ಬೆಂಗಳೂರು: ಯಲಹಂಕದ ಕೋಗಿಲು ಕ್ರಾಸ್ ಬಳಿ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲೆಂದು ನಿರ್ಮಿಸಿದ್ದ ಕಲ್ಯಾಣಿಯಲ್ಲಿ ಚಂದು (10) ಎಂಬಾತನ ಶವ ಪತ್ತೆಯಾಗಿದೆ.
‘ಮಾರುತಿನಗರದ ಚಂದು ಸೆ. 17ರಂದು ಕಾಣೆಯಾದ ಬಗ್ಗೆ ಆತನ ತಂದೆ ರಮೇಶ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದಾಗ ಚಂದು ಕಲ್ಯಾಣಿಯತ್ತ ಹೋಗಿದ್ದ ವಿಷಯ ಗೊತ್ತಾಗಿತ್ತು. ಬಳಿಕ ಕಲ್ಯಾಣಿ ಬಳಿ ಹೋಗಿ ಪರಿಶೀಲಿಸಿದಾಗ ಶವ ಪತ್ತೆಯಾಯಿತು’ ಎಂದು ಯಲಹಂಕ ಪೊಲೀಸರು ತಿಳಿಸಿದರು.
‘ಚಂದು ತನ್ನ ಇಬ್ಬರು ಸ್ನೇಹಿತರೊಂದಿಗೆ ಆಟವಾಡಲು ಕಲ್ಯಾಣಿ ಕಡೆಗೆ ಹೋಗಿದ್ದ. ಈ ವೇಳೆ ಚಂದು ಆಯತಪ್ಪಿ ಕಲ್ಯಾಣಿಗೆ ಬಿದ್ದಿದ್ದ. ಇದರಿಂದ ಗಾಬರಿಗೊಂಡಿದ್ದ ಇನ್ನುಳಿದ ಬಾಲಕರು ಅಲ್ಲಿಂದ ಪರಾರಿಯಾಗಿದ್ದರು. ಈ ಬಾಲಕರು ನೀಡಿದ ಮಾಹಿತಿ ಮೇರೆಗೆ ಕಲ್ಯಾಣಿಯಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ ಚಂದುವಿನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.’
‘ಕಲ್ಯಾಣಿಯನ್ನು ನಿರ್ಮಿಸಲು ಗುತ್ತಿಗೆ ಪಡೆದವರು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯಲಾಗುವುದು’ ಎಂದು ಮಾಹಿತಿ ನೀಡಿದರು.