ಉಡುಪಿ: ಕೇಂದ್ರ ಸರ್ಕಾರದ ಘನ ತ್ಯಾಜ್ಯ ವಿಲೇವಾರಿ ಕಾಯ್ದೆಯ ಅನ್ವಯ ಬೈಲಾ ರೂಪಿಸಿರುವ ಉಡುಪಿ ನಗರಸಭೆ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಮುಂದಾಗಿದೆ. ಈ ಬೈಲಾದ ಅನ್ವಯ ಮೊದಲ ಬಾರಿಗೆ ಹೊರಗಡೆ ಕಸ ಎಸೆಯುವಾಗ ಸಿಕ್ಕಿಬಿದ್ದರೆ ಸ್ಥಳದಲ್ಲೇ ₹100 ದಂಡ ವಿಧಿಸಲು ಅವಕಾಶ ಇದೆ. ಎರಡನೇ ಬಾರಿಗೆ ದಂ ಡದ ಮೊತ್ತ ₹200 ಅಂದರೆ ದುಪ್ಪ ಟ್ಟಾಗಲಿದೆ. ಆ ನಂತರ ಅದು ದುಪ್ಪಟ್ಟಾಗುತ್ತಿರುತ್ತದೆ.
ಉಡುಪಿ ನಗರ ಬಯಲು ಬಹಿರ್ದೆಸೆ ಮುಕ್ತ ನಗರ ಎಂದು ಘೋಷಣೆಯಾ ಗಿದೆ. ಸ್ವಚ್ಛ ನಗರಗಳ ಪಟ್ಟಿಯಲ್ಲಿಯೂ 7ನೇ ಸ್ಥಾನದಲ್ಲಿದೆ. ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಇಲ್ಲಿ ಜಾರಿ ಯಲ್ಲಿದೆ. ಆದರೆ, ಶುಲ್ಕ ನೀಡಲು ಒಪ್ಪದ ಕೆಲವರು ಕಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದು ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ.
ನಗರದ ಪ್ರಮುಖ ಸ್ಥಳಗಳಲ್ಲೇ ಕಸ ಹಾಕುತ್ತಿರುವ ಬಗ್ಗೆ ನಗರಸಭೆ ಸದಸ್ಯರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಕಸವನ್ನು ಬೀದಿಯಲ್ಲಿ ಎಸೆಯುವವರಿಗೆ ದಂಡ ವಿಧಿಸಲು ಈ ಹಿಂದೆ ಯಾವುದೇ ನಿಯಮದಲ್ಲಿಯೂ ಅವಕಾಶ ಇಲ್ಲದ ಕಾರಣ ಅಧಿಕಾರಿಗಳು ಕೈಚೆಲ್ಲಿದ್ದರು.
ಕೇಂದ್ರ ಸರ್ಕಾರದ ಘನ ತ್ಯಾಜ್ಯ ವಿಲೇವಾರಿ ಕಾಯ್ದೆಯು ಪರಿಷ್ಕರಣೆ ಯಾದ ನಂತರ ಕಸ ವಿಲೇವಾರಿಗೆ ಸಂ ಬಂಧಿಸಿದಂತೆ ಬೈಲಾ ರೂಪಿಸಿಕೊಳ್ಳಲು ನಗರ ಸ್ಥಳೀಯ ಸಂಸ್ಥೆಗಳಿಗೆ ಅವಕಾಶ ಸಿಕ್ಕಿದೆ. ಅದನ್ನು ಬಳಸಿಕೊಂಡು ಕ್ರಮಕ್ಕೆ ನಗರಸಭೆ ಮುಂದಾಗಿದೆ. ಈಗಾಗಲೇ ಬೈಲಾ ಸಿದ್ಧವಾಗಿದ್ದು ಅದಕ್ಕೆ ಸಾರ್ವಜನಿ ಕರಿಂದ ಆಕ್ಷೇಪಣೆ ಕರೆಯಲಾಗುತ್ತದೆ. ಜನರ ಆಕ್ಷೇಪಣೆಗಳ ಬಗ್ಗೆ ಚರ್ಚಿಸಿದ ನಂತರ ಅಂತಿಮವಾಗಿ ಅಧಿಸೂಚನೆ ಹೊರಡಿಸಲಾಗುತ್ತದೆ. ಆ ನಂತರ ಈ ನಿಯಮ ಜಾರಿಗೆ ಬರಲಿದೆ.
ಜಾರಿ ಹೇಗೆ?: ಕಸ ಎಸೆಯುವವರಿಗೆ ದಂಡ ವಿಧಿಸಲು ಅವಕಾಶ ಇದ್ದರೂ ಅಂತಹವರನ್ನು ಕಂಡುಹಿಡಿಯುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕಾಗಿ ವಾರ್ಡ್ಗಳ ಮಟ್ಟದಲ್ಲಿ ಜಾಗೃತ ದಳಗಳನ್ನು ರಚಿಸಲಾಗುತ್ತದೆ. ಇದರಲ್ಲಿ ಸ್ಥಳೀಯ ವಾರ್ಡ್ ಸದಸ್ಯರು ಹಾಗೂ ಅಧಿಕಾರಿಗಳು ಸದಸ್ಯರಾಗಿರು ತ್ತಾರೆ. ಈ ತಂಡ ಕಾರ್ಯಾಚರಣೆ ನಡೆಸಿ ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಲಿದೆ. ಸಾರ್ವಜನಿಕರು ಸಹ ಈ ತಂಡಕ್ಕೆ ಮಾಹಿತಿ ನೀಡಬಹು ದಾಗಿದೆ.
ಇದು ಕೇವಲ ವೈಯಕ್ತಿಕ ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿದ್ದಾಗಿರುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ (ಬಲ್ಕ್) ಕಸ ಎಸೆ ಯುವರಿಗೂ ದಂಡ ವಿಧಿಸಲಾಗುತ್ತದೆ. ಹೋಟೆಲ್ ಮಾಲೀಕರು, ತರಕಾರಿ ಅಂಗಡಿ ಮಾಲೀಕರು, ಕಲ್ಯಾಣ ಮಂಟ ಪದವರು ಮುಂತಾದವರು ಹೊರಗೆ ಕಸ ಎಸೆದರೆ ಮೊದಲ ಬಾರಿಗೆ ₹5,000 ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿಗೆ ಇದು ₹10,000 ಆಗಲಿದೆ. ಆ ನಂತರ ಪ್ರತಿ ನಿಯಮ ಉಲ್ಲಂಘನೆಗೂ ಇದು ದುಪ್ಪಟ್ಟಾಗುತ್ತಾ ಹೋಗಲಿದೆ.
ಕಸ ಸಂಗ್ರಹಕಾರರಿಗೆ ಕಸ ನೀಡದೆ ಎಲ್ಲೆಂದರಲ್ಲಿ ಎಸೆಯುವುದು ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ಅನೈ ರ್ಮಲ್ಯ ವಾತಾವರಣ ಸೃಷ್ಟಿಯಾಗುತ್ತಿದೆ. ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆಯುವು ದರಿಂದ ಅದು ಚರಂಡಿ ಸೇರಿ ಕೊಳಚೆ ನೀರಿನ ಹರಿವಿಗೂ ತೊಂದರೆ ಆಗುತ್ತದೆ. ಆ ನೀರು ರಸ್ತೆ ಮೇಲೆ ಹರಿದರೆ ವಾಹನ ಸವಾರರು, ಪಾದಚಾರಿಗಳು ತೊಂದರೆ ಆಗುತ್ತದೆ. ಅಲ್ಲದೆ ರಸ್ತೆಯೂ ಹಾಳಾಗಿ ಹೋಗುತ್ತದೆ. ಇದಕ್ಕೆ ಇತಿಶ್ರೀ ಹಾಡು ವುದು ನಮ್ಮ ಆದ್ಯತೆ ಆಗಿದೆ ಎಂದು ನಗರಸಭೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.