ಬೆಂಗಳೂರು: ‘ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಲಿಪಿಕ ನೌಕರರ ಬೇಡಿಕೆಗಳನ್ನು ತಿಂಗಳಿನಲ್ಲಿ ಈಡೇರಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಇಲಾಖೆಯ ಲಿಪಿಕಾರರ ಸಂಘದ ಅಧ್ಯಕ್ಷ ಎಂ.ಸಿ.ಕೆಂಪರಾಜು ಎಚ್ಚರಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇಡಿಕೆಗಳ ಬಗ್ಗೆ ಇಲಾಖೆಯ ಮುಖ್ಯಸ್ಥರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಅವುಗಳಿಗೆ ಸ್ಪಂದನೆ ಮಾತ್ರ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಉಪನಿರ್ದೇಶಕರ ಕಚೇರಿಗಳಲ್ಲಿ ಪತ್ರಾಂಕಿತ ಸಹಾಯಕರ ಹುದ್ದೆಗಳನ್ನು ಮಂಜೂರು ಮಾಡಬೇಕು. ರಾಜ್ಯ ಲೆಕ್ಕಪತ್ರ ಇಲಾಖೆಗೆ ಭರ್ತಿ ಮಾಡಿಕೊಳ್ಳುತ್ತಿರುವ 716 ಹುದ್ದೆಗಳ ಪೈಕಿ 274 ಹುದ್ದೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಬೇಕು’.
‘ನೌಕರರಿಗೆ ಬಡ್ತಿ ನೀಡಬೇಕು. ಒತ್ತಡ ನಿವಾರಣೆಗಾಗಿ ಕಾರ್ಯಭಾರ ರಚನಾ ಸಮಿತಿ ರಚಿಸಬೇಕು. ಅಕ್ಷರ ದಾಸೋಹ ಕಾರ್ಯಕ್ರಮದ ಅಧಿಕಾರಿ ಹುದ್ದೆಗಳನ್ನು ಲಿಪಿಕ ನೌಕರರ ವರ್ಗಕ್ಕೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.