ಮುಂಬೈ: ಕರಣ್ ಜೋಹರ್ ನಿರ್ದೇಶನದ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರ ಬಿಡುಗಡೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರದ ನಿರ್ಮಾಪಕ ಮುಖೇಶ್ ಭಟ್ ತಿಳಿಸಿದ್ದಾರೆ.
ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಮುಖೇಶ್ ಭಟ್ ಅವರು ರಾಜನಾಥ್ ಸಿಂಗ್ ಅವರನ್ನು ಗುರುವಾರ ಭೇಟಿಯಾಗಿದ್ದರು. ಈ ವೇಳೆ ಚಿತ್ರ ಬಿಡುಗಡೆಗೆ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸುವಂತೆ ರಾಜನಾಥ್ ಸಿಂಗ್ ಅವರಿಗೆ ಮುಖೇಶ್ ಭಟ್ ಮನವಿ ಮಾಡಿದ್ದಾರೆ.
ಪಾಕಿಸ್ತಾನಿ ಕಲಾವಿದರು ನಟಿಸಿರುವ ಚಿತ್ರಗಳ ಬಿಡುಗಡೆಗೆ ಭಾರತೀಯ ಸಿನಿಮಾ ನಿರ್ಮಾಪಕರು ಹಾಗೂ ಪ್ರದರ್ಶಕರ ಸಂಘಟನೆಯು ನಿಷೇಧ ಹೇರಿದೆ. ಹೀಗಾಗಿ ಪಾಕಿಸ್ತಾನಿ ಕಲಾವಿದ ಫವಾದ್ ಖಾನ್ ನಟಿಸಿರುವ ಏ ದಿಲ್ ಹೈ ಮುಷ್ಕಿಲ್’ ಚಿತ್ರ ಬಿಡುಗಡೆಗೆ ಸಂಕಷ್ಟ ಎದುರಾಗಿದೆ.
‘ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡುವಂತೆ ತಿಳಿಸುತ್ತೇನೆ. ಚಿತ್ರ ಬಿಡುಗಡೆಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ ಎಂದು ಮುಖೇಶ್ ಭಟ್ ತಿಳಿಸಿದ್ದಾರೆ.