ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮೂಹಿಕ ವಿವಾಹ ಹೆಚ್ಚಿದರೆ ಅನಿಷ್ಟಗಳಿಗೆ ಕಡಿವಾಣ’

Last Updated 26 ಸೆಪ್ಟೆಂಬರ್ 2016, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ತಾಲ್ಲೂಕು ಮಟ್ಟದಲ್ಲಿ  ಸಾಮೂಹಿಕ ವಿವಾಹಗಳನ್ನು ಆಯೋ ಜಿಸುವ ಮೂಲಕ ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕಿ, ಬಾಲ್ಯ ವಿವಾಹ ಹಾಗೂ ಮರು ವಿವಾಹದಂಥ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟಲು ಸಾಧ್ಯ’ ಎಂದು ಮಕ್ಕಳ ಲೈಂಗಿಕ ಶೋಷಣೆ ವಿರುದ್ಧ ಮತ್ತು ಅಪರಾಧ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ಸಲಹೆ ನೀಡಿದರು.

ಸೆಟ್ರಾಕ್‌–ಕೆ ಹಾಗೂ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಕಾರ್ಯಪಡೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಬಾಲ್ಯವಿವಾಹ ಮತ್ತು ಮಕ್ಕಳ ಶೋಷಣೆ ತಡೆಯಲು ಪ್ರಸ್ತುತ ಕಾನುನು ಅನುಷ್ಠಾನ ಹಾಗೂ ಹೊಸ ಕಾರ್ಯಕ್ರಮ ರೂಪಿಸುವ’ ಕುರಿತ ಎರಡು ದಿನಗಳ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

‘ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಗೆ ರಾಜಕಾರಣಿಗಳು ಕುಮ್ಮಕ್ಕು ನೀಡುತ್ತಿದ್ದಾರೆ.  ಶಿಕ್ಷಣ ಮೂಲಭೂತ ಹಕ್ಕಾಗಿದ್ದರೂ ಬಹಳಷ್ಟು ಮಕ್ಕಳು ಅದರಿಂದ ವಂಚಿತರಾಗುತ್ತಿದ್ದಾರೆ. ಉಳ್ಳವರು ಅರಮನೆ ಮೈದಾನದಲ್ಲಿ ಮದುವೆ ಮಾಡಿಕೊಳ್ಳುತ್ತಾರೆ. ಅವರು ಆಮಂತ್ರಣ ಪತ್ರಕ್ಕೆ ಖರ್ಚು ಮಾಡುವ ಹಣದಷ್ಟು ಬಡವರ ಮದುವೆಗೆ ಆಗುವುದಿಲ್ಲ’ ಎಂದರು.

‘ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾಗುತ್ತಲೇ ಇದೆ.  ಭ್ರೂಣದ  ಹಂತದಿಂದಲೇ ಶೋಷಣೆಯಾಗುತ್ತಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ತರಲು ಅಧಿಕಾರಿಗಳು ಮುಂದಾಗಬೇಕಿದೆ. ಕರ್ತವ್ಯ ಲೋಪ ಎಸಗುವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ’ ಎಂದ ಅವರು ಹೇಳಿದರು.

‘ಅತ್ಯಾಚಾರವಾಗಿ 90 ದಿನಗಳ ಒಳಗೆ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಒಟ್ಟಾರೆ ಐದು ತಿಂಗಳಲ್ಲಿ ಪ್ರಕರಣ ಇತ್ಯರ್ಥ
ವಾಗಬೇಕು. ಆದರೆ ನಮ್ಮಲ್ಲಿ ಐದು ವರ್ಷ ಕಳೆದರೂ ದಾಖಲಾದ ಪ್ರಕರಣಗಳು ಇತ್ಯರ್ಥ ಆಗುತ್ತಿಲ್ಲ. ಪೋಕ್ಸೊ ಕಾಯ್ಡೆಯ ಪ್ರಕರಣಗಳಲ್ಲೂ ಇದೇ ಆಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಿವಿಕ್‌ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಮಾತನಾಡಿ, ‘ಬಿಹಾರ, ರಾಜಸ್ತಾನ, ಜಾರ್ಖಂಡ್‌, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರ ಮತ್ತು ಕರ್ನಾಟಕದಲ್ಲಿ ಶೇ 50ಕ್ಕಿಂತ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT