ಉಡುಪಿ: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ಪಡೆದುಕೊಂಡು ಅದನ್ನು ಜನರಿಗೆ ತಿಳಿಸಬೇಕು ಎಂದು ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಜನ– ಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಸವ ವಸತಿ ಯೋಜನೆಯಲ್ಲಿ ₹1.20 ಲಕ್ಷ ಹಾಗೂ ನರೇಗಾ ಯೋಜನೆಯಲ್ಲಿ ₹20 ಪಡೆದ ನಂತರ ಶೌಚಾಲಯ ನಿರ್ಮಾಣಕ್ಕೆ ಅನುದಾನ ಪಡೆಯಲು ಸಾಧ್ಯವಿದೆಯೇ? ಎಂಬ ಪ್ರಶ್ನೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಅವರು ತಕ್ಷಣಕ್ಕೆ ಉತ್ತರ ನೀಡಲಿಲ್ಲ. ಆ ನಂತರ ಆ ಬಗ್ಗೆ ಮಾಹಿತಿ ಪಡೆದ ಅವರು ಶೌಚಾಲಯ ನಿರ್ಮಾ ಣಕ್ಕೆ ಸಹ ಅನುದಾನ ಪಡೆಯಲು ಅವಕಾಶ ಇದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ಇರುವುದು ಜನರಿಗಾಗಿ. ಜನರು ನೀಡುವ ಹಣದಿಂದಲೇ ಯೋಜನೆ ಗಳನ್ನು ಜಾರಿ ಮಾಡಲಾಗುತ್ತದೆ. ಆದ್ದರಿಂದ ಯೋಜನೆಗಳ ಬಗ್ಗೆ ಪರಿ ಪೂರ್ಣ ಮಾಹಿತಿ ಇರಬೇಕು. ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಅದನ್ನು ಜನರಿಗೆ ತಿಳಿಸಬೇಕು ಎಂದರು.
ಎಲ್ಲ ಯೋಜನೆಗಳು ಫಲಾನುಭವಿ ಗಳಿಗೆ ಪೂರಕವಾಗಿರಬೇಕು. ಇಲ್ಲದಿದ್ದ ಸಂದರ್ಭದಲ್ಲಿ ಅದನ್ನು ಗಮನಕ್ಕೆ ತಂದರೆ ಸಂಬಂಧಿಸಿದವರೊಂದಿಗೆ ಆ ಬಗ್ಗೆ ಮಾತನಾಡಿ ಮಾರ್ಪಾಡು ಮಾಡ ಲಾಗುವುದು. ಒಟ್ಟಾರೆ ಯೋಜನೆ ಗಳಿಂದ ಜನರಿಗೆ ಲಾಭವಾಗಬೇಕು ಮತ್ತು ತ್ವರಿತವಾಗಿ ಸಹ ಅವು ಸಿಗಬೇಕು ಎಂದರು.
ಯೋಜನೆಗಳ ಅವಹೇಳನ ಸಲ್ಲದು: ಅನ್ನ ಭಾಗ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನು ಟೀಕಿಸುವ ವರಿಗೆ ತಿರುಗೇಟು ನೀಡಲು ಪ್ರಮೋದ್ ಅವರು ‘ಜನ– ಮನ’ ವೇದಿಕೆಯನ್ನು ಬಳಸಿಕೊಂಡರು. ಅಕ್ಕಿ ನೀಡಿದರೆ ಜನರು ಸೋಮಾರಿಗಳಾಗುತ್ತಾರೆ. ಸೌಲಭ್ಯಗಳನ್ನು ನೀಡುವುದು ಸರಿಯಲ್ಲ ಎಂದು ಹಲವರು ಹೇಳುತ್ತಾರೆ. ಜನರಿಗೆ ಯೋಜನೆಗಳ ಅಗತ್ಯ ಎಷ್ಟಿದೆ ಎಂಬುದು ಈ ಕಾರ್ಯಕ್ರಮದಿಂದ ಗೊತ್ತಾಗಿದೆ. ನಮ್ಮ ಸರ್ಕಾರ ಬಡವರ ಪರವಾಗಿದೆ ಎಂದು ಹೇಳಿದರು
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ವಾರ್ತಾಧಿಕಾರಿ ರೋಹಿಣಿ ಇದ್ದರು.
**
ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ನೀಡಬಾರದು ಎಂದು ಕೇಂದ್ರ ಹೇಳಿದೆ. ಆದರೂ ಸೀಮೆಎಣ್ಣೆ ನೀಡಲಾಗುತ್ತಿದೆ. ಪರವಾನಗಿಗಿಂತ ಹೆಚ್ಚು ದೋಣಿಗಳಿವೆ. ಆದ್ದರಿಂದ ಪ್ರಮಾಣ ಕಡಿಮೆಯಾಗುತ್ತಿದೆ.
-ಪ್ರಮೋದ್ ಮಧ್ವರಾಜ್
ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.