ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಲೆಕ್ಕಪತ್ರ ಸಲ್ಲಿಕೆ ಮತ್ತು ಮರು ಪಾವತಿಗೆ ಸಂಬಂಧಿಸಿದಂತೆ ತೆರಿಗೆ ಸಚಿವಾಲಯವು ಇನ್ನೂ ಎರಡು ಕರಡು ನಿಯಮಗಳನ್ನು ಪ್ರಕಟಿಸಿದೆ.
ಈ ಹೊಸ ನಿಯಮಗಳೂ ಸೇರಿದಂತೆ ಇದುವರೆಗೆ ಪ್ರಕಟಿಸಲಾಗಿರುವ ಕರಡು ನಿಯಮಗಳಿಗೆ ಅಭಿಪ್ರಾಯ ಮತ್ತು ಆಕ್ಷೇಪ ದಾಖಲಿಸಲು ನಾಳೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ 30ರಂದು ಸಭೆ ಸೇರಲಿರುವ ಜಿಎಸ್ಟಿ ಮಂಡಳಿಯ ಎರಡನೆ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು.
ಮರುಪಾವತಿ ನಿಯಮಕ್ಕೆ ಸಂಬಂಧಿಸಿದಂತೆ, ಪ್ರತಿಯೊಬ್ಬ ನೋಂದಾಯಿತ ತೆರಿಗೆದಾರನು, ತಿಂಗಳ ಲೆಕ್ಕಪತ್ರವನ್ನು ನಿರ್ದಿಷ್ಟ ಅರ್ಜಿ ನಮೂನೆಯಲ್ಲಿ (ಜಿಎಸ್ಟಿಆರ್–3) ಸಲ್ಲಿಸಬೇಕು. ಹಣಕಾಸು ವರ್ಷವೊಂದರಲ್ಲಿ ತೆರಿಗೆಗೆ ಒಳಪಡುವ ಪ್ರತಿಯೊಬ್ಬ ವರ್ತಕನ ವಾರ್ಷಿಕ ವಹಿವಾಟು ₹ 1 ಕೋಟಿ ಮೀರಿದ್ದರೆ ವರ್ಷಕ್ಕೊಮ್ಮೆ ಲೆಕ್ಕಪತ್ರ ಪರಿಶೋಧನೆಯ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.