ಬೆಂಗಳೂರು: ‘ಎಚ್ಡಿಎಫ್ಸಿ (ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್) ಬ್ಯಾಂಕಿನಲ್ಲಿ ಇರಿಸಿರುವ ನಮ್ಮ ಹಣವನ್ನು ಪಡೆಯಲು ಜಾರಿ ನಿರ್ದೇಶನಾಲಯ ತಡೆ ಒಡ್ಡಿದೆ. ಇದನ್ನು ತೆರವು ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಮಲ್ಯ ಒಡೆತನದ ಯುಬಿಎಚ್ಎಲ್ (ಯುನೈಟೆಡ್ ಬ್ರಿವರೀಸ್) ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿದೆ.
ಈ ಸಂಬಂಧ ಯುಬಿ ಕಂಪೆನಿ ಉಪಾಧ್ಯಕ್ಷ ಅಜಯ ಕುಮಾರ್ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ಈ ಕುರಿತಂತೆ ಒಂದು ವಾರದ ಒಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಅಕ್ಟೋಬರ್ 18ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಕಂಪೆನಿಯ 110 ಉದ್ಯೋಗಿಗಳಿಗೆ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ. ನಾವು ಬ್ಯಾಂಕಿನಲ್ಲಿ ಇರಿಸಿರುವ ನಮ್ಮ ₹ 5.50 ಕೋಟಿ ಹಣವನ್ನು ಬಿಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ತಡೆ ಒಡ್ಡಿದೆ. ಆದ್ದರಿಂದ ಈ ಕುರಿತು ಪ್ರತಿವಾದಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.