ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬೇಡ; ವಿನಾಯಿತಿ ಇಲ್ಲದೆ ಅನ್ವಯವಾಗಲಿ

Last Updated 22 ಅಕ್ಟೋಬರ್ 2016, 11:32 IST
ಅಕ್ಷರ ಗಾತ್ರ

‘ಹಿಂದೂಗಳಿಗೆ ಏಕರೂಪ ನಾಗರಿಕ ಸಂಹಿತೆ ಯಾಕೆ ಬೇಕು? ಅವರ ಇಚ್ಛೆಯನ್ನು ಇತರರ ಮೇಲೆ ಹೇರುವುದು ಇದರ ಉದ್ದೇಶವೇ?’ ವಿರೋಧ ಪಕ್ಷದಲ್ಲಿರುವ, ತಮ್ಮ ‘ಜಾತ್ಯತೀತತೆ’ಯನ್ನು ಬಹಿರಂಗವಾಗಿ ತೋರಿಸುವ ಹಲವು ರಾಜಕೀಯ ಮುಖಂಡರು ಮತ್ತು ‘ಚಿಂತಕರು’

ಪ್ರಚೋದನಾಕಾರಿಯಾಗಿ ಹೀಗೆ ಪ್ರಶ್ನಿಸುತ್ತಾರೆ. ಅವರು ಈ ಪ್ರಶ್ನೆಯನ್ನು ಸ್ವಲ್ಪ ಭಿನ್ನವಾಗಿ ಕೇಳಿ ಉತ್ತರ ಕಂಡುಕೊಳ್ಳಬೇಕಿತ್ತು- ‘ಭಾರತದ ಎಲ್ಲ ಜನರು ಸಮಾನ ನಾಗರಿಕ ಸಂಹಿತೆಯ ಅಡಿಯಲ್ಲಿ ಯಾಕೆ ಬರಬಾರದು?’ ಇವರಲ್ಲಿ ಹಲವರು ಪ್ರಸಿದ್ಧ ವಕೀಲರು, ವಾಕ್ಚಾತುರ್ಯವುಳ್ಳ ವಕ್ತಾರರು ಮತ್ತು ತರ್ಕ ಪ್ರವೀಣರು. ವಾದ ಮಾಡಿ ಇವರನ್ನು ಗೆಲ್ಲುವುದು ವಿರಳ ಸಾಧ್ಯ.

ಇವರು ನಿಜಕ್ಕೂ ಕೊಂಕು ತರ್ಕದ ಧರ್ಮಾಂಧ ಜಾತ್ಯತೀತವಾದಿಗಳೇ, ಒಂದು ರೀತಿ ‘ಉದಾರವಾದಿ ಸಂಪ್ರದಾಯವಾದಿಗಳೇ’ ಅಥವಾ ಇವರ ಹೇಳಿಕೆಗಳು ಸಂಪೂರ್ಣವಾಗಿ ರಾಜಕೀಯ ಸ್ವರೂಪದವೇ, ವೈಯಕ್ತಿಕವಾಗಿ ನಂಬಿಕೆ ಇಲ್ಲದಿದ್ದರೂ ಮುಸ್ಲಿಮರನ್ನು ಓಲೈಸುವುದಕ್ಕಾಗಿ, ಬಿಜೆಪಿಯನ್ನು ವಿರೋಧಿಸುವ ತಮ್ಮ ಪಕ್ಷದ ಆಣತಿಯಂತೆ ಹೀಗೆ ಮಾಡುತ್ತಿದ್ದಾರೆಯೇ ಎಂಬುದು ಸ್ಪಷ್ಟವಿಲ್ಲ. ಇವರ ವಾದಗಳು ಆ ಕ್ಷಣದ ರಾಜಕೀಯ ಮಾತ್ರ ಆಗಿದ್ದರೆ ಅದಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡುವುದು ಸಾಧ್ಯವಿಲ್ಲ.

ಅದೇ ರೀತಿ, ಸರ್ಕಾರದ ಅಧಿಕಾರ ಸ್ಥಾನಗಳಲ್ಲಿರುವವರು ಮತ್ತು ಆಡಳಿತ ಪಕ್ಷದ ಅಧಿಕೃತ ವಕ್ತಾರರು ಏಕರೂಪ ನಾಗರಿಕ ಸಂಹಿತೆ ಪರವಾಗಿ ಮಾಡುವ ಭಾಷಣಗಳ ಧ್ವನಿ ಮತ್ತು ಶೈಲಿ ಅನಗತ್ಯವಾಗಿ ಕರ್ಕಶ ಮತ್ತು ಆಕ್ರಮಣಕಾರಿ ಆಗಿರುತ್ತವೆ. ಅವರು ಹೀಗೆ ಮಾಡದಿರುವುದಕ್ಕೆ ಸಾಧ್ಯ ಇದೆ. ಅಲ್ಪಸಂಖ್ಯಾತ ಸಮುದಾಯದತ್ತ ಈ ಭಾಷಣಗಳು ಪರೋಕ್ಷವಾಗಿ ಬೆರಳು ತೋರುತ್ತಿರುತ್ತವೆ; ಈ ಸಮುದಾಯ ಜಾತಿ, ಜನಾಂಗ ಅಥವಾ ಲಿಂಗ ತಾರತಮ್ಯ ಇಲ್ಲದೆ ಎಲ್ಲ ಪ್ರಜೆಗಳಿಗೆ ಅನ್ವಯವಾಗುವ ಸಮಾನ ಸಂಹಿತೆಯ ಜಾರಿಗೆ ಅಡ್ಡಿ ಉಂಟು ಮಾಡುತ್ತದೆ.

ಸುಧಾರಣಾ ವಿರೋಧಿ ಪದ್ಧತಿಗಳು, ಪತನದತ್ತ ಸಾಗುತ್ತಿರುವ, ಪ್ರತಿಗಾಮಿಯಾಗಿರುವ ಕಾನೂನುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಭಿನ್ನ ರಾಜಕೀಯ, ಧಾರ್ಮಿಕ ಗುಂಪುಗಳ ಸಂಪ್ರದಾಯವಾದಿ ಮತ್ತು ಧರ್ಮಾಂಧರು ಸಂಘರ್ಷಕ್ಕೆ ಇಳಿಯುವುದನ್ನು ನಿರೀಕ್ಷಿಸಬಹುದು. ಸನ್ನಿಹಿತವಾಗಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಅವರು ತಮ್ಮವರನ್ನು, ತಮ್ಮ ಮತಬ್ಯಾಂಕ್‌ಗಳನ್ನು ಓಲೈಸುವುದಕ್ಕೆ ಸಮಾಜವನ್ನು ವಿಭಜಿಸುತ್ತಾರೆ.

ಸಭ್ಯ, ಸಮಾನತೆ ಮತ್ತು ಅರಿವಿನತ್ತ ಸಾಗಲು ಬಯಸುವ ಸಮಾಜದಲ್ಲಿ ಕಾನೂನುಗಳು ಪ್ರಗತಿಪರವಾಗಿ ತಿದ್ದುಪಡಿಗೊಳ್ಳಲೇಬೇಕು. 150 ವರ್ಷಗಳ ಹಿಂದೆ ನಮ್ಮಲ್ಲಿ ಸತಿ ಮತ್ತು ಬಾಲ್ಯ ವಿವಾಹ ಪದ್ಧತಿ ಇತ್ತು. ಅದೃಷ್ಟವಶಾತ್, ರಾಜಾರಾಮ್ ಮೋಹನ್ ರಾಯ್ ಅವರಂಥ ಶ್ರೇಷ್ಠ ಸುಧಾರಕರಿಂದಾಗಿ ಇವು ನಿರ್ಮೂಲನಗೊಂಡವು. ಸತಿ ಪದ್ಧತಿ ಈಗ ನಮ್ಮಲ್ಲಿ ಇಲ್ಲ, ಆದರೆ ವರದಕ್ಷಿಣೆಗಾಗಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವ ಮತ್ತು ಬಾಲ್ಯ ವಿವಾಹದ ಪ್ರಕರಣಗಳು ಈಗಲೂ ಇವೆ. ಭಾರತ ಗಣರಾಜ್ಯವಾದ ನಂತರ ಜೀತ ಪದ್ಧತಿಯನ್ನು ನಿಷೇಧಿಸಲಾಯಿತು.

ಈ ಹಲವು ಪದ್ಧತಿಗಳಿಗೆ ಕಾನೂನಿನ ಅನುಮತಿ ಇಲ್ಲದಿದ್ದರೂ ದೇಶದ ವಿವಿಧ ಭಾಗಗಳಲ್ಲಿ ಈಗಲೂ ಇವುಗಳನ್ನು ಕಾಣಬಹುದು. ವೈವಿಧ್ಯಮಯವಾಗಿರುವ ಹಿಂದೂ ಸಮುದಾಯಕ್ಕೆ ಏಕರೂಪದ ಪದ್ಧತಿಗಳಾಗಲಿ ಆಚರಣೆಗಳಾಗಲಿ ಇಲ್ಲ. ಮದುವೆ ಮತ್ತು ಮರುಮದುವೆ ಸೇರಿದಂತೆ ತಮ್ಮದೇ ಆದ ನಂಬಿಕೆಗಳು ಮತ್ತು ಪದ್ಧತಿಗಳನ್ನು ಹೊಂದಿರುವ ಅಸಂಖ್ಯ ಜಾತಿಗಳು ಮತ್ತು ಉಪ ಜಾತಿಗಳು ಈ ಸಮುದಾಯಗೊಳಗೆ ಇವೆ. ಈ ಪದ್ಧತಿಗಳು ಗಂಡು ಮತ್ತು ಹೆಣ್ಣಿಗೆ ಭಿನ್ನವಾಗಿವೆ, ಇಂತಹುದೇ ಭಿನ್ನ ಪದ್ಧತಿಗಳು ಆಸ್ತಿ ಹಕ್ಕಿಗೂ ಅನ್ವಯವಾಗುತ್ತವೆ.

ದೇಶದ ಹಲವು ಭಾಗಗಳಲ್ಲಿ ಇಂದಿಗೂ ವಿಧವೆಯರು, ಅತ್ಯಂತ ಎಳೆ ವಯಸ್ಸಿನಲ್ಲಿ ವಿಧವೆಯರಾದವರೂ ಮರುಮದುವೆ ಆಗುವಂತಿಲ್ಲ. ಆದರೆ ಹೆಂಡತಿಯನ್ನು ಕಳೆದುಕೊಂಡ ಗಂಡು, ಹೆಂಡತಿಯ ಅವಿವಾಹಿತ ತಂಗಿಯನ್ನು ಮದುವೆಯಾಗುವ ಪದ್ಧತಿ ಹಲವು ಸಮುದಾಯಗಳಲ್ಲಿ ಇದೆ. ಘೋರ ಜಾತಿ ಪಂಚಾಯಿತಿಗಳು, ಮರ್ಯಾದೆಗೇಡು ಹತ್ಯೆಗಳು, ಆಸ್ತಿ ಹಕ್ಕು ಅಥವಾ ಮದುವೆ ಅಥವಾ ವಿಚ್ಛೇದನ ಮತ್ತು ಜೀವನಾಂಶಕ್ಕೆ ಸಂಬಂಧಿಸಿ ಇರುವ ಹಲವು ಪ್ರಾಚೀನ ಪದ್ಧತಿಗಳಿಂದ ಅತಿ ಹೆಚ್ಚು ನರಳುವವರು ಮಹಿಳೆಯರು.

ಮುಸ್ಲಿಮರಲ್ಲಿ, ಅವರ ಉಪ ಪಂಗಡಗಳಲ್ಲಿ ಮತ್ತು ಇಲ್ಲಿನ ಇತರ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಧರ್ಮ ಮತ್ತು ಅದು ನೀಡುವ ಅಧಿಕಾರದ ಹೆಸರಿನಲ್ಲಿ ನಡೆಸುವ ದಬ್ಬಾಳಿಕೆಯ ಪದ್ಧತಿಗಳು ಮಹಿಳೆಯರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತವಾಗಿಸುತ್ತವೆ. ದೌರ್ಜನ್ಯಕ್ಕೆ ಒಳಗಾಗುವ ಮಹಿಳೆ ಅವಮಾನ, ನಷ್ಟ ಅನುಭವಿಸಬೇಕಾಗುತ್ತದೆ ಮತ್ತು ಅವಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ಮತ್ತು ಘನತೆಯನ್ನು ನಿರಾಕರಿಸಲಾಗುತ್ತದೆ.

‘ಫತ್ವಾ’ ಹೊರಡಿಸುವುದು ಕಾನೂನುಬಾಹಿರ ಎಂದು ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆಗ ಮೌಲ್ವಿಗಳು ಮತ್ತು ಧಾರ್ಮಿಕ ಮುಖಂಡರು, ಸಂವಿಧಾನವು ಖಾತರಿಪಡಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಫತ್ವಾ ಹೊರಡಿಸುವುದು ಸೇರಿದಂತೆ ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಇರಬೇಕು ಎಂದು ಪ್ರತಿಪಾದಿಸಿದರು. ಸೊಸೆಯ ಮೇಲೆ ಮಾವ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ, ಸಂತ್ರಸ್ತೆಯು ಅತ್ಯಾಚಾರ ಎಸಗಿದಾತನ ಜತೆಯೇ ಬದುಕಬೇಕು ಎಂದು ಫತ್ವಾ ಮೂಲಕ ಶಿಕ್ಷೆ ನೀಡಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಫತ್ವಾ ಕಾನೂನು ಬಾಹಿರ ಎಂಬ ತೀರ್ಪು ನೀಡಿತು. ಕಾಮಲಾಲಸೆಯಿಂದ ಸೊಸೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯು ಆಕೆಯ ಜತೆಗೇ ಬದುಕಬೇಕು ಮತ್ತು ಆಕೆಯನ್ನು ನೋಡಿಕೊಳ್ಳಬೇಕು, ಈ ಶಿಕ್ಷೆಯು ಇತರರು ಅತ್ಯಾಚಾರ ಎಸಗುವುದನ್ನು ತಡೆಯುತ್ತದೆ ಎಂಬ ವಿಚಿತ್ರ ವಾದವನ್ನು ಫತ್ವಾ ಹೊರಡಿಸಿದ್ದವರು ಮುಂದಿಟ್ಟಿದ್ದರು. ಶಿಕ್ಷೆಯ ಸ್ವರೂಪವು ಇನ್ನಷ್ಟು ಅತ್ಯಾಚಾರಗಳಿಗೆ ಕಾರಣವಾಗಬಹುದು ಎಂಬ ಅಂಶವನ್ನು ಫತ್ವಾ ಹೊರಡಿಸಿದವರು ಗಣನೆಗೇ ತೆಗೆದುಕೊಂಡಿಲ್ಲ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಸ್ಥಿತಿ ಏನು? ಆಕೆಯ ಅಭಿಪ್ರಾಯವನ್ನು ಯಾರಾದರೂ ಕೇಳಿದ್ದಾರೆಯೇ?

ಜಾತಿ ಪಂಚಾಯಿತಿ ಮತ್ತು ಅತ್ಯಾಚಾರದ ವಿರುದ್ಧ ಕಠಿಣ ಕಾನೂನುಗಳನ್ನು ವಿರೋಧಿಸುವ ಬಿಜೆಪಿಯೂ ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ನಾವು ಆರಿಸಿದ್ದೇವೆ. ಇಂತಹ ಮುಖಂಡರು ಅತ್ಯಾಚಾರಕ್ಕೆ ಸಂಬಂಧಿಸಿ ‘ಹುಡುಗರು ಹುಡುಗರ ಹಾಗೆಯೇ ಇರುತ್ತಾರೆ’ ಎಂಬ ಹೇಳಿಕೆಗಳನ್ನು ನೀಡಿದ್ದಾರೆ.

ಹಿಂದೂಗಳು, ಮುಸ್ಲಿಮರು ಅಥವಾ ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ನಾಗರಿಕ ಸಂಹಿತೆ ಅನ್ವಯವಾಗುವಂತೆ ಮಾಡುವುದು ಯಾರ ಹೊಣೆಯೂ ಅಲ್ಲ. ಫತ್ವಾಗಳು ಅಥವಾ ಶರೀಯತ್‌ ಕೋರ್ಟ್‌ಗಳ ಹಾಗೆಯೇ ಜಾತಿ ಪಂಚಾಯಿತಿ ಕೂಡ ಮಹಿಳೆಯರು ಮತ್ತು ಸಮಾಜದ ಪ್ರಗತಿಗೆ ಮಾರಕ.

ಎಲ್ಲರೂ ಸಮಾನ ನಾಗರಿಕ ಮತ್ತು ದಂಡ ಸಂಹಿತೆ ಅಡಿಯಲ್ಲಿ ಬಂದಾಗ ನ್ಯಾಯದ ಮುಂದೆ ಎಲ್ಲರೂ ಸಮಾನರಾಗುತ್ತಾರೆ. ಒಂದು ದೇಶವು ತನ್ನ ಮಹಿಳೆಯರನ್ನು ಸಂರಕ್ಷಿಸಿ, ಅವರಿಗೆ ಕ್ರಿಯಾಶೀಲ ಮತ್ತು ಮುಕ್ತ ಜೀವನ ನಡೆಸಲು ಬೇಕಾದ ಸಂಪೂರ್ಣ ಸ್ವಾತಂತ್ರ್ಯ, ಅವಕಾಶಗಳನ್ನು ಒದಗಿಸಬೇಕು.  ಇಲ್ಲವಾದರೆ ಅವರು ತಮ್ಮ ಸಮಾಜದ ಪುರುಷರು ನಡೆಸಬಹುದಾದ ಬರ್ಬರ ಕೃತ್ಯಗಳ ಭಯದಲ್ಲಿ ಬದುಕಬೇಕಾಗುತ್ತದೆ.

ಈ ಉಪಕ್ರಮವನ್ನು ಮುಂದಕ್ಕೆ ಒಯ್ಯುವುದಕ್ಕೆ ಈಗಿನ ಸರ್ಕಾರಕ್ಕೆ ಅವಕಾಶ ಇದೆ. ಅದಕ್ಕೆ ಮೊದಲು ಈ ವಿಚಾರವನ್ನು ರಾಜಕೀಯದಿಂದ ಮುಕ್ತಗೊಳಿಸಲು ತನ್ನದೇ ಪಕ್ಷದ ತೀವ್ರವಾದಿ ಗುಂಪುಗಳನ್ನು ದೂರ ಇರಿಸಬೇಕು. ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಲ್ಲಿ, ಪ್ರಜಾಸತ್ತಾತ್ಮಕ ಜಗತ್ತಿನ ಅತ್ಯುತ್ತಮ ಅಂಶಗಳ ಜತೆಗೆ ನಮ್ಮದೇ ಕಾನೂನುಗಳ ಅಂಶಗಳನ್ನೂ ಸೇರಿಸಿಕೊಂಡು ಅತ್ಯುತ್ತಮವಾದ ಸಮಾನ ನಾಗರಿಕ ಸಂಹಿತೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕು. ಯಾವುದೇ ವಿನಾಯಿತಿ ಇಲ್ಲದೆ ಎಲ್ಲ ರಾಜ್ಯಗಳಿಗೂ ಇದು ಅನ್ವಯವಾಗಬೇಕು.

ಹಾಗಾದಾಗ ಮಾತ್ರ ವ್ಯಾಪಕ ಅರ್ಥದಲ್ಲಿ ಭಾರತ ನಿಜವಾದ ಅಭಿವೃದ್ಧಿ ಹೊಂದುತ್ತದೆ. ಇಂಥ ವಾತಾವರಣದಲ್ಲಿ ಮಾತ್ರ ಗಂಡು, ಹೆಣ್ಣಿನ ಕ್ರಿಯಾಶೀಲ ಚೈತನ್ಯ ಸಮಾನವಾಗಿ ಹೊರ ಹೊಮ್ಮುವುದಕ್ಕೆ ಸಾಧ್ಯ.

ವಲಸಿಗರ ದೇಶ!
ನಿಜವಾದ ಅಮೆರಿಕನ್ನರು ಎಂದು ಕರೆಯಲಾಗುವ, ಯುರೋಪ್‌ನಿಂದ ಮೊದಲಿಗೆ ಅಮೆರಿಕಕ್ಕೆ ವಲಸೆ ಹೋಗಿ ನೆಲೆಯಾದವರಿಗಿಂತ ನಂತರ ವಲಸೆ ಹೋದವರ ಸಂಖ್ಯೆಯೇ ಅಮೆರಿಕದಲ್ಲಿ ಈಗ ಹೆಚ್ಚು. ಹಾಗಾಗಿ ಅಮೆರಿಕ ಈಗ ನಿಜ ಅರ್ಥದಲ್ಲಿ ಒಂದು ವಲಸಿಗರ  ದೇಶ. ಹಾಗಾಗಿ ಅಮೆರಿಕ ಎಲ್ಲ ಆಧುನಿಕ ನಾಗರಿಕತೆಗಳು ಸಂಯೋಜನೆಗೊಂಡ ತಾಣ ಮತ್ತು ಜನಾಂಗೀಯ ದೃಷ್ಟಿಯಲ್ಲಿ ಬೇರೆ ಯಾವುದೇ ದೇಶಕ್ಕಿಂತ ಹೆಚ್ಚು ವೈವಿಧ್ಯ ಇಲ್ಲಿ ಇದೆ. ಅಮೆರಿಕದಲ್ಲಿ ಸಮಾನ ನಾಗರಿಕ ಸಂಹಿತೆ ಮತ್ತು ಒಂದೇ ದಂಡ ಸಂಹಿತೆ ಇದೆ.

ಅಮೆರಿಕ ಸ್ವಾತಂತ್ರ್ಯಗೊಂಡ ನಂತರದ ಎರಡು ಶತಮಾನಗಳಿಗೂ ಹೆಚ್ಚಿನ ಅವಧಿಯಲ್ಲಿ ಇಲ್ಲಿನ ನ್ಯಾಯಾಂಗ ವ್ಯವಸ್ಥೆ ಮತ್ತು ನಾಗರಿಕ ಸಂಹಿತೆ ರೂಪುಗೊಂಡಿವೆ. ಕೆಲವೇ ದಶಕಗಳ ಹಿಂದೆ ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ, ಗುಲಾಮಿ ಪದ್ಧತಿ ಅಸ್ತಿತ್ವದಲ್ಲಿತ್ತು ಮತ್ತು ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್‌ ಅವರೂ ಆಫ್ರಿಕಾದ ಗುಲಾಮರನ್ನು ಹೊಂದಿದ್ದರು ಎಂಬುದನ್ನು ಈಗ ನಂಬುವುದಕ್ಕೆ ಸಾಧ್ಯವೇ?

ವಿದೇಶಗಳಲ್ಲಿ...
ನನ್ನ ಮಗಳು ಫ್ರೆಂಚ್‌ ಹುಡುನೊಬ್ಬನನ್ನು ಮದುವೆಯಾಗಿದ್ದಾಳೆ. ಅವರು ಎರಡು ರೀತಿಯಲ್ಲಿ ಮದುವೆಯಾದರು. ಒಂದು ಹಿಂದೂ ಶೈಲಿಯಾದರೆ ಇನ್ನೊಂದು ಕ್ರೈಸ್ತ ಪದ್ಧತಿ. ಅವರು ಈಗ ಫ್ರಾನ್ಸ್‌ನಲ್ಲಿ ನೆಲೆಸಿದ್ದು, ಖಾಸಗಿಯಾಗಿ ತಮಗೆ ಬೇಕಿರುವ ಧರ್ಮವನ್ನು ಅನುಸರಿಸಬಹುದು. ಆದರೆ ಫ್ರಾನ್ಸ್‌ನ ಎಲ್ಲ ಪ್ರಜೆಗಳು ಮತ್ತು ವಲಸಿಗರಿಗೆ ಅನ್ವಯವಾಗುವ ಸಮಾನ ನಾಗರಿಕ ಸಂಹಿತೆ ಅವರಿಗೆ ಅನ್ವಯಿಸುತ್ತದೆ. ಅಲ್ಜೀರಿಯಾ, ಸೆನೆಗಲ್‌, ಮೌರಿಟೇನಿಯಾ, ಫ್ರೆಂಚ್‌ ಗಿನಿಯಾದಲ್ಲಿರುವ ಲಕ್ಷಾಂತರ ಮುಸ್ಲಿಮರು, ವಿಯೆಟ್ನಾಂನಲ್ಲಿರುವ ಬೌದ್ಧರು, ರೊಮೇನಿಯಾ ಮತ್ತು ಪೂರ್ವ ಯುರೋಪ್‌ನ ದೇಶಗಳ ಜಿಪ್ಸಿಗಳು ಮತ್ತು ಇಲ್ಲಿ ನೆಲೆಸಿರುವ ಮೂಲ ನಿವಾಸಿಗಳಾದ ಬಿಳಿಯ ಕ್ರೈಸ್ತರೆಲ್ಲರಿಗೂ ಸಮಾನ ನಾಗರಿಕ ಸಂಹಿತೆಯೇ ಅನ್ವಯವಾಗುತ್ತದೆ. ಯುರೋಪ್‌ನ ಇತರ ದೇಶಗಳಲ್ಲಿಯೂ ಎಲ್ಲ ನಾಗರಿಕರಿಗೆ ಅನ್ವಯವಾಗುವ ಸಮಾನ ನಾಗರಿಕ ಸಂಹಿತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT