮರಣ ಶಯ್ಯೆ’ಯಲ್ಲಿರುವ ಕಾಡಾನೆ ಸಿದ್ದನನ್ನು ಉಳಿಸಿಕೊಳ್ಳಲು ಭಾರತೀಯ ಜೀವ ವಿಮಾ ನಿಗಮ, ಮತ್ತಿತರೆ ಎನ್ಜಿಓಗಳ ಸಹಾಯ ಕೇಳಿ ಮನವಿ ಮಾಡಲಾಗಿದೆ. ಕಾಡಾನೆಯಾದ ಕಾರಣ ಬಾಳೆಹಣ್ಣಿನಲ್ಲಿ ಔಷಧಿ ಇಟ್ಟಿರುವುದನ್ನು ಗಮನಿಸಿ, ಆಹಾರ ತಿನ್ನದೆ ನಿರಾಕರಿಸುತ್ತಿದೆ. ಆದರೂ ಇಲಾಖೆಯ ಮೇಲಧಿಕಾರಿಗಳ ಉಸ್ತುವಾರಿಯಲ್ಲಿ ಸಿದ್ದನ ಆರೋಗ್ಯದ ಬಗ್ಗೆ ನಿಗಾವಹಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ದಾಳೇಶ್ ತಿಳಿಸಿದರು.
*
ಕಾಡಾನೆಗಳು ಸಾಯುವ ಮುನ್ಸೂಚನೆ ಸಿಕ್ಕ ಕೂಡಲೆ ಭಾರಿ ತೂಕವನ್ನು ತಾಳಲಾರದೆ ನೀರಿಗೆ ಇಳಿಯುತ್ತವೆ, ನೀರಿನಲ್ಲಿದ್ದರೆ ತೂಕ ಕಡಿಮೆಯಾದಂತೆ ಭಾಸವಾಗಿ ಕೊನೆಗೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆ.
-ರಾಮಚಂದ್ರಯ್ಯ, ಪ್ರಾಣಿಪ್ರಿಯ