ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರ ನೆಲೆಗಳ ಮೇಲೆ ಸೇನಾ ದಾಳಿ

Last Updated 29 ಸೆಪ್ಟೆಂಬರ್ 2016, 9:02 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತೀಯ ಸೇನಾಪಡೆ ಬುಧವಾರ ಮಧ್ಯರಾತ್ರಿ ಗಡಿ ನಿಯಂತ್ರಣ ರೇಖೆಯ ಬಳಿಯ ಭಯೋತ್ಪಾದಕ ಅಡಗುತಾಣಗಳ ಮೇಲೆ ‘ಸರ್ಜಿಕಲ್‌ ಕಾರ್ಯಾಚರಣೆ’ ನಡೆಸಿದ್ದು, ಯಾವುದೇ ಬಗೆಯ ಪರಿಣಾಮಗಳನ್ನು ಎದುರಿಸಲು ದೇಶ ಸನ್ನದ್ಧವಾಗಿದೆ’ ಎಂದು ಭಾರತೀಯ ಸೇನಾ ಪಡೆಯ ಲೆ.ಜ. ರಣವೀರ್‌ ಸಿಂಗ್‌ ಹೇಳಿದ್ದಾರೆ.

ದೆಹಲಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಅವರು ಈ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಸಹ ಹಾಜರಿದ್ದರು.

‘ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನೆಲೆಗಳು ಸಾಕಷ್ಟು ಧ್ವಂಸವಾಗಿವೆ’ ಎಂದಿರುವ ಅವರು ಕಾರ್ಯಾಚರಣೆ ಮುಂದುವರಿಸುವ ಯಾವುದೇ ಯೋಜನೆ ಇಲ್ಲ’ ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕನಿಷ್ಠ ಎರಡು ಭಯೋತ್ಪಾದಕ ಅಡಗುತಾಣಗಳು ಧ್ವಂಸವಾಗಿವೆ ಎಂದು ಹೇಳಲಾಗಿದೆ. ‘ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ನುಸುಳಲು ಅವಕಾಶ ನೀಡುವುದಿಲ್ಲ’ ಎಂದು ಸಿಂಗ್‌ ಖಡಕ್‌ ಆಗಿ ನುಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್‌ ಕಮಿಟಿ ಸಭೆ ನಡೆಸಿದ ನಂತರವೇ ಸಿಂಗ್‌ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಸಭೆಯಲ್ಲಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ಗೃಹಸಚಿವ ರಂಜತ್‌ ಸಿಂಗ್‌, ಆರ್ಥಿಕ ಸಚಿವ ಅರುಣ್್ ಜೇಟ್ಲಿ ಮತ್ತು ಸೇನಾ ಮುಖ್ಯಸ್ಥ ದಲ್ಬಿರ್‌ ಸಿಂಗ್‌ ಸುಹಾಗ್‌ ಸಹ ಹಾಜರಿದ್ದರು.

ಸರ್ಜಿಕಲ್ ಕಾರ್ಯಾಚರಣೆ ಎಂದರೇನು?
ನಿರ್ದಿಷ್ಟ ಮತ್ತು ನಿಖರ ಮಿಲಿಟರಿ ಕಾರ್ಯಾಚರಣೆಯನ್ನು ಸರ್ಜಿಕಲ್ ಆಪರೇಷನ್ ಎನ್ನುತ್ತಾರೆ. ಇದನ್ನು ಪ್ರಿಸಿಷನ್‌ ಆಪರೇಷನ್ ಎಂದೂ ಕರೆಯಲಾಗುತ್ತದೆ. ಇಂಥ ಕಾರ್ಯಾಚರಣೆಗಳು ಸಾಮಾನ್ಯವಾಗಿ ಎರಡು ಕಾರಣಕ್ಕೆ ನಡೆಯುತ್ತವೆ.

1) ನಮ್ಮದೇ ದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಸಾಮಾನ್ಯ ಜನರನ್ನು ಒತ್ತೆಯಾಗಿ ಇರಿಸಿಕೊಂಡಾಗ ಜನರ ಬಿಡುಗಡೆಗಾಗಿ.

2) ವೈರಿ ದೇಶದಲ್ಲಿ ನಮ್ಮ ದೇಶದ ಸರ್ಕಾರ ಸಾಧಿಸಬೇಕಾಗಿರುವ ಮಹತ್ತರ ಗುರಿಯ ಈಡೇರಿಕೆಗಾಗಿ.

ಇಂಥ ಕಾರ್ಯಾಚರಣೆ ನಡೆಸುವ ಮುನ್ನ ಗುಪ್ತಚರ ಮಾಹಿತಿಯನ್ನು ವ್ಯಾಪಕವಾಗಿ ಕಲೆ ಹಾಕಲಾಗುತ್ತದೆ. ವೈರಿ ದೇಶದಲ್ಲಿ ನಡೆಸಬೇಕಾದ ಕಾರ್ಯಾಚರಣೆಯಾದರೆ ಅದು ಅಲ್ಪ ಕಾಲಾವಧಿಯಲ್ಲಿ ಮುಗಿದುಹೋಗುವಂತೆ ಆದರೆ ಅದರ ಪರಿಣಾಮ ದೀರ್ಘಾವಧಿಯಲ್ಲಿ ಉಳಿದುಕೊಳ್ಳುವಂತೆ ಯೋಜನೆ ರೂಪಿಸಲಾಗುತ್ತದೆ.

ಇಂಥ ಕಾರ್ಯಾಚರಣೆಗೆ ಇಸ್ರೇಲ್ ಸೇನೆ ಹೆಸರುವಾಸಿ. ನೈಜೀರಿಯಾಗೆ ನುಗ್ಗಿದ ಇಸ್ರೇಲ್ ಸೇನೆ ತನ್ನ ಒತ್ತೆ ನಾಗರಿಕರನ್ನು ವಾಪಸ್ ಕರೆತಂದಿದ್ದು, ಭಾರತ ಸೇನೆ ಈಚೆಗೆ ಬರ್ಮಾ ಗಡಿಗೆ ನುಗ್ಗಿ ಭಯೋತ್ಪಾದಕರನ್ನು ಕೊಂದಿದ್ದು ಸರ್ಜಿಕಲ್ ಆಪರೇಷನ್‌ಗೆ ಉತ್ತಮ ಉದಾಹರಣೆ.

ಸರ್ಜಿಕಲ್ ಅಥವಾ ಪ್ರಿಸಿಷನ್ ಕಾರ್ಯಾಚಾರಣೆಯು ಒಂದು ದೇಶದ ಮಿಲಿಟರಿ ಬಲ, ರಾಜಕೀಯ ಇಚ್ಛಾಶಕ್ತಿ ಮತ್ತು ನಾಯಕರ ಬುದ್ಧಿವಂತಿಕೆ ತೋರುವ ಟ್ಯಾಕ್ಟಿಕಲ್ ಯುದ್ಧತಂತ್ರವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT