ಬೆಂಗಳೂರು: ‘ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆ ರಾಜ್ಯದಲ್ಲಿ ಸಮಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ’ ಎಂದು ರಾಷ್ಟ್ರೀಯ ಕಿಸಾನ್ ಸಂಘಟನೆಯ ಕಾರ್ಯದರ್ಶಿ ಬಿ.ಶಿವಣ್ಣ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ ರಾಜ್ಯದಲ್ಲಿ ಭೂ ದಾಖಲೆಗಳು ವ್ಯವಸ್ಥಿತವಾಗಿಲ್ಲ. ಭೂಮಾಪನಕ್ಕೆ ಸಂಬಂಧಿಸಿದ ತತ್ಕಾಲ್ ಪೋಡಿ, 11(ಇ) ನಕ್ಷೆ ರೈತರಿಗೆ ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ಸರ್ಕಾರ ಗಡಿ ಗುರುತು ಮಾಡಿ, ಬಾಂದ್ಕಲ್ಲು ಹಾಕದೇ ಪೋಡಿ ಮುಕ್ತ ಗ್ರಾಮ ಅಭಿಯಾನ ಹಮ್ಮಿಕೊಂಡಿರುವುದು ಹಾಸ್ಯಾಸ್ಪದವಾಗಿದೆ’ ಎಂದರು.
‘ರೈತರು ಭೂ ದಾಖಲೆಗಳಿಗೆ ಸಂಬಂಧಪಟ್ಟ ಪಹಣಿ, ಖಾತೆ ಪಡೆಯಲು ತಾಲ್ಲೂಕು ಕಚೇರಿ, ನಾಡ ಕಚೇರಿಗೆ ಪ್ರತಿನಿತ್ಯ ಅಲೆದಾಡುವಂತಾಗಿದೆ. ಹೀಗಾಗಿ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತದ ವ್ಯಾಪ್ತಿಯಲ್ಲಿ ಪಹಣಿಗಳನ್ನು ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಅನಾವೃಷ್ಟಿಯಿಂದ ಈ ವರ್ಷ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ರೈತರಿಗೆ ಒಂದು ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.