ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದನ್ನು ಖಂಡಿಸಿ ಆಡುಗೋಡಿಯ ಬಾಷ್ ಕಂಪೆನಿ ಎದುರು 432 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು, ದಯಾಮರಣ ಕೋರಿ ರಾಷ್ಟ್ರಪತಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
‘ಸುಮಾರು ವರ್ಷಗಳಿಂದ 263 ಮಂದಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2017ರ ಹೊತ್ತಿಗೆ ಎಲ್ಲರನ್ನೂ ಕಾಯಂ ಮಾಡಿಕೊಳ್ಳುವುದಾಗಿ ಕಂಪೆನಿ ಭರವಸೆ ನೀಡಿತ್ತು. ಆದರೆ, 2015ರ ಆಗಸ್ಟ್ 17ರಂದು ಎಲ್ಲರನ್ನೂ ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ’ ಎಂದು ಕಾರ್ಮಿಕರು ದೂರಿದರು.
‘ಹಲವು ಬಾರಿ ಮಾತುಕತೆ ನಡೆಸಿದರೂ ಕಂಪೆನಿಯವರು ತಮ್ಮ ನಿಲುವು ಸಡಿಲಿಸುತ್ತಿಲ್ಲ. ಈ ಬಗ್ಗೆ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಅದರಿಂದಾಗಿ ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.