ಬೆಂಗಳೂರು: ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಪಾವತಿ, ಗುತ್ತಿಗೆ ಪದ್ಧತಿ ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘದ ಸದಸ್ಯರು ನಗರದ ಬಿಬಿಎಂಪಿ ಮುಖ್ಯ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
‘ಗುತ್ತಿಗೆ ಪೌರಕಾರ್ಮಿಕರಿಗೆ ನೀಡುತ್ತಿದ್ದ ವೇತನವನ್ನು ₹7 ಸಾವಿರದಿಂದ ₹14,439ಕ್ಕೆ ಹೆಚ್ಚಳ ಮಾಡಲಾಗಿದೆ. ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಈ ಮೊತ್ತವನ್ನು ಪಾವತಿಸಬೇಕು. ಆದರೆ, ಈವರೆಗೂ ವೇತನ ಪಾವತಿಯಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.
ಸಂಘದ ಪ್ರಧಾನ ಕಾರ್ಯದರ್ಶಿ ನಿರ್ಮಲಾ ಮಾತನಾಡಿ, ‘ವೇತನದ ಜತೆಗೆ ಸಂಕಷ್ಟ ಭತ್ಯೆ ₹3 ಸಾವಿರ ನೀಡಬೇಕು. ವಾರದ ರಜೆ ಸೇರಿದಂತೆ ಹಬ್ಬ ಹಾಗೂ ರಾಷ್ಟ್ರೀಯ ರಜೆಗಳನ್ನು ನೀಡಬೇಕು. ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು’ ಎಂದು ಆಗ್ರಹಿಸಿದರು.
‘ಗುತ್ತಿಗೆ ಪೌರಕಾರ್ಮಿಕರನ್ನು ಮುಂದಿನ ಮಾರ್ಚ್ ಒಳಗೆ ಕಾಯಂಗೊಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ವಿಶೇಷ ನಿಯಮಗಳನ್ನು ರೂಪಿಸಲು ಸಂಘದ ಜತೆ ಸಮಾಲೋಚನೆ ನಡೆಸಬೇಕು’ ಎಂದು ಒತ್ತಾಯಿಸಿದರು.