ಬೆಂಗಳೂರು: ಕೇಂದ್ರದ ಜಿಎಸ್ಟಿ ಮಂಡಳಿಯ ರಾಜ್ಯ ವಿರೋಧಿ ನಿರ್ಧಾರವನ್ನು ಖಂಡಿಸಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.
ಜಿಎಸ್ಟಿ ಜಾರಿಯಿಂದ ಮಹತ್ವದ ತೆರಿಗೆ ಸುಧಾರಣೆ ಆಗಲಿದೆ ಎಂದು ಭಾವಿಸಲಾಗಿತ್ತು. ಇದು ಕೇಂದ್ರಕ್ಕೆ ವರವಾಗಿದ್ದರೆ, ರಾಜ್ಯಗಳ ಪಾಲಿಗೆ ಶಾಪವಾಗಿದೆ. ಮಂಡಳಿ ನಿರ್ಧಾರದಿಂದ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ತನ್ನ ಡೀಲರ್ಗಳ ಮೂಲವನ್ನು ಕಳೆದುಕೊಳ್ಳುವುದಲ್ಲದೆ, ಶೇ 50 ರಷ್ಟು ಉದ್ಯೋಗ ನಷ್ಟವೂ ಆಗಲಿದೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆಗಳ ಸೇವಾ ಸಂಸ್ಥೆಯ ಅಧ್ಯಕ್ಷ ಸಿ.ಎನ್.ಶಿವಪ್ರಕಾಶ್ ಹೇಳಿದ್ದಾರೆ.