ಬೆಂಗಳೂರು: ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ ಅವರ ಮನೆಯಲ್ಲಿ ಕಳ್ಳತನ ಆಗಿರುವ ಹಣದ ಬಗ್ಗೆ ತನಿಖೆಗೆ ಕೋರಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅಂಬೇಡ್ಕರ್ ಯುವ ಸೇನೆ ದೂರು ನೀಡಿದೆ.
ಅಗ್ರಹಾರ ದಾಸರಹಳ್ಳಿಯಲ್ಲಿನ ಲಕ್ಷ್ಮಣ ಅವರ ಮನೆಯಲ್ಲಿ ಆ. 30ರಂದು ₹ 5.50 ಲಕ್ಷ ಕಳ್ಳತನ ನಡೆದಿದೆ ಎಂದು ಅವರ ಮಗ ದೂರು ನೀಡಿದ್ದರು. ಆದರೆ, ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸುವಾಗ ಕೋಟಿಗಟ್ಟಲೆ ಹಣ ಇರುವುದನ್ನು ತಿಳಿಸಿದ್ದಾರೆ.
‘ಇದು ಕಪ್ಪು ಹಣ ಆಗಿರುವ ಕಾರಣ ಲಕ್ಷ್ಮಣ್ ಅವರ ಮಗ ಕಡಿಮೆ ಲೆಕ್ಕ ತೋರಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ’ ಎಂದು ಅಂಬೇಡ್ಕರ್ ಸೇನೆ ಅಧ್ಯಕ್ಷ ಎಚ್. ಕೋದಂಡರಾಮ ಎಸಿಬಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
‘ಲಕ್ಷ್ಮಣ ಅವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಕ್ರಮವಾಗಿ ಹಣ ಸಂಪಾದಿಸಿರುವ ಅನುಮಾನ ಇದೆ. ಅವರನ್ನು ಅಧ್ಯಕ್ಷರಾಗಿ ನೇಮಿಸುವಲ್ಲೂ ನಿಯಮ ಉಲ್ಲಂಘಿಸಲಾಗಿದೆ. ತನಿಖೆ ನಡೆಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.