ಬೆಂಗಳೂರು: ಮೊದಲ ಪಂದ್ಯದ ವೇಳೆ ಗಾಯಗೊಂಡಿರುವ ಕರ್ನಾಟಕದ ಕೆ.ಎಲ್. ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರ ಬದಲು ಗೌತಮ್ ಗಂಭೀರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಗಾಯದ ಸಮಸ್ಯೆಯಿಂದ ಇಶಾಂತ್ ಶರ್ಮಾ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇವರ ಬದಲಾಗಿ ಆಫ್ ಸ್ಪಿನ್ನರ್ ಜಯಂತ್ ಯಾದವ್ಗೆ ತಂಡದಲ್ಲಿ ಸ್ಥಾನ ಕೊಡಲಾಗಿದೆ. ಎಡಗೈ ಬ್ಯಾಟ್ಸ್ಮನ್ ಗಂಭೀರ್ ಎರಡು ವರ್ಷಗಳ ಬಳಿಕ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2014ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವಾಡಿದ್ದರು.
ಇತ್ತೀಚಿಗೆ ನಡೆದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಗಂಭೀರ್ ಉತ್ತಮ ಪ್ರದರ್ಶನ ನೀಡಿದ್ದರು. ಇದನ್ನು ಬಿಸಿಸಿಐ ಸೀನಿಯರ್ ತಂಡದ ಆಯ್ಕೆ ಸಮಿತಿ ಪರಿಗಣಿಸಿ ಅವರಿಗೆ ಸ್ಥಾನ ಕೊಟ್ಟಿದೆ.