ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿ ಸುತ್ತಿದ್ದ ಕಾರ್ಪೊರೇಟ್ ವ್ಯವಹಾರಗಳ ಮಾಜಿ ಮಹಾ ನಿರ್ದೇಶಕ ಬಿ.ಕೆ.ಬನ್ಸಾಲ್ ತಮ್ಮ ನಿವಾಸದಲ್ಲಿ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಬನ್ಸಾಲ್ ಅವರ ಪತ್ನಿ ಸತ್ಯಬಾಲಾ ಮತ್ತು ಮಗಳು ನೇಹಾ ಪೂರ್ವ ದೆಹಲಿಯ ನೀಲಕಂಠ ಅಪಾರ್ಟ್ಮೆಂಟ್ನಲ್ಲಿ ಸೀಲಿಂಗ್ ಫ್ಯಾನ್ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿಬಿಐ ದಾಳಿಯಿಂದ ತೀವ್ರ ಅವಮಾನವಾಗಿದ್ದು, ಇನ್ನು ಬದುಕಲು ಇಷ್ಟವಿಲ್ಲ ಎಂದು ಅವರು ಡೆತ್ ನೋಟ್ ಬರೆದಿಟ್ಟಿದ್ದರು. ಅದರಲ್ಲಿ ಸಾವಿಗೆ ಯಾರನ್ನೂ ಹೊಣೆಯನ್ನಾಗಿಸಿ ರಲಿಲ್ಲ. ಬನ್ಸಾಲ್ ಮತ್ತು ಅವರ ಮಗ ಯೋಗೇಶ್ ಅವರ ಮೃತದೇಹಗಳು ಮಂಗಳವಾರ ಅಪಾರ್ಟ್ ಮೆಂಟ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿ ಯಾಗಿದ್ದ ಬನ್ಸಾಲ್ ಅವರನ್ನು ಔಷಧ ಕಂಪೆನಿಯೊಂದರಿಂದ ಲಂಚ ಪಡೆದ ಆರೋಪದಲ್ಲಿ ಜುಲೈ 16ರಂದು ಸಿಬಿಐ ಬಂಧಿಸಿತ್ತು. ಪ್ರಕರಣ ಸಂಬಂಧ ಎಂಟು ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದ ಸಿಬಿಐ, ಅಪಾರ ಪ್ರಮಾಣದ ನಗದು ಹಣ ವಶಪಡಿಸಿಕೊಂಡಿರುವುದಾಗಿ ಹೇಳಿಕೆ ನೀಡಿತ್ತು. ಅವರ ಬಂಧನವಾದ ಎರಡು ದಿನದಲ್ಲೇ ಅವರ ಪತ್ನಿ ಮತ್ತು ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬನ್ಸಾಲ್ ಅವರು ಆಗಸ್ಟ್ 26 ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.