ಬೆಂಗಳೂರು: ಮಲೆನಾಡು ಜಿಲ್ಲೆಗಳ ತಾಲ್ಲೂಕುಗಳು ಸೇರಿದಂತೆ ರಾಜ್ಯದ 68 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು, ಸೆಪ್ಟೆಂಬರ್ ಅಂತ್ಯ ದವರೆಗಿನ ಮಳೆ ಕೊರತೆ, ತೇವಾಂಶ ಆಧರಿಸಿ ಬರ ಪೀಡಿತ ತಾಲ್ಲೂಕು ಘೋಷಿ ಸಲು ನಿರ್ಧರಿಸಲಾಯಿತು ಎಂದರು.
ವಾಡಿಕೆಯ ಶೇ 20ಕ್ಕಿಂತ ಹೆಚ್ಚು ಮಳೆ ಕೊರತೆ, ಶೇ 50ಕ್ಕಿಂತ ಹೆಚ್ಚು ತೇವಾಂಶ ಕೊರತೆ, ಸತತ ನಾಲ್ಕು ವಾರ ಶುಷ್ಕ ಹವೆ ಹಾಗೂ ಬಿತ್ತನೆಯಾದ ಪ್ರದೇಶದಲ್ಲಿ ಶೇ 33ಕ್ಕಿಂತ ಹೆಚ್ಚು ಹಾನಿಯಾಗಿರುವ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬಹುದು ಎಂಬ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ ಡಿ ಆರ್ಎಫ್) ಮಾರ್ಗ ಸೂಚಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದರು.