ಬೆಂಗಳೂರು: ಮೂಳೆ ತಜ್ಞ ಹಾಗೂ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಡಾ.ಎಂ.ಎಸ್.ಶಿವಪ್ರಸಾದ್ (52) ಅವರು ಅನಾರೋಗ್ಯದಿಂದ ಗುರುವಾರ ನಿಧನ ಹೊಂದಿದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.
ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ, ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದರು. ಬಿಬಿಎಂಪಿ ಕಾರ್ಪೊರೇಟರ್ ಆಗಿದ್ದ ವೇಳೆ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ವಾಸ್ತವಿಕ ಬಜೆಟ್ ಮಂಡನೆಗೆ ಯತ್ನಿಸಿದ್ದ ಅವರು, ತೆರಿಗೆ ಸಂಗ್ರಹ ಹೆಚ್ಚಿಸುವತ್ತ ಗಮನಹರಿಸಿದ್ದರು. ಆರ್ಥಿಕ ಶಿಸ್ತು ಮೂಡಿಸಲು ಯತ್ನಿಸಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.